ಕನಿಕರ ಹುಟ್ಟಿಸುವಂಥ ಭಾಷಣ ಮಾಡಿ ನಿರ್ಗಮನಕ್ಕೆ ಸಿದ್ಧರಾಗ್ತಾರಾ ಕುಮಾರಸ್ವಾಮಿ?
Recommended Video
ಬೆಂಗಳೂರು, ಜುಲೈ 17: ಇನ್ನು ಸರಕಾರ ನಡೆಸಲು ಸಾಧ್ಯವಿಲ್ಲ. ಅಗತ್ಯ ಸಂಖ್ಯಾ ಬಲ ಇಲ್ಲ. ಕ್ಷಿಪ್ರ ಕ್ರಾಂತಿಯೋ ಮತ್ತೊಂದು ನಡೆದು, ಅಧಿಕಾರ ಕಳೆದುಕೊಳ್ಳುವ ಸನ್ನಿವೇಶ ಎದುರಾದರೆ ಅಧಿಕಾರಾರೂಢ ಮುಖ್ಯಮಂತ್ರಿ ವಿಶ್ವಾಸಮತ ಸಾಬೀತಿಗೆ ಮುನ್ನವೇ ರಾಜೀನಾಮೆ ನೀಡಿ, ತಮ್ಮ ಹಾಗೂ ತಾವು ಪ್ರತಿನಿಧಿಸುವ ಪಕ್ಷದ ಬಗ್ಗೆ ಸುದೀರ್ಘವಾದ ಭಾಷಣ ಮಾಡಿ, ನಿರ್ಗಮಿಸುತ್ತಾರೆ.
ಇದೊಂದು ಬಗೆಯಲ್ಲಿ ರಣತಂತ್ರದಂತೆಯೂ ಮತದಾರರಲ್ಲಿ ಸದ್ಭಾವನೆ- ಕರುಣೆ ಉಕ್ಕಿಸುವ ಪ್ರಯತ್ನದಂತೆಯೂ ನಡೆದುಕೊಂಡು ಬಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು, ಬಿಜೆಪಿ ನೂರಾ ನಾಲ್ಕು ಸ್ಥಾನಗಳಲ್ಲಿ ಗೆದ್ದಾಗ ಯಡಿಯೂರಪ್ಪನವರು ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಬೇಕು ಎಂದು ರಾಜ್ಯಪಾಲರಲ್ಲಿ ಕೇಳಿಕೊಂಡಿದ್ದರು.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು?
ಅದಕ್ಕೆ ಒಪ್ಪಿಗೆ ಕೂಡ ಸಿಕ್ಕಿತು. ಆದರೆ ಬಹುಮತ ಸಾಬೀತು ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಖಾತ್ರಿ ಆದಾಗ ರಾಜೀನಾಮೆ ನೀಡಿ, ವಿಧಾನಸಭೆಯಲ್ಲಿ ಸುದೀರ್ಘವಾದ ಭಾಷಣ ಮಾಡಿ, ನಿರ್ಗಮಿಸಿದರು. "ಈ ಅಪ್ಪ- ಮಕ್ಕಳು (ಎಚ್.ಡಿ.ದೇವೇಗೌಡ- ಕುಮಾರಸ್ವಾಮಿ) ನಿಮ್ಮನ್ನು (ಕಾಂಗ್ರೆಸ್) ಮುಳುಗಿಸಿ ಬಿಡ್ತಾರೆ ಶಿವಕುಮಾರ್ ಅವರೇ. ನೀವು ನಗ್ತಾ ಇದ್ದೀರಿ. ನನ್ನ ಮಾತು ಬೇಕಿದ್ದರೆ ಬರೆದಿಟ್ಟುಕೊಳ್ಳಿ" ಎಂದಿದ್ದರು ಯಡಿಯೂರಪ್ಪ.
ಆಷ್ಟೇ ಅಲ್ಲ, ತಮ್ಮ ಭಾಷಣದ ಉದ್ದಕ್ಕೂ ದೇವೇಗೌಡರು- ಕುಮಾರಸ್ವಾಮಿ ವಿರುದ್ಧ ತೀಕ್ಷ್ಣ ಪದಗಳಿಂದ ವಾಗ್ದಾಳಿ ನಡೆಸಿದ್ದರು. ಲೋಕಸಭೆ ಚುನಾವಣೆ ಫಲಿತಾಂಶ ಬಂದು, ಕಾಂಗ್ರೆಸ್ ಒಂದು ಸ್ಥಾನಕ್ಕೆ ಕುಸಿದಾಗ, ಯಡಿಯೂರಪ್ಪ ಅವರ ಅದೇ ಭಾಷಣದ ತುಣುಕು ಎಲ್ಲೆಡೆ ಹರಿದಾಡಿತ್ತು. ಆದರೆ ಈಗಿನ ರಾಜಕೀಯ ಸನ್ನಿವೇಶ ಬೇರೆ ಆಗಿದೆ.
ಕ್ಲೈಮ್ಯಾಕ್ಸ್ ಹಂತಕ್ಕೆ ಕರ್ನಾಟಕ ರಾಜೀನಾಮೆ ಪ್ರಹಸನ: ಸಾಧ್ಯಾಸಾಧ್ಯತೆಗಳು
ಇನ್ನೇನು ಗುರುವಾರದಂದು ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರಕಾರಕ್ಕೆ (ಕಾಂಗ್ರೆಸ್- ಜೆಡಿಎಸ್) ಬಹುಮತ ಇದೆ ಎಂದು ಸಾಬೀತು ಮಾಡಬೇಕಿದೆ. ಬುಧವಾರದಂದು ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಗಮನಿಸಿದರೆ ಮೈತ್ರಿ ಸರಕಾರ ವಿಶ್ವಾಸ ಮತ ಸಾಬೀತು ಮಾಡಲು ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ.
ಈ ಹಿನ್ನೆಲೆಯಲ್ಲಿ ಹೊಸ ಚರ್ಚೆ ಶುರುವಾಗಿದೆ. ಕುಮಾರಸ್ವಾಮಿ ಅವರು ವಿಶ್ವಾಸ ಮತ ಸಾಬೀತು ಮಾಡುವ ಮುನ್ನವೇ ರಾಜೀನಾಮೆ ನೀಡುತ್ತಾರೆ. ಹಾಗೆ ರಾಜೀನಾಮೆ ನೀಡಿದ ನಂತರ ಆರಂಭದಲ್ಲಿ ಹೇಳಿದಂತೆಯೇ ಸುದೀರ್ಘವಾದ ಭಾಷಣ ಮಾಡಿ, ತಮ್ಮ ಬಗ್ಗೆ ಹಾಗೂ ತಮ್ಮ ಪಕ್ಷದ ಬಗ್ಗೆ ಮತದಾರರ ಮನಸ್ಸಲ್ಲಿ ಕರುಣೆ ಮೂಡಿಸುವ ಪ್ರಯತ್ನ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಎಚ್ಡಿಕೆ ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸಭೆ ಸಂಖ್ಯಾಬಲವೇನು?
ಮೂಲಗಳ ಪ್ರಕಾರ, ದೇವೇಗೌಡರೇ ತಮ್ಮ ಮಗನಿಗೆ ಈ ಸಲಹೆಯನ್ನು ನೀಡಿದ್ದಾರೆ. ಹೇಗೆ ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವ ಮುನ್ನ ದೇವೇಗೌಡರು, ಅಟಲ್ ಬಿಹಾರಿ ವಾಜಪೇಯಿ ಹಾಗೂ ರಾಜ್ಯ ರಾಜಕಾರಣದ ವಿಚಾರಕ್ಕೆ ಬಂದರೆ ಯಡಿಯೂರಪ್ಪನವರು ನಡೆದುಕೊಂಡಿದ್ದರೋ ಅದೇ ರೀತಿಯಲ್ಲಿ ಕುಮಾರಸ್ವಾಮಿ ಮಾಡುತ್ತಾರೆ ಎಂಬ ವಿಚಾರ ಚರ್ಚೆ ಆಗುತ್ತಿದೆ.
ಜುಲೈ ಆರನೇ ತಾರೀಕಿನಂದು ಆರಂಭವಾದ ಹತ್ತಕ್ಕೂ ಹೆಚ್ಚು ಆತೃಪ್ತ ಶಾಸಕರ (ಕಾಂಗ್ರೆಸ್- ಜೆಡಿಎಸ್) ರಾಜೀನಾಮೆ ಪ್ರಹಸನ ಹದಿನೇಳನೇ ತಾರೀಕಿನ ಹೊತ್ತಿಗೆ ಸರಕಾರ ಬೀಳುವ ಹಂತಕ್ಕೆ ಬಂದಿದೆ. ಜುಲೈ ಹದಿನೆಂಟನೇ ತಾರೀಕು, ಗುರುವಾರದಂದು ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುತ್ತಾರಾ? ಆ ಸಾಧ್ಯತೆ ಇಲ್ಲ ಎಂಬ ಉತ್ತರವೇ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತದೆ.