ಕುರುಕ್ಷೇತ್ರ ಮುಗಿಯಿತು, ಇನ್ನು ಧರ್ಮರಾಯನ ಆಡಳಿತ ಶುರು; ಕೋಟಾ ಶ್ರೀನಿವಾಸ್ ಪೂಜಾರಿ
ಬೆಂಗಳೂರು, ಜುಲೈ 24: 'ಇನ್ನು ಮುಂದೆ ರಾಜ್ಯದಲ್ಲಿ ಧರ್ಮರಾಯನ ಆಡಳಿತ ಶುರುವಾಗುತ್ತದೆ' ಎಂದು ಬಿಜೆಪಿ ವಿಧಾನಪರಿಷತ್ ನಾಯಕ ಕೋಟಾ ಶ್ರೀನಿವಾಸಪೂಜಾರಿ ಅವರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಿರುವುದನ್ನು ಮಹಾಭಾರತಕ್ಕೆ ಹೋಲಿಸಿದರು.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, 18 ದಿನಗಳ ಕುರುಕ್ಷೇತ್ರ ಮುಕ್ತಾಯವಾಗಿದೆ. ಇನ್ನು ಮುಂದೆ ಧರ್ಮರಾಯನ ಆಡಳಿತ ಬರಲಿದೆ. ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಎಸ್ವೈ ಬಹುಮತ ಸಾಬೀತಾಗುವವರೆಗೂ ಅತೃಪ್ತರು ಬರೊಲ್ಲ?
ಕಳೆದ ವಿಧಾನಸಭೆ ಚುನಾವಣೆ ನಡೆದಾಗ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜನರು ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸಿದ್ದರು. ಆದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಅನೈತಿಕವಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು ಎಂದು ಅವರು ಆರೋಪಿಸಿದರು.
14 ತಿಂಗಳ ಕಾಲ ಆಡಳಿತ ನಡೆಸಿದ್ದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಂಗಳವಾರ ವಿಶ್ವಾಸಮತ ಯಾಚನೆ ನಡೆಸಿತ್ತು. ವಿಶ್ವಾಸಮತ ಗೆಲ್ಲಲು 103 ಶಾಸಕರ ಬೆಂಬಲ ಅಗತ್ಯವಿತ್ತು. ಆದರೆ, 99 ಶಾಸಕರು ಮಾತ್ರ ಸದನದಲ್ಲಿ ಹಾಜರಿದ್ದರಿಂದ ಸರ್ಕಾರ ಪತನಗೊಂಡಿತು. ಬಿಜೆಪಿ ಸದನದಲ್ಲಿ 105 ಶಾಸಕರ ಬಲ ಹೊಂದಿತ್ತು.