ರೆಸಾರ್ಟ್ ರಾಜಕಾರಣದ ವಿರುದ್ಧ ರಸ್ತೆಗಿಳಿದು ರವಿ ಬೆಳಗೆರೆ ಧರಣಿ ಸತ್ಯಾಗ್ರಹ
ಬೆಂಗಳೂರು, ಜುಲೈ 17: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ಓ ಮನಸೇ ಪಾಕ್ಷಿಕದ ಮಾಲೀಕರು- ಸಂಪಾದಕರಾದ ರವಿ ಬೆಳಗೆರೆ ಅವರು ಬುಧವಾರ ಬೆಂಗಳೂರಿನ ಪದ್ಮನಾಭ ನಗರದಲ್ಲಿ ರೆಸಾರ್ಟ್ ರಾಜಕಾರಣದ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿದರು. ಯಾವುದೇ ಪಕ್ಷದ ಶಾಸಕರನ್ನು ಆಯ್ಕೆ ಮಾಡುವುದು ಜನರ ಕೆಲಸ ಮಾಡುವ ಸಲುವಾಗಿಯೇ ವಿನಾ ರೆಸಾರ್ಟ್ ಗೆ ಹೋಗಲಿ ಅಂತಲ್ಲ ಎಂದು ಅಸಮಾಧಾನ ಹೊರಹಾಕಿದರು.
"ಯಾವಾಗೆಲ್ಲ ವಿಧಾನಸೌಧದಲ್ಲಿನ ಬೆಳಕು ಮಂಕಾಗುತ್ತದೋ ಆಗೆಲ್ಲ ಅದರ ಎದುರಿನ ಅಂದರೆ ಕೆಂಪು ಬಣ್ಣದ (ಕೋರ್ಟ್) ಬೆಳಕು ಪ್ರಖರವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ಹೀಗೆ ಮಾಡಿ ಎಂದು ಸೂಚಿಸುವ ಪರಿಸ್ಥಿತಿ ತಲೆದೋರಬಾರದು. ಪದ್ಮನಾಭನಗರದ ನಾಗರಿಕರ ಪರವಾಗಿ ನಾನು ಧರಣಿ ಸತ್ಯಾಗ್ರಹ ಮಾಡುತ್ತಿದ್ದೇನೆ, ಪ್ರಶ್ನೆ ಮಾಡುತ್ತಿದ್ದೇನೆ" ಎಂದರು ರವಿ ಬೆಳಗೆರೆ.
ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು
"ಈಗ ಸುಪ್ರೀಂ ಕೋರ್ಟ್ ನ್ ತೀರ್ಪು ಏನು ಬಂದಿದೆ, ಅದು ನೇರವಾಗಿ ಬಿಜೆಪಿಯ ಪರವಾಗಿದೆ ಮತ್ತು ಯಡಿಯೂರಪ್ಪನವರು ಹೊಸ ಸಫಾರಿ ಹೊಲಿಸಿಕೊಂಡಿದ್ದಾರೆ. ಅವರು ಕ್ರಿಕೆಟ್ ಆಡುತ್ತಿರುವಂಥ ಫೋಟೋ ಪತ್ರಿಕೆಗಳಲ್ಲಿ ಬಂದಿದೆ. ಇನ್ನು ಅವರು ಕ್ರಿಕೆಟ್ ಆಡ್ತಾರೆ. ಅದನ್ನೇನೂ ನಿಲ್ಲಿಸಲ್ಲ. ಶೋಭಾ ಕರಂದ್ಲಾಜೆ ಇಲ್ಲ, ಒಬ್ಬರೇ ಆಡ್ತಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್" ಎಂದರು ಬೆಳಗೆರೆ.
ಶಾಸಕರ ರೆಸಾರ್ಟ್ ವಾಸ್ತವ್ಯದ ಹಣ ಕೊಟ್ಟಿದ್ದು ಯಾರು?
ಈಗಿನ ಸ್ಥಿತಿ ಮತ್ತೆ ರಿಪೀಟ್ ಆಗಬಾರದು. ಎಲ್ಲ ಕ್ಷೇತ್ರಗಳಲ್ಲೂ ಈ ಥರ ಪ್ರತಿಭಟನೆ ಆಗಬೇಕು. ಈ ಥರದ ಬಿಕ್ಕಟ್ಟು ಸೃಷ್ಟಿಯಾದಾಗ ಪದ್ಮನಾಭ ನಗರದ ಜಾಗೃತ ನಾಗರಿಕರಾಗಿ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದೀವಿ. ರೆಸಾರ್ಟ್ ರಾಜಕಾರಣ, ಇವರನ್ನು ಎತ್ತಿಕೊಂಡು ಹೋಗಿ ಇಡುವುದು, ಒಬ್ಬೊಬ್ಬ ಶಾಸಕನಾಗಿ ಹತ್ತತ್ತು ಲಕ್ಷ ರುಪಾಯಿ ದಿನಕ್ಕೆ ಖರ್ಚಾಗಿದೆ. ಯಾರು ಕೊಟ್ಟಿದ್ದು? ಯಾರು ಕೊಟ್ಟರು ಅಂತ ಹೇಳಿ ಎಂದು ಪ್ರಶ್ನಿಸಿದ ರವಿ ಬೆಳಗೆರೆ, ಕುಮಾರಸ್ವಾಮಿ ಸೀಟ್ ಮಾಡಿದ್ದಾರೆ, ಯಡಿಯೂರಪ್ಪ ಮಾಡಿದ್ದಾರೆ. ಆಪರೇಷನ್ ಕಮಲ, ಅಲ್ಲ ಅದು ಆಪರೇಷನ್ ಮಲ ಎಂದರು.
ಜನ ಸಾಮಾನ್ಯರಲ್ಲಿ ಜಾಗ್ರತೆ ಮೂಡಿಸುವ ಪ್ರಯತ್ನ
ಪತ್ರಿಕೆಯ ಸಂಪಾದಕರಾಗಿ, ಯೂಟ್ಯೂಬ್ ಚಾನೆಲ್ ಇದ್ದು, ಫೇಸ್ ಬುಕ್ ನ ಪರಿಣಾಮಕಾರಿಯಾಗಿ ಬಳಸುತ್ತಿದ್ದರೂ ಪ್ರತಿಭಟನೆಯ ಮಾರ್ಗ ಆರಿಸಿಕೊಂಡ ಬಗ್ಗೆ ಪ್ರಶ್ನೆ ಕೇಳಿದಾಗ, ರಸ್ತೆ ಪಕ್ಕದಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವುದು ಜನ ಸಾಮಾನ್ಯರಲ್ಲಿ ಜಾಗ್ರತೆ ಮೂಡಿಸಬೇಕು ಎಂಬ ಕಾರಣಕ್ಕೆ. ಯೂಟ್ಯೂಬ್, ಫೇಸ್ ಬುಕ್ ಎಲ್ಲ್ ಬಳಸುವುದಿಲ್ಲ. ಆಟೋ ಓಡಿಸುವವರು ನಮ್ಮ ಕಡೆ ನೋಡ್ತಾರೆ, ಆಸೆಯಿಂದ ನೋಡ್ತಾರೆ. ಇವರ್ಯಾರೋ ಇದ್ದಾರೆ, ಚಂದ್ರಶೇಖರ ಆಲೂರು ಇದ್ದಾರೆ. ಜೋಗಿ ಇದ್ದಾರೆ. ಪದ್ಮಪಾಣಿ ಇದ್ದಾರೆ. ರಮೇಶ್ ಇದ್ದಾರೆ. ನಾಗರಿಕರಲ್ಲಿ ಒಂದು ಜಾಗೃತಿ ಮೂಡಿಸಲು ತೀರ್ಮಾನ ಮಾಡಿದೆವು ಎಂದರು ರವಿ ಬೆಳಗೆರೆ.
ಅಸಹ್ಯ ರಾಜಕಾರಣದಿಂದ ಬೇಸತ್ತು ಪ್ರತಿಭಟನೆಯ ನಿರ್ಧಾರ
ಈ ಅಸಹ್ಯ ರಾಜಕಾರಣ ನೋಡಿ, ಬೇಸತ್ತು ಪ್ರತಿಭಟನೆಯ ನಿರ್ಧಾರಕ್ಕೆ ಬಂದೆವು. ಯಾರೂ ಪ್ರತಿಭಟನೆ ಮಾಡಲಿಲ್ಲ ಅಂತ ನಾನು ಮಾಡ್ತಾ ಇದ್ದೀನಿ. ಆಮೇಲೆ ಪ್ರತಿ ಹೋರಾಟವನ್ನೂ ದೊರೆಸ್ವಾಮಿ ಅವರೇ ಮಾಡಬೇಕು ಅಂತ ಯಾಕೆ ಬಯಸಬೇಕು? ಪಾಪ, ಅವರಿಗೆ ನಿವೃತ್ತಿ ಕೊಡೋಣ. ನಮ್ಮ ಕ್ಷೇತ್ರದ- ಕವಿ ನಿಸಾರ್ ಅಹಮದ್ ಅವರು ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಅವರ ಆರೋಗ್ಯ್ ಸರಿಯಿಲ್ಲದ ಕಾರಣ ಇಲ್ಲಿಗೆ ಬರಲಿ ಎಂದು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಮಾನಸಿಕವಾಗಿ ಅವರು ನಮ್ಮ್ ಜತೆ ಇದ್ದಾರೆ. ನಾವೆಲ್ಲ ಸಾಮಾನ್ಯ ಜನರೇ ಹೊರತು ರಾಜಕಾರಣಿಗಳಲ್ಲ. ಆದರೆ ಈ ಪ್ರತಿಭಟನೆ ದಾಖಲಿಸಲು ಮಾಧ್ಯಮದವರು ಬಂದಿದ್ದಾರೆ. ಮಾಧ್ಯಮಗಳು ಆಕ್ಟಿವ್ ಆಗಿವೆ ಅನ್ನೋದೇ ಸಂತೋಷ ಎಂದು ಹೇಳಿದರು.
ವೋಟು ಹಾಕದೆ ಮನೆಯಲ್ಲಿ ಕೂತುಕೊಳ್ಳಬೇಡಿ
ಪ್ರಜಾಪ್ರಭುತ್ವದ ಹಾದಿಯಲ್ಲಿ ಈಗಿನದು ಅಪಾಯಕಾರಿಯಾದ ಬೆಳವಣಿಗೆ. ಆದರೆ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಕೋರ್ಟ್ ನಿಂದ ಬರಬೇಕು ಅನ್ನೋದು ಅಪಾಯಕಾರಿ. ನಮ್ಮ ಪ್ರಜಾಪ್ರಭುತ್ವ, ನಮ್ಮ್ ಶಾಸಕರು, ನಮ್ಮ ಕುಮಾರಸ್ವಾಮಿ ಹಾಗೂ ನಾಳೆ ಮುಖ್ಯಮಂತ್ರಿ ಆದರೆ ಅವರು ನಮ್ಮ ಸಿಎಂ ಯಡಿಯೂರಪ್ಪ. ಮತ್ತು ಜನಾದೇಶವನ್ನು ಹೀಗೇ ಕೊಡಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ವೋಟು ಹಾಕದೆ ಮನೆಯಲ್ಲಿ ಕೂತುಕೊಳ್ಳಬೇಡಿ. ನಾವು ಮನೆಯಲ್ಲಿ ಕೂತು ಕೂತೇ ಇವರು ರೆಸಾರ್ಟ್ ನಲ್ಲಿ ಕೂರುವಂತೆ ಆಯಿತು. ಇನ್ನು ಪಕ್ಷಾಂತರವಂತೂ ಇಲ್ಲವೇ ಇಲ್ಲ. ರಾಜೀನಾಮೆ ಕೊಟ್ಟು ಬರ್ತಾರೆ, ಮತ್ತೆ ಚುನಾಯಿತರಾಗ್ತಾರೆ ಎಂದು ರವಿ ಬೆಳಗೆರೆ ಅವರು ಹೇಳಿದರು. ಆ ಹೊತ್ತಿಗೆ ಸುಪ್ರೀಂ ಕೋರ್ಟ್ ಆದೇಶ ಬಂದಿದ್ದರಿಂದ ಪ್ರತಿಭಟನೆ ಕೊನೆಗೊಳಿಸಿದರು.