ಅತೃಪ್ತರನ್ನು ಅನರ್ಹಗೊಳಿಸುವುದನ್ನೇ ಬಿಜೆಪಿ ಕಾಯುತ್ತಿದೆ: ಕಾಂಗ್ರೆಸ್ ಆರೋಪ
ಬೆಂಗಳೂರು, ಜುಲೈ 15: ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಬಂಡಾಯದಿಂದ ಕಂಗೆಟ್ಟಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ವಿಶ್ವಾಸಮತ ಯಾಚನೆಮಾಡುವುದಾಗಿ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ 11 ಗಂಟೆಗೆ ಅವರು ವಿಸ್ವಾಸಮತ ಯಾಚನೆ ಮಾಡಲಿದ್ದು, ಸಮ್ಮಿಶ್ರ ಸರ್ಕಾರ ಉಳಿಯಲಿದೆಯೇ ಅಥವಾ ಉರುಳಲಿದೆಯೇ ಎಂಬ ಸುದೀರ್ಘ ಪ್ರಹಸನಕ್ಕೆ ಉತ್ತರ ದೊರಕಲಿದೆ. ಈ ನಡುವೆ ಗುರುವಾರದ ವಿಶ್ವಾಸಮತ ಯಾಚನೆಯವರೆಗೂ ಕಲಾಪ ನಡೆಸದಂತೆ ಬಿಜೆಪಿ ಆಗ್ರಹಿಸಿತ್ತು. ಅಲ್ಲಿಯವರೆಗೂ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದೂ ಅದು ತಿಳಿಸಿತ್ತು.
ಬಿಜೆಪಿಯ ಒತ್ತಡ ತಂತ್ರಕ್ಕೆ ಮಣಿದ ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸಮತ ಯಾಚನೆ ನಡೆಯುವ ಗುರುವಾರದವರೆಗೂ ಕಲಾಪ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಒತ್ತಡಕ್ಕೆ ಮಣಿದ ಸ್ಪೀಕರ್: ಗುರುವಾರಕ್ಕೆ ಕಲಾಪ ಮುಂದೂಡಿಕೆ
'ವಿಶ್ವಾಸಮತ ಯಾಚನೆಗೆ ಸಿದ್ಧರಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೊದಲ ದಿನವೇ ತಿಳಿಸಿದ್ದರು. ಈ ಬಗ್ಗೆ ಕಲಾಪ ಸಮಿತಿ ಸಭೆಯಲ್ಲಿ ಚರ್ಚಿಸಲು ಪ್ರಸ್ತಾಪಿಸಲಾಗಿತ್ತು. ಆದರೆ ಅಂದು ವಿರೋಧಪಕ್ಷದವರು ಸಭೆಗೆ ಹಾಜರಾಗದ ಕಾರಣ ಅವರನ್ನು ಸಂಪರ್ಕಿಸಿ ದಿನಾಂಕ ನಿಗದಿಪಡಿಸಲಾಗಿದೆ' ಎಂದು ಸಿದ್ದರಾಮಯ್ಯ ಹೇಳಿದರು.
ಅತೃಪ್ತರು ಹಾಜರಾಗುತ್ತಾರೆ
ವಿಶ್ವಾಸ ಮತ ಯಾಚನೆಗೆ ನಾವು ಸಿದ್ಧ. ವಿಪ್ ಇರುವುದರಿಂದ ಯಾರೂ ಉಲ್ಲಂಘನೆ ಮಾಡುವುದಿಲ್ಲ. ಎಲ್ಲರೂ ಸದನಕ್ಕೆ ಹಾಜರಾಗುತ್ತಾರೆ ಎಂದು ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಗುರುವಾರ ಸಿಎಂ ವಿಶ್ವಾಸಮತ ಯಾಚನೆ: ಸರ್ಕಾರದ ಭವಿಷ್ಯ ಅಂದೇ ನಿರ್ಧಾರ
ಅತೃಪ್ತರು ಎಚ್ಚರಿಕೆಯಿಂದ ಇರಬೇಕು
ಶಾಸಕರನ್ನು ಅನರ್ಹಗೊಳಿಸುವುದು ನನಗೆ ಇಷ್ಟವಿಲ್ಲ. ಬಿಜೆಪಿಗೆ ಹೇಗಾದರೂ ಮಾಡಿ ಅಧಿಕಾರ ಹಿಡಿಯುವುದೊಂದೇ ಗುರಿಯಾಗಿದೆ. ಬಿಜೆಪಿ ಬಗ್ಗೆ ಅತೃಪ್ತರು ಎಚ್ಚರಿಕೆಯಿಂದ ಇರಬೇಕು. ಅತೃಪ್ತ ಶಾಸಕರನ್ನು ಅನರ್ಹಗೊಳಿಸುವುದನ್ನೇ ಬಿಜೆಪಿ ಕಾಯುತ್ತಿದೆ. ಬಿಜೆಪಿಯ ಕೇಂದ್ರ ನಾಯಕರದ್ದೂ ಇದೇ ಉದ್ದೇಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಸ್ಪೀಕರ್ ನಿರ್ಧಾರ ಸಂತೋಷ ತಂದಿದೆ
ಕುಮಾರಸ್ವಾಮಿ ಅವರು ಗುರುವಾರ ವಿಶ್ವಾಸ ಕಳೆದುಕೊಳ್ಳುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು. ಸ್ಪೀಕರ್ ಕೊಠಡಿಯಲ್ಲಿ ಬಹಳ ಸೌಹಾರ್ದಯುತ ಮಾತುಕತೆ ನಡೆಯಿತು. ಮೊನ್ನೆ ನಡೆದ ಸಭೆಗೆ ಬಂದಿದ್ದರೆ ಅಂದೇ ವಿಶ್ವಾಸಮತದ ಸಮಯ ನಿಗದಿಮಾಡುತ್ತಿದ್ದೆವು ಎಂದು ಸ್ವತಃ ಸ್ಪೀಕರ್ ಹೇಳಿದರು. ಆದರೆ, ನಾವು ಅವಿಶ್ವಾಸಮತ ನಿರ್ಣಯಕ್ಕೆ ಮುಂದಾಗದೆ ಇದ್ದರೆ ಅವರು ವಿಶ್ವಾಮತ ಯಾಚನೆಗೆ ಸಿದ್ಧರಾಗುತ್ತಿರಲಿಲ್ಲ.
ವಿಶ್ವಾಸಮತ ಯಾಚನೆ ಮಾಡುವವರೆಗೂ ಕಲಾಪ ಬೇಡ ಎಂಬ ಒಂದೇ ಮನವಿ ಮಾಡಿದೆವು ಈ ಹಂತದಲ್ಲಿ ಕಲಾಪ ನಡೆಸಿ ಸರ್ಕಾರವನ್ನು ಟೀಕೆ ಟಿಪ್ಪಣಿ ಮಾಡಲು ಆಗುವುದಿಲ್ಲ. ಅದಕ್ಕೆ ಸ್ಪೀಕರ್ ಅನುಮತಿ ನೀಡಿದ್ದಾರೆ. ಅವರ ನಿಲುವು ನಮಗೆ ಸಂತೋಷ ತಂದಿದೆ ಎಂದರು.
ಇನ್ನೂ ಐವರು ಅತೃಪ್ತ ಶಾಸಕರ ಮನವಿ ಆಲಿಸಲು ಸುಪ್ರೀಂಕೋರ್ಟ್ ಸಮ್ಮತಿ
ಬಿಜೆಪಿ ಶಾಸಕರು ರೆಸಾರ್ಟ್ಗೆ
ಮೂರು ದಿನಗಳವರೆಗೂ ಅವರಿಗೆ ಅವಕಾಶ ನೀಡಿರುವುದು ಹೆಚ್ಚಿನ ಸಮಯವಾಗಲಿಲ್ಲವೇ ಎಂಬ ಪ್ರಶ್ನೆಗೆ ಅವರು, 'ಸರ್ಕಾರಕ್ಕೆ ನೀಡಿರುವ ಅವಕಾಶ ದೊಡ್ಡದಲ್ಲ. ಕಾಲಾವಕಾಶ ಅವರಿಗೂ ಇರಬಹುದು, ನಮಗೂ ಇರಬಹುದು. ಸ್ಪೀಕರ್ ಅವರ ತೀರ್ಮಾನವನ್ನು ಗೌರವಿಸುತ್ತೇವೆ. ನಾವು ಈಗ ನೇರವಾಗಿ ಶಾಸಕರೊಂದಿಗೆ ರೆಸಾರ್ಟ್ಗೆ ತೆರಳಲಿದ್ದೇವೆ ಎಂದು ಹೇಳಿದರು.
ದಿನೇಶ್ ಪೇಪರ್ ಟೈಗರ್
ಪೇಪರ್ ಟೈಗರ್ ದಿನೇಶ್ ಮಾತಿಗೆ ಬೆಲೆಯಲ್ಲ. ಅತೃಪ್ತ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅವರು ಅಸಮರ್ಥರಾಗಿದ್ದಾರೆ ಎಂದು ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸಿದರು.
ನಾವು ಗೆದ್ದೇ ಗೆಲ್ತೀವಿ
ನಾವು ಗೆದ್ದೇ ಗೆಲ್ತೀವಿ. ವಿಶ್ವಾಸಮತ ಯಾಚನೆಗಾಗಿ ಕುಮಾರಸ್ವಾಮಿ ಅವರಿಗೆ ಸ್ಪೀಕರ್ ಕಾಲಾವಕಾಶ ಕೊಟ್ಟಿದ್ದಾರೆ. ಮೈತ್ರಿ ಸರ್ಕಾರ ಯಶಸ್ವಿಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.