1 ರಿಂದ 5ನೇ ತರಗತಿ ಆರಂಭಿಸಲು ಸರ್ಕಾರದ ಗ್ರೀನ್ ಸಿಗ್ನಲ್; ಮಾರ್ಗಸೂಚಿ ಪಾಲನೆ ಕಡ್ಡಾಯ!
ಬೆಂಗಳೂರು, ಅ. 18: ಕರ್ನಾಟಕದಲ್ಲಿ ಅಕ್ಟೋಬರ್ 25ರಿಂದ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. 1 ರಿಂದ 5ನೇ ತರಗತಿ ಮಕ್ಕಳಿಗೆ ನೇರ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ಅದಕ್ಕೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಇದೇ ವಿಚಾರವಾಗಿ ಸೋಮವಾರ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಜ್ಞರ ಸಮಿತಿ ಶಾಲಾ ಆರಂಭಿಸಲು ಬಗ್ಗೆ ವರದಿ ಕೊಟ್ಟಿದೆ. ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದಯುಕೊಳ್ಳುತ್ತೇವೆ. ಶಾಲೆ ಆರಂಭ ಮಾಡಬೇಕಾ? ಎಂದು ತೀರ್ಮಾನ ಮಾಡುತ್ತೇವೆ." ಎಂದು ಹೇಳಿಕೆ ನೀಡಿದ್ದರು.
ಇದೀಗ ಕೋವಿಡ್ ತಜ್ಞರ ಸಮಿತಿ ಕೊಟ್ಟಿದ್ದ ವರದಿ ಆಧರಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಇದೇ ಅಕ್ಟೋಬರ್ 25ರಿಂದ ಶಾಲೆ ಆರಂಭಿಸಲು ಅನುಮತಿ ಕೊಟ್ಟಿದ್ದಾರೆ. ಆದರೆ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ.
ಈಗಾಗಲೇ ಶಿಕ್ಷಣ ಇಲಾಖೆ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳೊಂದಿಗೆ, ತರಗತಿಗಳಲ್ಲಿ ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ. ಶಾಲಾ ಕೊಠಡಿಯ ಒಟ್ಟು ಸಾಮರ್ಥದಲ್ಲಿ ಶೇಕಡಾ 50ರಷ್ಟು ವಿದ್ಯಾರ್ಥಿಗಳ ಮಾತ್ರ ಹಾಜರಿರುವಂತೆ ಸೂಚಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಒದಗಿಸಬೇಕು. ಅದರೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಯ ಮಧ್ಯೆ ಕನಿಷ್ಠ 1 ಮೀಟರ್ ದೈಹಿಕ ಅಂತರವಿರಬೇಕು ಎಂದು ಸೂಚಿಸಲಾಗಿದೆ.
ಬಹುಮುಖ್ಯವಾಗಿ ಶಾಲೆ ಆರಂಭ ಹಾಗೂ ಮುಕ್ತಾಯದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜನಸಂದಣಿ ಆಗದಂತೆ ಎಚ್ಚರವಹಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ. ಮಕ್ಕಳು ಉಪಯೋಗಿಸುವ ಶೌಚಾಲಯ ಹಾಗೂ ಕೊಠಡಿಗಳನ್ನು ಪ್ರತಿದಿನ ಸ್ಯಾನಿಟೈಸ್ ಮಾಡುವಂತೆ ಸೂಚಿಸಲಾಗಿದೆ. ಜೊತೆಗೆ 50 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಶಿಕ್ಷಕರು ಕಡ್ಡಾಯವಾಗಿ ಫೇಸ್ಶೀಲ್ಡ್ ಉಪಯೋಗಿಸಬೇಕು. ಹಾಗೂ ಕೋವಿಡ್ ಎರಡೂ ಲಸಿಕೆಗಳನ್ನು ಹಾಕಿಸುಕೊಂಡಿರುವವರು ಮಾತ್ರ ಮಕ್ಕಳಿಗೆ ಪಾಠ ಮಾಡಬೇಕು ಎಂದು ಸೂಚಿಸಲಾಗಿದೆ.
ಉಳಿದಂತೆ ಪ್ರಾಥಮಿಕ ಶಿಕ್ಷಣ ಇಲಾಖೆಯು ವಿಸ್ತ್ರತವಾಗಿ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದ್ದಾರೆ.ರಾಜ್ಯದಲ್ಲಿ ಈಗಾಗಲೇ ಪ್ರೌಢಶಾಲೆ ಹಾಗೂ ಕಾಲೇಜು ಆರಂಭಿಸಲಾಗಿದೆ. ಆದರೆ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಟ್ಟಿರಲಿಲ್ಲ. ಇದೀಗ ಆ ತರಗತಿಗಳನ್ನು ಆರಂಭಿಸಲು ಸರ್ಕಾರ ತೀರ್ಮಾನ ಮಾಡಿದೆ.
Recommended Video
ಈ ಮಧ್ಯೆ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಆಗಬಹುದು ಎಂಬ ಎಚ್ಚರಿಕೆಯನ್ನೂ ತಜ್ಞರು ಕೊಟ್ಟಿದ್ದಾರೆ. ಹೀಗಾಗಿ ಶಾಲೆಗಳನ್ನು ಆರಂಭಿಸುವ ಮೊದಲು ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಿಸುವುದು ಸೂಕ್ತ ಎನ್ನಲಾಗಿತ್ತು. ಈಗಾಗಲೇ ಪ್ರೌಢ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸಿರುವ ರಾಜ್ಯ ಸರ್ಕಾರ 18 ಮೀರಿದವರಿಗೆ ಕೋವಿಡ್ ಲಸಿಕೆ ಹಾಕಿಸುತ್ತಿದೆ.
ಒಂದರಿಂದ ಐದನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುತ್ತಿರುವ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆಗೆ ಆದೇಶ ಮಾಡಿದೆ. ಮಾರ್ಗಸೂಚಿ ಪಾಲನೆಯಲ್ಲಿ ಯಾವುದೇ ನಿರ್ಲಕ್ಷ ಸಲ್ಲದು ಎಂದು ಸೂಚಿಸಿದೆ. ಆದರೆ ಚಿಕ್ಕ ಮಕ್ಕಳು ಹೇಗೆ ಮಾರ್ಗಸೂಚಿ ಪಾಲನೆ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ ಶಾಲೆ ಆರಂಭವಾದ ಬಳಿಕ ಶಾಲಾ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಮನೆಯಲ್ಲಿರುವ ಮಕ್ಕಳಿಗೆ ಕೋವಿಡ್ ಆತಂಕದ ಮಧ್ಯೆ ತರಗತಿಗಳು ಆರಂಭವಾಗುತ್ತಿವೆ.
ಇದೇ ವೇಳೆ ನರ್ಸರಿ ಮಕ್ಕಳಿಗೆ ತರಗತಿ ಆರಂಭಿಸಲು ಸರ್ಕಾರ ಅನುಮತಿ ಕೊಟ್ಟಿಲ್ಲ. 1 ರಿಂದ 5ನೇ ತರಗತಿ ಮಕ್ಕಳಿಗೆ ತರಗತಿ ಆರಂಭಿಸಿ, ಅದನ್ನು ನೋಡಿಕೊಂಡು ಮುಂದಿನ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿಯಿದೆ.