ರಾಜ್ಯಪಾಲರಿಗೆ ಸರ್ಕಾರ ಉರುಳಿಸಲು ಅವಸರ: ಪರಮೇಶ್ವರ್ ಆರೋಪ
ಬೆಂಗಳೂರು, ಜುಲೈ 19: ಬಿಜೆಪಿ ಅಧಿಕಾರಕ್ಕೆ ಏರಲು ಚಡಪಡಿಸುತ್ತಿದೆ. ಅವರ ಅಧಿಕಾರ ದಾಹಕ್ಕೋಸ್ಕರ ನಾವು ಮನಬಂದಂತೆ ನಡೆಯಲು ಆಗುತ್ತದೆಯೇ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಬಿಜೆಪಿಯಂತೆಯೇ ರಾಜ್ಯಪಾಲರೂ ಸರ್ಕಾರ ಉರುಳಿಸಲು ಅವಸರ ಮಾಡುತ್ತಿದ್ದಾರೆ. ಸದನಕ್ಕೆ ಒಳಗಿನ ಯಾವುದೇ ವಿಷಯದಲ್ಲಿ ರಾಜ್ಯಪಾಲರಿಗೆ ಹಸ್ತಕ್ಷೇಪ ಮಾಡುವ ಅಧಿಕಾರ ಇಲ್ಲ ಎಂದು ಅವರು ಹೇಳಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಪರಮೇಶ್ವರ್, ರಾಜ್ಯಪಾಲರ ವಿರುದ್ಧ ಹರಿಹಾಯ್ದಿದ್ದಾರೆ.
ಇದಕ್ಕೂ ಮೊದಲು ಬೆಳಿಗ್ಗೆ ವಿಧಾನಸಭೆಗೆ ಆಗಮಿಸಿದ ಪರಮೇಶ್ವರ್, ಸದನದಲ್ಲಿಯೇ ರಾತ್ರಿ ಕಳೆದಿದ್ದ ಬಿಜೆಪಿ ಸದಸ್ಯರ ಕುಶಲೋಪರಿ ವಿಚಾರಿಸಿದರು. ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಿದ್ದ ಪರಮೇಶ್ವರ್, ಅವರೊಂದಿಗೆ ಉಪಾಹಾರವನ್ನೂ ಸೇವಿಸಿದರು.
'ಬಿಜೆಪಿಯವರು ಅಹೋರಾತ್ರಿ ಧರಣಿ ನಡೆಸಿದ್ದರು. ಅವರಿಗೆ ಅಗತ್ಯ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ. ರಾಜಕೀಯದಾಚೆಗೆ ನಾವೆಲ್ಲರೂ ಉತ್ತಮ ಸ್ನೇಹಿತರು. ಅದೇ ಪ್ರಜಾಪ್ರಭುತ್ವದ ಸೌಂದರ್ಯ' ಎಂದು ಹೇಳಿದ್ದರು. ರಾಜ್ಯ ರಾಜಕೀಯದ ಬಗ್ಗೆ ಅವರು ಮತ್ತೇನು ಹೇಳಿದ್ದಾರೆ? ಮುಂದೆ ಓದಿ...
ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ
ಸದನದಲ್ಲಿ ವಿಶ್ವಾಸ ಮತ ಮಂಡನೆಯ ನಿರ್ಣಯವನ್ನು ಮಂಡಿಸಿದ್ದೇವೆ. ಸದನಕ್ಕೆ ಒಳಪಟ್ಟ ಯಾವುದೇ ವಿಷಯದಲ್ಲಿ ರಾಜ್ಯಪಾಲರಿಗೂ ಹಸ್ತಕ್ಷೇಪ ಮಾಡುವ ಅಧಿಕಾರವಿರುವುದಿಲ್ಲ. ಸಭಾಧ್ಯಕ್ಷರು ಸದನದ ಸರ್ವಾಧ್ಯಕ್ಷರು. ಅವರ ನಿರ್ಣಯವೇ ಅಂತಿಮ. ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಬಿಜೆಪಿ ಗೌರವ ನೀಡಬೇಕು ಎಂದು ಪರಮೇಶ್ವರ್ ಆಗ್ರಹಿಸಿದ್ದಾರೆ.
ಸದನದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ ನರಿ ಕಥೆ!
ಪಾರದರ್ಶಕ ಪ್ರಾಮಾಣಿಕ ನಡೆ
ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ಮಧ್ಯಂತರ ಆದೇಶದಿಂದ ಸದನದಲ್ಲಿ ವಿಶ್ವಾಸ ಮತ ಯಾಚಿಸಲು ತೊಂದರೆಯಾಗುತ್ತದೆ. ಹೀಗಾಗಿ ಆದೇಶದ ಕುರಿತು ಸ್ಪಷ್ಟೀಕರಣ ಕೇಳಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಪಾರದರ್ಶಕ ನಡೆ ಸಾಂವಿಧಾನಿಕವೂ ಪ್ರಾಮಾಣಿಕವೂ ಆಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯಪಾಲರಿಗೂ ಬಿಜೆಪಿಯಂತೆ ಅವಸರ
ಒಂದು ಗಡುವಿನ ನಂತರ ಇನ್ನೊಂದನ್ನು ಕೊಡುತ್ತಿರುವ ರಾಜ್ಯಪಾಲರಿಗೂ ಬಿಜೆಪಿಯಂತೆಯೇ ಸರಕಾರ ಉರುಳಿಸುವ ಅವಸರವಿದೆ. ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸಿದ ನಂತರವೇ ವಿಶ್ವಾಸ ಮತ ಮಂಡಿಸುತ್ತೇವೆ. ಅಧಿಕಾರಕ್ಕೇರಲು ಬಿಜೆಪಿಗಿರುವ ಚಡಪಡಿಕೆ, ದಾಹಕ್ಕೋಸ್ಕರ ಮನಬಂದಂತೆ ನಡೆದುಕೊಳ್ಳಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಸದನದೊಳಗೇ ದೊಂಬರಿಗೆ ಅವಮಾನ; ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಿಳಿವಳಿಕೆ ನೀಡುವವರು ಯಾರಿದ್ದಾರೆ?
ರಾಜ್ಯಪಾಲರು ಗಡುವು ನೀಡುವಂತಿಲ್ಲ
ಎರಡು ಮುಖ್ಯ ವಿಷಯಗಳನ್ನು ಇಟ್ಟುಕೊಂಡು ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇವೆ. ತಮ್ಮ ಶಾಸಕರಿಗೆ ವಿಪ್ಗಳನ್ನು ಜಾರಿ ಮಾಡುವುದಕ್ಕೆ ಪಕ್ಷಗಳಿಗೆ ಅಧಿಕಾರವಿದೆ. ಇದನ್ನು ಯಾವುದೇ ಕೋರ್ಟ್ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸದನದಲ್ಲಿ ಕಲಾಪಗಳು ನಡೆಯುತ್ತಿರುವಾಗ ನಮಗೆ ವಿಶ್ವಾಸಮತ ಇದ್ದ ಸಂದರ್ಭದಲ್ಲಿ ರಾಜ್ಯಪಾಲರು ಸೂಚನೆಗಳನ್ನು ಅಥವಾ ಗಡುವುಗಳನ್ನು ನೀಡುವಂತಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.