ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳು ಹೀಗೂ ಮಾಡಬಹುದು...
Recommended Video
ಬೆಂಗಳೂರು, ಜುಲೈ 17: ಅತೃಪ್ತ ಶಾಸಕರಿಗೆ ವಿಪ್ ಜಾರಿ ಅನ್ವಯ ಆಗುವುದಿಲ್ಲ. ಅವರು ಬಯಸಿದ್ದರೆ ಮಾತ್ರ ಕಲಾಪಕ್ಕೆ ಹಾಜರಾಗಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ವಿಶ್ವಾಸಮತ ಯಾಚನೆ ಮಾಡುವ ಮೂಲಕ ಸದನದಲ್ಲಿ ತಮಗೆ ಎರಡೂ ಪಕ್ಷಗಳ ಶಾಸಕರ ಬೆಂಬಲ ಇದೆ. ಬಹುಮತ ಇರುವುದರಿಂದ ಸರ್ಕಾರ ಮುಂದುವರಿಸಲಿದ್ದೇನೆ ಎಂಬುದನ್ನು ಸಾಬೀತುಪಡಿಸುವುದು ಅಗತ್ಯವಾಗಿದೆ. ಆದರೆ, ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ನ ಅತೃಪ್ತ ಶಾಸಕರು ತಾವು ಯಾವ ಕಾರಣಕ್ಕೂ ಅಧಿವೇಶನಕ್ಕೆ ಹಾಜರಾಗುವುದಿಲ್ಲ ಮತ್ತು ಈ ಸರ್ಕಾರವನ್ನು ಬೆಂಬಲಿಸುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ.
ಹೇಗಾದರೂ ಮಾಡಿ ಸದನದಲ್ಲಿ ಬಹುಮತ ಸಾಬೀತುಪಡಿಸುವ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳಲು ಎರಡೂ ಪಕ್ಷಗಳ ಮುಖಂಡರು ತಂತ್ರಗಳನ್ನು ಹುಡುಕುತ್ತಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ಅನ್ವಯ ಆಗುವುದಿಲ್ಲ ಎಂದಿದ್ದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಉಳಿದ ಶಾಸಕರು ಕೈತಪ್ಪಿ ಹೋಗದಂತೆ ತಡೆಯಲು ಪುನಃ ವಿಪ್ ಜಾರಿ ಮಾಡಿವೆ.
ಕಾಂಗ್ರೆಸ್ ಶಾಸಕರ ಜೊತೆ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಸಭೆ
ಈ ನಡುವೆ ಸುಪ್ರೀಂಕೋರ್ಟ್ ಆದೇಶವನ್ನೇ ಮುಂದಿಟ್ಟುಕೊಂಡು ಪ್ರತಿತಂತ್ರ ಹೆಣೆಯುವ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳು ಮುಂದಾಗಿವೆ ಎಂದು ಕಾಂಗ್ರೆಸ್ನ ಮೂಲಗಳು ತಿಳಿಸಿವೆ.
ಗುರುವಾರ ನಡೆಯುವ ವಿಶ್ವಾಸಮತಯಾಚನೆಗೂ ಮುನ್ನ ಕೊನೆಯ ಕ್ಷಣದ ತಂತ್ರವನ್ನು ದೋಸ್ತಿ ಸರ್ಕಾರ ನಡೆಸಲಿದೆ ಎನ್ನಲಾಗಿದೆ.
ವಿಪ್ ಬಗ್ಗೆ ಸ್ಪಷ್ಟನೆ ನೀಡಿ
ಮೂಲಗಳ ಪ್ರಕಾರ, ಕಾಂಗ್ರೆಸ್ ಗುರುವಾರ ಬೆಳಿಗ್ಗೆ ಸುಪ್ರೀಂಕೋರ್ಟ್ಗೆ ಅರ್ಜಿಯೊ೦ದನ್ನು ಸಲ್ಲಿಸಲು ಸಿದ್ಧತೆ ನಡೆಸಿದೆ. ವಿಪ್ ಕುರಿತಂತೆ ಸುಪ್ರೀಂಕೋರ್ಟ್ನ ಆದೇಶದಲ್ಲಿ ಸ್ಪಷ್ಟೀಕರಣ ಪಡೆಯಲು ಅದು ಬಯಸಿದೆ. ವಿಪ್ ಜಾರಿ ಮಾಡುವುದು ಸಿಎಲ್ಪಿ ನಾಯಕರ ವಿಶೇಷ ಅಧಿಕಾರವಾಗಿದೆ. ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸಲಿವೆ.
ವಿಶ್ವಾಸಮತಯಾಚನೆ : ಸದನದಲ್ಲಿ ಏನೆಲ್ಲ ಘಟನೆಗಳು ನಡೆಯಲಿವೆ?
ವಿಸ್ವಾಸಮತ ನಿರ್ಣಯದ ಚರ್ಚೆ
ಇದೇ ಸಂದರ್ಭದಲ್ಲಿ ಗುರುವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ. ಇದರ ಅರ್ಥ, ದಿನದ ಕೊನೆಯಲ್ಲಿ ಇದರ ಬಗ್ಗೆ ಅಂತಿಮ ಫಲಿತಾಂಶ ಬರುತ್ತದೆ ಎನ್ನಲಾಗುವುದಿಲ್ಲ. ವಿಶ್ವಾಸಮತ ನಿರ್ಣಯದ ಕುರಿತಂತೆ ಚರ್ಚೆಯು ಇನ್ನೂ ಹಲವು ದಿನಗಳ ಕಾಲ ವಿಸ್ತರಣೆಯಾಗಬಹುದು. ಇದರಿಂದ ಮೊದಲು ವಿಶ್ವಾಸಮತ ಯಾಚನೆ ಮಾಡಿ ಎಂದು ಬಿಜೆಪಿ ಪಟ್ಟು ಹಿಡಿದಿದೆ. ಆದರೆ, ಸರ್ಕಾರ ಅದರಿಂದ ಪಾರಾಗಲು ನಿರ್ಣಯದ ಚರ್ಚೆಯನ್ನು ಮುನ್ನೆಲೆಗೆ ತರಲು ಯೋಜನೆ ರೂಪಿಸಿದೆ.
ಶಾಸಕ ರಾಮಲಿಂಗಾ ರೆಡ್ಡಿ ಬಲ
ಪಕ್ಷದ ಹಿರಿಯ ಮುಖಂಡ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಅವರು ಮರಳಿ ಬೆಂಬಲ ನೀಡುವುದಾಗಿ ಭರವಸೆ ನೀಡಿರುವುದರಿಂದ ಆಡಳಿತ ಪಕ್ಷಗಳಲ್ಲಿ ಗುರುವಾರದ ವಿಶ್ವಾಸಮತವನ್ನು ಗೆಲ್ಲುವ ಆತ್ಮವಿಶ್ವಾಸ ಪಡೆದುಕೊಂಡಿವೆ. ರಾಮಲಿಂಗಾ ರೆಡ್ಡಿ ಅವರು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇ ಹೊರತು ಪಕ್ಷಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿಯೂ ಹೇಳಿದ್ದರು. ಅವರು ರಾಜೀನಾಮೆ ಹಿಂದಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದೂ ವರದಿಯಾಗಿದೆ.
ಸರ್ಕಾರ ಸುಲಭವಾಗಿ ಬೀಳೊಲ್ಲ
ನಾಳೆ ವಿಶ್ವಾಸಮತ ಯಾಚನೆ ನಡೆದು ಸರ್ಕಾರಕ್ಕೆ ಬಹುಮತ ಇಲ್ಲದ ಕಾರಣ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ರೂಪಿಸಿರುವ ತಂತ್ರದ ಪ್ರಕಾರ ವಿಶ್ವಾಸಮತ ಯಾಚನೆ ನಡೆದರೂ ಸರ್ಕಾರ ಬೀಳುವುದಿಲ್ಲ. ಅಲ್ಲದೆ, ಅದಕ್ಕೆ ಸುಪ್ರೀಂಕೋರ್ಟ್ ಮೂಲಕ ಕಾನೂನಾತ್ಮಕ ತಡೆ ನೀಡುವುದರ ಮೂಲಕ ಇನ್ನಷ್ಟು ಸಮಯ ಸರ್ಕಾರವನ್ನು ಹೀಗೆಯೇ ತಳ್ಳಬಹುದು. ಇದರಿಂದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯಾವಕಾಶ ಸಿಗಲಿದೆ ಎನ್ನುವುದು ಮೈತ್ರಿ ಪಕ್ಷಗಳ ಲೆಕ್ಕಾಚಾರ ಎನ್ನಲಾಗಿದೆ.