ವಿಡಿಯೋ ಕಳಿಸಿದ ಶಾಸಕ: ಮುಂಬೈನತ್ತ ಹೊರಟ ಪೊಲೀಸರ ತಂಡ
ಬೆಂಗಳೂರು, ಜುಲೈ 18: ರಾಜ್ಯದ ಅತೃಪ್ತ ಶಾಸಕರ ಎರಡನೆಯ ತವರುಮನೆಯಂತಾಗಿರುವ ಮುಂಬೈನಲ್ಲಿ ಮತ್ತೊಂದು ಹೈಡ್ರಾಮ ನಡೆಯುವ ಸೂಚನೆಗಳು ಕಾಣಿಸುತ್ತಿವೆ. ಶಾಸಕ ಶ್ರೀಮಂತ್ ಪಾಟೀಲ್ ಅವರ ಹೇಳಿಕೆ ದಾಖಲಿಸಿಕೊಳ್ಳಲು ರಾಜ್ಯದ ಪೊಲೀಸರ ವಿಶೇಷ ತಂಡ ಮುಂಬೈನತ್ತ ಪ್ರಯಾಣ ಬೆಳೆಸಿದೆ.
ವಿಶ್ವಾಸಮತ ಯಾಚನೆ LIVE: ಸಿಎಂಗೆ ಗುಡುವು ಕೊಟ್ಟ ರಾಜ್ಯಪಾಲರು
ಬುಧವಾರದವರೆಗೂ ಕಾಂಗ್ರೆಸ್ನ ಇತರೆ ಶಾಸಕರೊಂದಿಗೆ ರೆಸಾರ್ಟ್ನಲ್ಲಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್, ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಬಳಿಕ ಅವರು ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಗೊತ್ತಾಗಿತ್ತು.
ನಾಳೆ 1:30ರೊಳಗೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರಿಂದ ಖಡಕ್ ಸೂಚನೆ
ಅವರ ವಿಚಾರವೇ ಮಧ್ಯಾಹ್ನದ ಬಳಿಕ ಸದನದಲ್ಲಿ ಗದ್ದಲವೆಬ್ಬಿಸಿ ಕಲಾಪ ಮುಂದೂಡುವ ಕಾಂಗ್ರೆಸ್ ತಂತ್ರಕ್ಕೆ ಅಸ್ತ್ರವಾಗಿ ದೊರಕಿತ್ತು. 'ನಮ್ಮ ಶಾಸಕರನ್ನು ಬಿಜೆಪಿಯವರು ಅಪಹರಿಸಿದ್ದಾರೆ' ಎಂದು ಆರೋಪಿಸಿದ್ದ ಕಾಂಗ್ರೆಸ್, ಶ್ರೀಮಂತ್ ಪಾಟೀಲ್ ಅವರು ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ವಿಮಾನದಲ್ಲಿ ತೆರಳಿದ್ದಕ್ಕೆ, ಚೆನ್ನೈನಿಂದ ಮುಂಬೈಗೆ ಹೋಗಿದ್ದಕ್ಕೆ ಸಾಕ್ಷಿಗಳನ್ನು ಪ್ರಕಟಿಸಿತ್ತು.
ಶುಕ್ರವಾರ ವರದಿ ನೀಡಲು ಸೂಚನೆ
ಶ್ರೀಮಂತ್ ಪಾಟೀಲ್ ಅವರು ಮುಂಬೈಗೆ ಹೋಗಲು ಕಾರಣವೇನು? ಅವರಿಗೆ ನಿಜಕ್ಕೂ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಯೇ? ಅವರನ್ನು ಅಪಹರಿಸಲಾಗಿದೆಯೇ? ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಶುಕ್ರವಾರವೇ ವರದಿ ನೀಡುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಗೃಹ ಇಲಾಖೆಗೆ ಸೂಚನೆ ನೀಡಿದ್ದರು.
ನಮ್ಮ ರಾಜ್ಯದಲ್ಲಿಯೇ ಇಷ್ಟೊಂದು ಸುಸಜ್ಜಿತ ಆಸ್ಪತ್ರೆಗಳಿವೆ. ಚೆನ್ನೈ ಅಥವಾ ಮುಂಬೈಗೆ ಹೋಗುವ ಅಗತ್ಯವೇನಿತ್ತು? ಬುಧವಾರದವರೆಗೂ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಹೇಗೆ ಉದ್ಭವಿಸಿತು ಎಂದು ಅವರು ಪ್ರಶ್ನಿಸಿದ್ದರು.
ಶ್ರೀಮಂತ್ ಪಾಟೀಲ್ ವಿಡಿಯೋ
ಈ ಗದ್ದಲಗಳ ಬಳಿಕ ಶ್ರೀಮಂತ್ ಪಾಟೀಲ್ ಅವರು ಮತ್ತು ಅವರ ಮಗ ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಯಿಂದ ವಿಡಿಯೋಗಳನ್ನು ಮಾಡಿದ್ದಾರೆ. ತಾವು ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಸದನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಸ್ಪೀಕರ್ಗೆ ಪತ್ರ ಬರೆದಿದ್ದ ಅವರು, ಬಳಿಕ ವಿಡಿಯೋವೊಂದನ್ನು ಕೂಡ ರವಾನಿಸಿದ್ದಾರೆ.
'ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ವೈಯಕ್ತಿಕ ಕೆಲಸದ ನಿಮಿತ್ತ ಬುಧವಾರ ಚೆನ್ನೈಗೆ ತೆರಳಿದ್ದೆ. ಅಲ್ಲಿ ನನಗೆ ಎದೆ ನೋವು ಕಾಣಿಸಿಕೊಂಡಿತ್ತು. ಚೆನ್ನೈನಲ್ಲಿ ಯಾವ ಆಸ್ಪತ್ರೆಗೆ ದಾಖಲಾಗಬೇಕೆಂದು ತಿಳಿಯಲಿಲ್ಲ. ಹೀಗಾಗಿ ತಕ್ಷಣವೇ ಮುಂಬೈಗೆ ಬಂದು ಆಸ್ಪತ್ರೆಗೆ ದಾಖಲಾದೆ' ಎಂದು ಶ್ರೀಮಂತ್ ಪಾಟೀಲ್ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ ಮುಂಬೈ ಆಸ್ಪತ್ರೆಯಲ್ಲಿ ಪತ್ತೆ
ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಈ ನಡುವೆ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಅಪಹರಣ ಮಾಡಲಾಗಿದೆ ವಿಧಾನಸಭೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಶ್ರೀಮಂತ್ ಪಾಟೀಲ್ ಅವರನ್ನು ಅಪಹರಿಸಲಾಗಿದೆ ಎಂದು ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ಗೆ ದೂರು ನೀಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಸ್ಪೀಕರ್ ಗೃಹ ಇಲಾಖೆಗೆ ಸೂಚಿಸಿದ್ದರು. ಗೃಹ ಇಲಾಖೆಯ ಸೂಚನೆಯಂತೆ ಡಿಜಿ ಮತ್ತು ಮತ್ತು ಐಜಿಪಿ ಅವರು ಪೊಲೀಸ್ ಆಯುಕ್ತರಿಗೆ ನೀಡಿದ ನಿರ್ದೇಶನದಂತೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.
ಈ ತಂಡ ಈಗಾಗಲೇ ಮುಂಬೈಗೆ ಹೊರಟಿದ್ದು, ಅಲ್ಲಿನ ಆಸ್ಪತ್ರೆಯಲ್ಲಿರುವ ಶಾಸಕ ಶ್ರೀಮಂತ್ ಪಾಟೀಲ್ ಅವರ ಹೇಳಿಕೆ ದಾಖಲಿಸಿಕೊಳ್ಳಲಿದೆ. ಈ ಸಂದರ್ಭದಲ್ಲಿ ಅವರ ಜತೆಗಿರುವ ಅವರ ಮಗ ಶ್ರೀನಿವಾಸ್ ಪಾಟೀಲ್ ಅವರ ಹೇಳಿಕೆಯನ್ನೂ ದಾಖಲು ಮಾಡಿಕೊಳ್ಳುವ ಸಾಧ್ಯತೆ ಇದೆ.
ಶ್ರೀಮಂತ್ ಪಾಟೀಲ್ ಮಗನಿಂದಲೂ ವಿಡಿಯೋ
ಶ್ರೀಮಂತ್ ಪಾಟೀಲ್ ಅವರ ಮಗ ಕೂಡ ಆಸ್ಪತ್ರೆಯಿಂದ 44 ಸೆಕೆಂಡ್ಗಳ ವಿಡಿಯೋ ಮಾಡಿದ್ದು, ಚೆನ್ನೈನಲ್ಲಿದ್ದಾಗ ಆಯಾಸ ಉಂಟಾಗಿತ್ತು. ಈಗ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರು ಯಾರನ್ನೂ ಭೇಟಿಯಾಗುವುದು ಬೇಡ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಉಂಟಾದ ಬಳಿಕ ನಾವೇ ಬೆಂಗಳೂರಿಗೆ ಬರುತ್ತೇವೆ ಎಂದು ತಿಳಿಸಿದ್ದಾರೆ. ಈ ವಿಡಿಯೋವನ್ನು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ಶಾಸಕರ ಪರ ಬಿಜೆಪಿ ಇಷ್ಟು ಮುತುವರ್ಜಿ ವಹಿಸುತ್ತಿರುವುದು ಏಕೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.