ಎಂಟಿಬಿ ನಾಗರಾಜ್ ಮನವೊಲಿಸಲು ಸಿದ್ದರಾಮಯ್ಯ ಕೂಡ ವಿಫಲ?
ಬೆಂಗಳೂರು, ಜುಲೈ 13: ರಾಜೀನಾಮೆ ಹಿಂದಕ್ಕೆ ಪಡೆಯುಲು ಸಾಧ್ಯವೇ ಇಲ್ಲ ಎಂದು ಬಿಗಿಪಟ್ಟು ಹಿಡಿದಿರುವ ವಸತಿ ಸಚಿವ ಎಂಟಿಬಿ ನಾಗರಾಜ್ ಅವರ ಮನವೊಲಿಸುವಲ್ಲಿ ಅವರ ಗುರು ಸಿದ್ದರಾಮಯ್ಯ ಅವರೂ ವಿಫಲರಾಗಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ 'ಕಾವೇರಿ' ನಿವಾಸದಲ್ಲಿ ಬೆಳಿಗ್ಗೆಯಿಂದ ಸಂಜೆ ಸುಮಾರು 5 ಗಂಟೆಯವರೆಗೂ ಎಂಟಿಬಿ ನಾಗರಾಜ್ ಅವರೊಂದಿಗೆ ನಾಯಕರು ಸತತ ಮಾತುಕತೆ ನಡೆಸಿದ್ದರು. ಸಿದ್ದರಾಮಯ್ಯ ಅವರ ಸೂಚನೆಗಳನ್ನು ಪಾಲಿಸುವ ಅವರ ಆಪ್ತ ಶಿಷ್ಯ ಎಂಟಿಬಿ, ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ವಿಚಾರದಲ್ಲಿ ಗುರುವಿನ ಮಾತುಗಳನ್ನು ಒಪ್ಪಿಕೊಳ್ಳಲಿಲ್ಲ ಎಂದು ಹೇಳಲಾಗಿದೆ.
ಮನವೊಲಿಕೆ ಸಕ್ಸಸ್!? ಒಂದು ಕಾಲು ಹಿಂದೆ ಇಟ್ಟರೇ ಎಂಟಿಬಿ ನಾಗರಾಜ್?
ಹೀಗಾಗಿ ಗುರು-ಶಿಷ್ಯರ ನಡುವಿನ ಸಂಧಾನ ಪ್ರಯತ್ನ ವಿಫಲವಾಗಿದೆ ಎಂದು ವರದಿಯಾಗಿದೆ. ಆದರೆ, ಈ ಸಂಧಾನ ಸಕ್ಸಸ್ ಆಗಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಆದರೆ, ಎಂಟಿಬಿ ನಾಗರಾಜ್ ಅವರ ನಡೆ ನಿಗೂಢವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಸಮಯಾವಕಾಶ ಬೇಕು ಎಂದಿದ್ದ ಅವರು ರಾಜೀನಾಮೆ ಕುರಿತು ಸ್ಪಷ್ಟ ನಿಲುವು ಪ್ರಕಟಿಸಿಲ್ಲ.
ನಿಮ್ಮ ಬಳಿ ಹೋಗಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಕ್ಕೆ ಬಂದಿದ್ದೇನೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಮುಂದುವರಿಯುವುದಕ್ಕೆ ನನ್ನ ಬೆಂಬಲ ಇಲ್ಲ. ನೀವು ಸಿಎಂ ಆಗುವುದಾದರೆ ರಾಜೀನಾಮೆ ವಾಪಸ್ ತೆಗೆದುಕೊಳ್ಳುವುದರ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರ ಮುಂದೆ ಎಂಟಿಬಿ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ಹಿಂಪಡೆದುಕೊಂಡು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮುಂದುವರಿಸುವಂತೆ ಸಿದ್ದರಾಮಯ್ಯ ಅವರ ಸೂಚನೆಗಳಿಗೆ ಎಂಟಿಬಿ ಒಪ್ಪಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶ
ಸಿದ್ದರಾಮಯ್ಯ ಅವರೊಂದಿಗೆ ಚರ್ಚೆಯ ಬಳಿಕ ಎಂಟಿಬಿ ನಾಗರಾಜ್ ಅವರು ಜಮೀರ್ ಅಹ್ಮದ್ ಅವರೊಂದಿಗೆ ಒಂದೇ ಕಾರ್ನಲ್ಲಿ ಹೊರಕ್ಕೆ ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹ್ಮದ್, ಸಿದ್ದರಾಮಯ್ಯ ಮತ್ತು ಎಂಟಿಬಿ ಅವರ ಭೇಟಿ ಸಫಲವಾಗಿದೆ ಎಂದು ತಿಳಿಸಿದರು.