ಮನವೊಲಿಕೆ ಸಕ್ಸಸ್!? ಒಂದು ಕಾಲು ಹಿಂದೆ ಇಟ್ಟರೇ ಎಂಟಿಬಿ ನಾಗರಾಜ್?
Recommended Video
ಬೆಂಗಳೂರು, ಜುಲೈ 13: ಯಾವುದೇ ಕಾರಣಕ್ಕೂ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ತಮ್ಮ ನಿಲುವನ್ನು ಸಡಿಲಿಸಿದ್ದಾರೆಯೇ? ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸಫಲರಾಗಿದ್ದಾರೆಯೇ?
ಡಿಕೆ ಶಿವಕುಮಾರ್ ಹಾಗೂ ಇತರೆ ಕೆಲವು ನಾಯಕರ ಭೇಟಿಯ ಬಳಿಕ ಎಂಟಿಬಿ ನಾಗರಾಜ್ ಅವರು ನೀಡಿರುವ ಹೇಳಿಕೆ, ಅವರು ರಾಜೀನಾಮೆ ನೀಡಿಯೇ ಸಿದ್ಧ ಎಂಬ ತಮ್ಮ ಹಟದಿಂದ ಒಂದು ಹೆಜ್ಜೆ ಹಿಂದೆ ಇರಿಸಿದ್ದಾರೆ ಎಂಬ ಸೂಚನೆ ಸಿಕ್ಕಿದೆ.
ಮುಂಜಾನೆ ಐದು ಗಂಟೆಗೇ ತಮ್ಮ ನಿವಾಸಕ್ಕೆ ಧಾವಿಸಿದ್ದ ಡಿಕೆ ಶಿವಕುಮಾರ್ ಅವರ ಮನವೊಲಿಕೆ ಪ್ರಯತ್ನಕ್ಕೆ ಎಂಟಿಬಿ ನಾಗರಾಜ್ ಒಪ್ಪಿರಲಿಲ್ಲ. ತಮ್ಮ ರಾಜೀನಾಮೆ ನಿರ್ಧಾರವನ್ನು ಯಾವ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದರು ಎನ್ನಲಾಗಿದೆ.
Breaking: ಸುಪ್ರೀಂಕೋರ್ಟ್ಗೆ ಮತ್ತೆ ಐವರು ಶಾಸಕರ ಅರ್ಜಿ
ಆದರೆ, ನಾಯಕರ ಸತತ ಪ್ರಯತ್ನದ ಬಳಿಕ ಅವರ ಕೊಂಚ ಮೆತ್ತಗಾಗಿದ್ದಾರೆ ಎಂದು ತಿಳಿದುಬಂದಿದೆ. ಡಿಕೆ ಶಿವಕುಮಾರ್, ಕುಣಿಗಲ್ ಶಾಸಕ ಡಾ. ರಂಗನಾಥ್ ಮತ್ತು ಎಂಎಲ್ಸಿ ರವಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಎಂಟಿಬಿ ನಾಗರಾಜ್ ಅವರು ನೀಡಿರುವ ಹೇಳಿಕೆ ಅವರು ತಮ್ಮ ಮನ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಸುಳಿವು ನೀಡಿವೆ. ಜತೆಗೆ ನಾಯಕರೊಂದಿಗೆ ಅವರು ಸಿದ್ದರಾಮಯ್ಯ ಅವರ 'ಕಾವೇರಿ' ನಿವಾಸಕ್ಕೆ ತೆರಳಿ ಮಾತುಕತೆ ನಡೆಸುತ್ತಿರುವುದು ಕೂಡ ಇದನ್ನು ಮತ್ತಷ್ಟು ಬಲ ನೀಡಿದೆ.
ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಕಾಲಾವಕಾಶ ನೀಡುವಂತೆ ಕೋರಿರುವುದಾಗಿ ಎಂಟಿಬಿ ನಾಗರಾಜ್ ತಿಳಿಸಿದರು.
ಸಮಯ ಕೊಡುವಂತೆ ಕೇಳಿದ್ದೇನೆ
ಅಸಮಾಧಾನ ಎಲ್ಲ ಪಕ್ಷಗಳಲ್ಲೂ ಇದೆ. ಎಲ್ಲರೂ ಸಮಾಧಾನದಿಂದ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಕಾಂಗ್ರೆಸ್ ಪಕ್ಷದ ನಾಯಕರಾದ ಡಿಕೆ ಶಿವಕುಮಾರ್, ಪರಮೇಶ್ವರ್, ಕೃಷ್ಣ ಬೈರೇಗೌಡ ಸೇರಿದಂತೆ ಅನೇಕರು ಮನೆಗೆ ಬಂದು ಮಾತುಕತೆ ನಡೆಸಿದ್ದರು. ಅವರನ್ನು ಅಭಿಮಾನದಿಂದ ಸ್ವಾಗತಿಸಿದ್ದೇನೆ. ನಾನು ಕೂಡ ಅವರ ಮಾರ್ಗದರ್ಶನದಲ್ಲಿ ಬೆಳೆದುಬಂದಿದ್ದೇನೆ. ನೀವು 40 ವರ್ಷಗಳಿಂದ ಪಕ್ಷದಲ್ಲಿ ಇದ್ದೀರಿ, ಇಲ್ಲಿಯೇ ಇರಬೇಕು ಎಂದು ಮನವೊಲಿಸಲು ಬಂದಿದ್ದರು. ಅವರ ಬಳಿ ಕಾಲಾವಕಾಶ ಕೋರಿದ್ದೇನೆ ಎಂದು ತಿಳಿಸಿದರು.
ಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶ
ಸುಧಾಕರ್ ಜತೆ ಚರ್ಚಿಸಿ ನಿರ್ಧಾರ
ನಾನು ಮತ್ತು ಸುಧಾಕರ್ ಒಂದೇ ದಿನ ಸ್ಪೀಕರ್ ಕಚೇರಿಗೆ ಹೋಗಿ ರಾಜೀನಾಮೆ ಕೊಟ್ಟಿದ್ದೇವೆ. ರಾಜೀನಾಮೆ ಹಿಂದಕ್ಕೆ ಪಡೆದುಕೊಳ್ಳುವಂತೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡುರಾವ್ ಕೂಡ ದೂರವಾಣಿ ಮೂಲಕ ಮಾತನಾಡಿದ್ದಾರೆ. ಕೆ. ಸುಧಾಕರ್ ಅವರು ಬೇರೆ ಕಡೆ ಇದ್ದಾರೆ. ಅವರ ಜತೆ ಚರ್ಚಿಸಿ ನನ್ನ ನಿರ್ಧಾರ ತಿಳಿಸುತ್ತೇನೆ. ನಾನು ಪಕ್ಷದಲ್ಲಿಯೇ ಇರಲು ಪ್ರಯತ್ನಿಸುತ್ತೇನೆ. ಅಸಮಾಧಾನದಿಂದ ರಾಜೀನಾಮೆ ನೀಡಿದ್ದೇನೆ ಎಂದರು.
ಎಂಟಿಬಿ ನಿವಾಸದಿಂದ ಸಿದ್ದರಾಮಯ್ಯ ನಿವಾಸಕ್ಕೆ
ಬೆಂಗಳೂರಿನ ಮಹದೇವಪುರದ ಹೂಡಿಯ ಆಶ್ರಯ ಲೇಔಟ್ನಲ್ಲಿರುವ ಎಂಟಿಬಿ ನಾಗರಾಜ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾದ ಬಳಿಕ ನಾಯಕರು ಅವರನ್ನು ಸಿದ್ದರಾಮಯ್ಯ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಂಟಿಬಿ ಮನವೊಲಿಕೆಗೆ ತೀವ್ರ ಕಸರತ್ತು ನಡೆದಿದೆ. ಎಂಟಿಬಿ ನಾಗರಾಜ್ ಅವರು ರಾಜೀನಾಮೆ ಹಿಂದಕ್ಕೆ ಪಡೆಯಲು ಒಪ್ಪಿಕೊಂಡರೆ ಕೆ. ಸುಧಾಕರ್ ಕೂಡ ರಾಜೀನಾಮೆ ಹಿಂಪಡೆಯಲಿದ್ದಾರೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಎಂಟಿಬಿ ಎದೆ ಬಗೆದು ನೋಡೋಕೆ ಆಗುತ್ತದೆಯೇ? : ಸಿದ್ದರಾಮಯ್ಯ
ಡಿಕೆಶಿ ಕೈಗೆ ಸಿಗದ ಸುಧಾಕರ್
ಎಂಟಿಬಿ ಮತ್ತು ಕೆ. ಸುಧಾಕರ್ ಅವರನ್ನು ಒಂದೆಡೆ ಸೇರಿಸಿ ಮಾತುಕತೆ ನಡೆಸಿ ಅವರ ಮನ ಬದಲಿಸಲು ಡಿಕೆ ಶಿವಕುಮಾರ್ ನಿರಂತರ ಪ್ರಯತ್ನ ನಡೆಸಿದ್ದಾರೆ. ಎಂಟಿಬಿ ನಾಗರಾಜ್ ಅವರನ್ನು ಸಿದ್ದರಾಮಯ್ಯ ಅವರ ನಿವಾಸಕ್ಕೆ ಕಳುಹಿಸಿದ್ದ ಅವರು ನೇರವಾಗಿ ಕೆ, ಸುಧಾಕರ್ ಅವರ ಮನೆಗೆ ತೆರಳಿದ್ದರು. ಸುಧಾಕರ್ ಅವರನ್ನು ಸಿದ್ದರಾಮಯ್ಯ ಅವರ ಮನೆಗೆ ಕರೆತರುವುದು ಡಿಕೆ ಶಿವಕುಮಾರ್ ಉದ್ದೇಶವಾಗಿತ್ತು. ಆದರೆ, ಸುಧಾಕರ್ ಮನೆಯಲ್ಲಿ ಇಲ್ಲದ ಕಾರಣ ಅವರು ನಿರಾಶೆಯಿಂದ ವಾಪಸಾಗಿದ್ದಾರೆ ಎನ್ನಲಾಗಿದೆ.