ಸುಪ್ರೀಂ ಆದೇಶ ವಿಪ್ ಜಾರಿಗೊಳಿಸುವ ಅಧಿಕಾರ ಕಸಿದಂತಿದೆ: ಸಿದ್ದು ಕಳವಳ
ಬೆಂಗಳೂರು, ಜುಲೈ 18: "ಕರ್ನಾಟಕದ ಅತೃಪ್ತ ಶಾಸಕರ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶದಲ್ಲಿ ಶಾಸಕಾಂಗ ಪಕ್ಷದ ನಾಯಕನಾದ ನನ್ನ ವಿಪ್ ನೀಡುವ ಅಧಿಕಾರವನ್ನು ಹತ್ತಿಕ್ಕಿದಂತೆ ಕಾಣುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಗುರುವಾರ ಸದನದಲ್ಲಿ ಮಾತನಾಡಿದ ಅವರು, 'ಶಾಸಕರ ರಾಜೀನಾಮೆಯ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ರಾಜೀನಾಮೆ ನೀಡಿರುವ ಕಾರಣ ಅವರು ಸದನದ ಕಾರ್ಯಕಲಾಪಗಳಲ್ಲಿ ಭಾಗವಹಿಸದೆ ಇದ್ದರೂ ಅದು ತಪ್ಪಾಗಲಾರದು ಎಂದು ಹೇಳಿದೆ. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾದ ನಾನು ವಿಪ್ ಜಾರಿಗೊಳಿಸಿದ್ದೇ ಆದಲ್ಲಿ ಎಲ್ಲ ಶಾಸಕರೂ ವಿಧಾನಸಭೆಯಲ್ಲಿ ಹಾಜರಾಗಲೇಬೇಕು. ಆದರೆ ಸುಪ್ರೀಂ ಕೋರ್ಟ್ ಆದೇಶ ಅವರು ಹಾಜರಾಗದೆ ಇದ್ದರೂ ನಡೆಯುತ್ತದೆ ಎಂಬಂತಿದೆ. ಆದ್ದರಿಂದ ಈ ವಿಪ್ ವಿಷಯ ಇತ್ಯರ್ಥವಾಗುವವರೆಗೂ ವಿಶ್ವಾಸಮತ ಯಾಚನೆ ಮಾಡಬಾರದು ಎಂದು ನಾನು ಮನವಿ ಮಾಡುತ್ತೇನೆ' ಎಂದು ಸಿದ್ದರಾಮಯ್ಯ ಅವರು ಸಭಾಪತಿ ರಮೇಶ್ ಕುಮಾರ್ ಅವರಲ್ಲಿ ವಿನಂತಿ ಮಾಡಿದರು.
ವಿಶ್ವಾಸಮತ ಯಾಚನೆ LIVE: ಈಗ ವಿಶ್ವಾಸಮತ ಪಡೆದುಕೊಳ್ಳುವುದು ಸರಿಯಲ್ಲ: ಸಿದ್ದರಾಮಯ್ಯ
ವಿಶ್ವಾಸಮತ ಯಾಚಿಸದೆ ಭಾಷಣದಲ್ಲೇ ಕಾಲಹರಣ ಮಾಡಬಹುದು ಎಂಬ ನಿರೀಕ್ಷೆ ಸತ್ಯವಾಗಿದೆ. ಆದರೆ ಇದೀಗ ಕಾಂಗ್ರೆಸ್ ಎತ್ತಿರುವ ವಿಪ್ ಕುರಿತ ಪ್ರಶ್ನೆ ಬಿಜೆಪಿಗೂ ಮುಳುವಾಗಿದ್ದು, ಮುಂದಿನ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ. ಈ ನಡುವೆ ವಿಪ್ ಅಧಿಕಾರ, ಸುಪ್ರೀಂ ತೀರ್ಪಿನ ಕುರಿತು ಸಿದ್ದರಾಮಯ್ಯ ಅವರು ಕಳವಳ ವ್ಯಕ್ತಪಡಿಸಿ, ಮಾಡಿದ ಟ್ವೀಟ್ ಗಳು ಇಲ್ಲಿವೆ.
ವಿಪ್ ಹಕ್ಕು ಹತ್ತಿಕ್ಕಿದಂತೆ ಕಾಣುತ್ತಿದೆ!
ರಾಜ್ಯದ 15 ಶಾಸಕರ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಮಧ್ಯಂತರ ಆದೇಶದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿ ನಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡುವ ನನ್ನ ಹಕ್ಕನ್ನು ಹತ್ತಿಕ್ಕಿದಂತೆ ಕಾಣುತ್ತಿದೆ. ಈ ಬಗ್ಗೆ ಸಭಾಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಸುಪ್ರೀಂ ತೀರ್ಪಿನಲ್ಲಿ ನನ್ನ ಅಧಿಕಾರದ ಪ್ರಸ್ತಾಪ
ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾದ ನನ್ನ ಅಧಿಕಾರದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪವಾಗಿದೆ.
ಆ ಪ್ರಕರಣದಲ್ಲಿ ನಾನು ಪ್ರತಿವಾದಿ ಆಗದೆ ಇರುವ ಕಾರಣ ನನ್ನ ಅಭಿಪ್ರಾಯ ಮಂಡಿಸಲು ಸಾಧ್ಯವಾಗಿಲ್ಲ-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅತೃಪ್ತರು ಸದನದ ಸದಸ್ಯರೋ, ಅಲ್ಲವೋ ಎಂಬುದು ಸ್ಪಷ್ಟವಾಗಲಿ: ಕೃಷ್ಣಬೈರೇಗೌಡ
ವಿಪ್ ನೀಡಲು ಅವಕಾಶವಿದೆ
ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಆಶಯ ಈಡೇರಬೇಕಾದರೆ, ಶಾಸಕಾಂಗ ಪಕ್ಷದ ನಾಯಕರಿಗೆ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಲು ಅವಕಾಶ ಇರಲೇಬೇಕು-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಸಭಾಧ್ಯಕ್ಷರಿಗೆ ಧನ್ಯವಾದ
ವಿಪ್ ನೀಡಿಕೆಯ ಹಕ್ಕು ಸೇರಿದಂತೆ ಶಾಸಕಾಂಗ ಪಕ್ಷದ ನಾಯಕನ ಅಧಿಕಾರಕ್ಕೆ ರಕ್ಷಣೆ ನೀಡಿದ ಸಭಾಧ್ಯಕ್ಷರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ