ಯಡಿಯೂರಪ್ಪ ಗದ್ದುಗೆಗೆ ಏರಲು ನಾಲ್ಕು ಮುಹೂರ್ತ ಫಿಕ್ಸ್!
Recommended Video
ಬೆಂಗಳೂರು, ಜುಲೈ 24: ರಾಜ್ಯ ರಾಜಕಾರಣದಲ್ಲಿ ಹೊಸ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸರ್ಕಾರವನ್ನು ಉರುಳಿಸಲು ಯಡಿಯೂರಪ್ಪ ಮತ್ತು ಅವರ ತಂಡ ಆರು ಬಾರಿ ಪ್ರಯತ್ನ ನಡೆಸಿತ್ತು ಎಂದು ದೋಸ್ತಿ ನಾಯಕರು ಆರೋಪಿಸಿದ್ದರು. ಆ ಲೆಕ್ಕಾಚಾರದ ಮೂಲಕವೇ ನೋಡಿದರೆ ಏಳನೇ ಪ್ರಯತ್ನದಲ್ಲಿ ಯಡಿಯೂರಪ್ಪ ಅವರು ಸರ್ಕಾರ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜತೆಗೆ ಪ್ರಸಕ್ತ ಅವಧಿಯಲ್ಲಿಯೇ ಎರಡನೆಯ ಸಲ ಮುಖ್ಯಮಂತ್ರಿ ಗಾದಿಯ ಮೇಲೆ ಕೂರಲು ಸಿದ್ಧತೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆ ನಡೆದ ಬಳಿಕ ಒಂದೂವರೆ ವರ್ಷದ ಅವಧಿಯ ಒಳಗೇ ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಅಪರೂಪದ ನಿದರ್ಶನ ಇದಾಗಲಿದೆ.
ಸರ್ಕಾರ ಉರುಳಿಸಿದ ಖುಷಿ: ಮೋದಿಗೆ ಪತ್ರ ಬರೆದ ಯಡಿಯೂರಪ್ಪ
ಸಿಎಂ ಗಾದಿಗೆ ಏರುವ ಉತ್ಸಾಹದಲ್ಲಿರುವ ಯಡಿಯೂರಪ್ಪ ಅವರು ಪಕ್ಷದ ಶಾಸಕರು, ಇತರೆ ಮುಖಂಡರ ಜತೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ಮುಂದಿನ ನಡೆ ಬಗ್ಗೆ ಕೇಂದ್ರ ನಾಯಕರಿಂದ ಸಲಹೆ ಪಡೆದುಕೊಳ್ಳಲಿದ್ದಾರೆ.
ಪ್ರಮಾಣವಚನಕ್ಕೆ ನಾಲ್ಕು ಮುಹೂರ್ತ ನಿಗದಿ?
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಮುಹೂರ್ತ ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಜೋತಿಷಿಗಳು ಎರಡು ಮುಹೂರ್ತಗಳನ್ನು ನೀಡಿದ್ದಾರೆ. ಅವುಗಳ ಪೈಕಿ ತಮಗೆ ಅನುಕೂಲಕರವಾದ ಒಂದು ಮುಹೂರ್ತದಲ್ಲಿ ಅವರು ಅಧಿಕಾರಕ್ಕೆ ಏರಲಿದ್ದಾರೆ. ಗುರುವಾರ ಬೆಳಿಗ್ಗೆ 9.40 ರಿಂದ 10.30ರವರೆಗೆ ಅಥವಾ ಸಂಜೆ 4.30ರ ಬಳಿಕ ಮುಹೂರ್ತ ನೀಡಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 3 ಅಥವಾ ಸಂಜೆ 4.30ರ ಬಳಿಕ ಎಂದು ಒಟ್ಟು ನಾಲ್ಕು ಮುಹೂರ್ತಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಯುದ್ದಗೆದ್ದ ಸಂಭ್ರಮದಲ್ಲಿ ಯಡಿಯೂರಪ್ಪ: ಮುಂದಿನ ನಡೆಯೇನು?
ಇಂದು ಯಡಿಯೂರಪ್ಪ ಪುನರಾಯ್ಕೆ
ಬೆಂಗಳೂರಿನಲ್ಲಿ ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಪಕ್ಷದ ಮುಖಂಡರು ಚರ್ಚಿಸಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕರನ್ನಾಗಿ ಯಡಿಯೂರಪ್ಪ ಅವರನ್ನು ಪುನರಾಯ್ಕೆ ಮಾಡಲಾಗುವುದು. ಜತೆಗೆ ಮಂತ್ರಿಮಂಡಲ ರಚನೆ ಹಾಗೂ ಅತೃಪ್ತ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರು ಸೂಕ್ತ ಸ್ಥಾನ ನೀಡುವ ಕುರಿತು ಸಹ ಚರ್ಚೆ ನಡೆಯುವ ಸಾಧ್ಯತೆ ಇದೆ. ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿ ಮಾಡುವುದು ಅನುಮಾನ. ಅವರು ದೂರವಾಣಿ ಮೂಲಕವೇ ಅವರ ಸಲಹೆಗಳನ್ನು ಪಡೆದುಕೊಳ್ಳಲಿದ್ದಾರೆ.
ರೆಸಾರ್ಟ್ ಖಾಲಿ ಮಾಡಿದ ಶಾಸಕರು
ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ಬಳಿ ಪಕ್ಷದ ಶಾಸಕರೊಂದಿಗೆ ಯಡಿಯೂರಪ್ಪ ಅವರು ರಾತ್ರಿ ಸಭೆ ನಡೆಸಿದ್ದರು. ಅಧಿವೇಶನ ಆರಂಭವಾಗುವ ಮುಂಚೆಯಿಂದಲೇ ರಮಾಡ ರೆಸಾರ್ಟ್ನಲ್ಲಿ ಸೇರಿದ್ದ ಬಿಜೆಪಿ ಶಾಸಕರು ಮಂಗಳವಾರ ರಾತ್ರಿಯೇ ತಮ್ಮ ಕೊಠಡಿಗಳನ್ನು ಖಾಲಿ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಭಾಗದ ಶಾಸಕರು ತಮ್ಮ ಕ್ಷೇತ್ರದ ಮನೆಗಳಿಗೆ ತೆರಳಿದ್ದರೆ, ಉಳಿದ ಕೆಲವು ಶಾಸಕರು ಶಾಸಕರ ಭವನದ ಕೊಠಡಿಗಳಿಗೆ ತೆರಳಿದ್ದರು. ಆದರೆ, ದೂರದ ಊರುಗಳ ಶಾಸಕರು ಮನೆಗೆ ಹಿಂದಿರುಗಿಲ್ಲ. ಪಕ್ಷದ ಸಭೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ.
ಇದು ಪ್ರಜಾಪ್ರಭುತ್ವದ ಗೆಲುವು : ಬಿ.ಎಸ್.ಯಡಿಯೂರಪ್ಪ
ಬಿಎಸ್ವೈ ಮನೆಗೆ ಅಭಿಮಾನಿಗಳ ದಂಡು
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಖಚಿತವಾಗುತ್ತಿದ್ದಂತೆಯೇ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ಅಭಿಮಾನಿಗಳ ದಂಡೇ ಆಗಮಿಸುತ್ತಿದೆ. ನಿನ್ನೆ ರಮಾಡ ರೆಸಾರ್ಟ್ನ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಗಿತ್ತು. ಇಂದು ಕೂಡ ಬಿಜೆಪಿ ಕಚೇರಿಗಳಲ್ಲಿ, ಯಡಿಯೂರಪ್ಪ ಅವರ ನಿವಾಸ ಮುಂದೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಗುಪ್ತಚರ ಎಡಿಜಿಪಿ ಅಮರ್ ಪಾಂಡೆ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದು, ಕೆಲವು ಮಹತ್ವದ ಸಂಗತಿಗಳನ್ನು ಚರ್ಚಿಸಿದ್ದಾರೆ.
ಯಡಿಯೂರಪ್ಪ ಸಹನೆಯ ಅಚ್ಚರಿ
ಸದನದಲ್ಲಿ ಗುರುವಾರದಿಂದ ನಡೆಯುತ್ತಿದ್ದ ಚರ್ಚೆಗಳಲ್ಲಿ ದೋಸ್ತಿ ನಾಯಕರ ಮಾತುಗಳು, ಆರೋಪಗಳಿಗೆ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದ ಯಡಿಯೂರಪ್ಪ, ಇಷ್ಟು ಸುದೀರ್ಘ ಸಮಯ ತಾಳ್ಮೆ ಪ್ರದರ್ಶನ ಮಾಡಿದ್ದು ಕೂಡ ವಿಶೇಷ. ಸರ್ಕಾರ ಬಿದ್ದೇ ಬೀಳುತ್ತದೆ ಎಂಬ ನಂಬಿಕೆ ಮತ್ತು ಗದ್ದಲ ಮಾಡಿದಷ್ಟೂ ತಮ್ಮ ಉದ್ದೇಶಕ್ಕೆ ಹಿನ್ನಡೆಯಾಗಲಿದೆ ಎನ್ನುವುದೇ ಅವರ ಸಹನೆಗೆ ಕಾರಣವಾಗಿತ್ತು. ಮಾತ್ರವಲ್ಲದೆ, ಬಿಜೆಪಿಯ ಮಾತುಗಾರ ಘಟಾನುಘಟಿಗಳಿಗೂ ಮೌನವಹಿಸುವಂತೆ ಅವರು ಸೂಚನೆ ನೀಡಿದ್ದರು. ಹೀಗಾಗಿ ಆಡಳಿತ ಪಕ್ಷದವರ ಮಾತು ಜೋರಾದಷ್ಟೂ ಹೆಚ್ಚಿನ ಸಂದರ್ಭದಲ್ಲಿ ವಿರೋಧಪಕ್ಷದ ಬದಿಯಿಂದ ನಿಶ್ಶಬ್ಧವೇ ಉತ್ತರವಾಗಿತ್ತು.