ರಾಜೀನಾಮೆ ವಾಪಸ್ ಪಡೆದ ದಿನವೇ ರಾಮಲಿಂಗಾ ರೆಡ್ಡಿಗೆ ಮಂತ್ರಿಗಿರಿ: ಡಿಕೆಶಿ
ಬೆಂಗಳೂರು, ಜುಲೈ 12: ಹಿರಿಯರಾದ ರಾಮಲಿಂಗಾ ರೆಡ್ಡಿ ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕಿತ್ತು. ಅದನ್ನು ಕೊಡದೆ ತಪ್ಪು ಮಾಡಿರುವ ಬಗ್ಗೆ ನಮಗೂ ನೋವಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅಲ್ಲದೆ, ಈ ಬಗ್ಗೆ ರಾಮಲಿಂಗಾ ರೆಡ್ಡಿ ಅವರಿಗೆ ಮನವರಿಕೆ ಮಾಡಲಾಗಿದೆ. ಅವರು ರಾಜೀನಾಮೆ ಹಿಂದಕ್ಕೆ ಪಡೆದುಕೊಂಡ ದಿನವೇ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ. ಬೇಕಾದರೆ ನನ್ನ ಸಚಿವ ಸ್ಥಾನವನ್ನೇ ಅವರಿಗೆ ನೀಡುತ್ತೇನೆ ಎಂದೂ ಹೇಳಿದ್ದಾರೆ.
'ನನ್ನ ಮತ್ತು ರಾಮಲಿಂಗಾ ರೆಡ್ಡಿ ಅವರ ಸ್ನೇಹ ಸುಮಾರು 40 ವರ್ಷ ಹಳೆಯದು. ವಿದ್ಯಾರ್ಥಿ ದೆಸೆಯಿಂದಲೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಪಕ್ಷ ಅವರಿಗೆ ಸರಿಯಾದ ಸ್ಥಾನಮಾನ ನೀಡದೆ ತಪ್ಪು ಮಾಡಿದೆ. ಇದು ನಮಗೆ ಗೊತ್ತಾಗಿದೆ. ಈ ವಿಚಾರದಲ್ಲಿ ನಮಗೂ ನೋವಿದೆ. ಈ ಬಗ್ಗೆ ನಾವು ಮಾತನಾಡಿದ್ದೇವೆ. ಅವರು ಹುಟ್ಟು ಕಾಂಗ್ರೆಸ್ಸಿಗ. ಅವರ ಹಿರಿತನದ ಬಗ್ಗೆ ಹೈಕಮಾಂಡ್ಗೂ ತಿಳಿದಿದೆ' ಎಂದು ಡಿಕೆ ಶಿವಕುಮಾರ್ ಹೇಳಿದರು.
ವಿಶ್ವಾಸಮತಯಾಚನೆ : ರೆಸಾರ್ಟ್ಗೆ ಕಾಂಗ್ರೆಸ್, ಬಿಜೆಪಿ ಶಾಸಕರು!
ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವುದು ಹೇಗೆ ಎನ್ನುವುದು ನನಗೆ ಗೊತ್ತಿದೆ. ಸೋಮವಾರದ ಬಳಿಕ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ರಾಮಲಿಂಗಾ ರೆಡ್ಡಿ ಅವರು ಕಾಂಗ್ರೆಸ್ ತ್ಯಜಿಸುವುದಿಲ್ಲ. ಹಾಗೆಯೇ ಎಲ್ಲ ಅತೃಪ್ತ ಶಾಸಕರ ಕುರಿತೂ ನಮಗೆ ವಿಶ್ವಾಸವಿದೆ ಎಂದರು.
ಆ ದಿನವೇ ಸಚಿವ ಸ್ಥಾನ
ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ಹಿಂದಕ್ಕೆ ಪಡೆದುಕೊಂಡ ದಿನವೇ ಅವರಿಗೆ ಸಚಿವ ಸ್ಥಾನ ಕೊಡುತ್ತೇವೆ. ಅವರನ್ನು ಸಚಿವರನ್ನಾಗಿ ಮಾಡಲೇಬೇಕಲ್ಲ? ಅದು ನಮ್ಮ ಕರ್ತವ್ಯ. ಸರ್ಕಾರ ಉಳಿಸಿಕೊಳ್ಳಲು ಅವರನ್ನು ಸಚಿವರನ್ನಾಗಿ ಮಾಡಬೇಕು. ಬೇಕಾದರೆ ನನ್ನ ಸಚಿವ ಸ್ಥಾನವನ್ನೇ ನೀಡುತ್ತೇನೆ. ನಾವು ಈಗಾಗಲೇ ರಾಜೀನಾಮೆ ಕೊಟ್ಟಿದ್ದೇವೆ. ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದೆವೆ, ಅವರು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ.
ವಿಶ್ವಾಸಮತ ಯಾಚನೆಗೆ ಸೋಮವಾರವೇ ಸಮಯ ನೀಡುವಂತೆ ಮನವಿ
ಅನರ್ಹರಾದರೆ ಹೇಗೆ ಸಚಿವರಾಗುತ್ತಾರೆ?
ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ಬೇಕಾದಷ್ಟು ಪ್ರಕರಣಗಳು ನಡೆದು ಸುಪ್ರೀಂಕೋರ್ಟ್ನ ತೀರ್ಪುಗಳು ಬಂದಿವೆ. ಈ ಶಾಸಕರು ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಪಕ್ಷದಿಂದ ಗೆದ್ದು ಎಂಎಲ್ಎಗಳಾಗಿ ಹೋಗಿದ್ದಾರೆ. ಅವರು ಅನರ್ಹರಾದರೆ ಮತ್ತೆ ಸಚಿವರಾಗಲು ಆಗುವುದಿಲ್ಲ. ಚುನಾವಣೆಯಲ್ಲಿ ಗೆದ್ದು ಸಚಿವರಾಗಬೇಕು. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಚುನಾವಣೆಗೆ ಸ್ಪರ್ಧಿಸಲಾಗದ ಸ್ಥಿತಿಯೂ ಬರಬಹುದು. ಅವರು ಚುನಾವಣೆ ಎದುರಿಸದೆಯೇ ಮಂತ್ರಿಯಾಗಲು ಆಗುವುದಿಲ್ಲ.
ಶ್ರೀರಾಮುಲು ಆಡಿಯೋ ಬಹಿರಂಗ
ಶ್ರೀರಾಮುಲು ಅವರು ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಬಿಸಿ ಪಾಟೀಲ್ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಕೇಳಿದ್ದೇನೆ. ರಾಷ್ಟ್ರೀಯ ನಾಯಕರು ಜತೆಗೆ ಸೇರಿ ದುಡ್ಡು ಕಾಸು ವಿಚಾರ ಮಾತನಾಡುತ್ತಾರೆ. ಚುನಾವಣೆಗೆ ಹೋಗದೆಯೇ ಸಚಿವರನ್ನಾಗಿ ಮಾಡುತ್ತೇವೆ ಎನ್ನುವುದನ್ನು ಕೇಳಿದ್ದೇವೆ. ಅದು ಯಾವ ರೀತಿ ಸಚಿವರನ್ನಾಗಿ ಮಾಡುತ್ತಾರೆ ಎಂಬ ಕುತೂಹಲ ನಮಗೂ ಇದೆ. ಸೋಮವಾರ ಕಲಾಪ ಆರಂಭವಾದ ಬಳಿಕ ಶ್ರೀರಾಮುಲು ಅವರನ್ನೇ ಕೇಳಬೇಕು ಎಂದು ವ್ಯಂಗ್ಯವಾಗಿ ಹೇಳಿದರು.
ರಾಜ್ಯದಲ್ಲಿ ಪುನಃ ಚುನಾವಣೆ ನಡೆಯುತ್ತಾ? ಡಿಕೆಶಿ ಹೇಳಿದ್ದೇನು?
ಅರ್ಹತೆ ಕಳೆದುಕೊಂಡರೆ ಏನು ಸುಖ?
ಯಾವ ಶಾಸಕರು ಸುಖಾಸುಮ್ಮನೆ ಸದಸ್ಯತ್ವ ಕಳೆದುಕೊಳ್ಳಲು ಬಯಸುತ್ತಾರೆ? ಕಷ್ಟಪಟ್ಟು ಅಧಿಕಾರಕ್ಕೆ ಬಂದಿರುತ್ತಾರೆ. ಮಾತುಕತೆ, ನ್ಯಾಯ ಪಂಚಾಯಿತಿ ನಡೆಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬಹುದು. ಅದರ ಬದಲು ಚುನಾವಣೆಗೆ ಹೋಗಿ ನಿಲ್ಲಲು ಹೇಗೆ ಸಾಧ್ಯ? ಪ್ರಾಕ್ಟಿಕಲ್ ಆಗಿ ಅದು ಸಾಧ್ಯವಿಲ್ಲ. ಸರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷದಿಂದಲೂ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡರೆ ಏನು ಸುಖ?
ಸ್ಪೀಕರ್ ತುಂಬಾ ಕಟ್ಟುನಿಟ್ಟು
ನಮ್ಮ ಶಾಸಕರ ಬಗ್ಗೆ ನಮಗೆ ನಂಬಿಕೆ ಇದೆ. ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ಆ ಸಂದರ್ಭಕ್ಕೆ ಅನುಗುಣವಾಗಿ ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ನಮ್ಮ ಸ್ಪೀಕರ್ ತುಂಬಾ ಕಟ್ಟುನಿಟ್ಟು. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಕಾನೂನು ಪಾಲನೆಯಲ್ಲಿ ತಪ್ಪಾದರೆ ನಮಗೂ ಹೇಳುತ್ತಾರೆ.