ಸದನದಲ್ಲೇ ಶ್ರೀರಾಮುಲು 'ಆಪರೇಷನ್'ಗೆ ಕೈ ಹಾಕಿದ ಡಿಕೆಶಿ!
Recommended Video
ಬೆಂಗಳೂರು, ಜುಲೈ 18: ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಅರೋಪ ಮಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಬಿಜೆಪಿ ಮುಖಂಡರನ್ನೇ 'ಆಪರೇಷನ್' ಮಾಡಲು ಮುಂದಾದ ವಿನೋದದ ಪ್ರಸಂಗ ವಿಧಾನಸಭೆಯಲ್ಲಿ ಗುರುವಾರ ನಡೆಯಿತು.
ಮಿತ್ರಪಕ್ಷಗಳ ನಾಯಕರು ಬಿಜೆಪಿ ಮುಖಂಡ ಶ್ರೀರಾಮುಲು ಅವರಿಗೇ ಬಹಿರಂಗ ಆಹ್ವಾನ ನೀಡಿದರು. ಆಗ ಶ್ರೀರಾಮುಲು ಅವರ ಜತೆ ಬಿಜೆಪಿಯ ಯಾವ ಶಾಸಕರೂ ಇರಲಿಲ್ಲ. ಆದರೆ, ಮೈತ್ರಿ ಪಾಳಯದಲ್ಲಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸೇರಿದಂತೆ ಅನೇಕ ಮುಖಂಡರಿದ್ದರು. ಶ್ರೀರಾಮುಲು ಈ ಆಹ್ವಾನವನ್ನು ನಗುತ್ತಲೇ ತಿರಸ್ಕರಿಸಿದರು.
ಕ್ರಿಯಾಲೋಪ ಎತ್ತಿದ ಸಿದ್ದರಾಮಯ್ಯ: ಬಿಜೆಪಿಯಿಂದ ಗದ್ದಲ
ಸದನ ಭೋಜನ ವಿರಾಮದ ಬಳಿಕ ನಡೆಸುವುದಾಗಿ ಮುಂದೂಡಿದ್ದರಿಂದ ಬಿಜೆಪಿ ಶಾಸಕರು ಊಟಕ್ಕಾಗಿ ಹೊರಗೆ ತೆರಳಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ನ ಹೆಚ್ಚಿನ ಶಾಸಕರು ಕೂಡ ಹೊರ ಹೋಗಿದ್ದರು. ಆದರೆ, ಶ್ರೀರಾಮುಲು ಮತ್ತು ಕೆಲವು ದೋಸ್ತಿ ನಾಯಕರು ಮಾತ್ರ ಅಲ್ಲಿಯೇ ಇದ್ದರು.
ಇದರ ಬಳಿಕವೂ ಶ್ರೀರಾಮುಲು ಅವರು ಕುಳಿತಿದ್ದ ಆಸನದತ್ತ ನಡೆದ ಡಿಕೆ ಶಿವಕುಮಾರ್ ಅವರು, ಶ್ರೀರಾಮುಲು ಜತೆ ಕೆಲ ಸಮಯ ಚರ್ಚಿಸಿದರು.
ನಿನ್ನನ್ನು ಡಿಸಿಎಂ ಮಾಡೊಲ್ಲ
ಈ ವೇಳೆ ಶ್ರೀರಾಮುಲು ಅವರನ್ನು ನೋಡಿದ ದೋಸ್ತಿ ನಾಯಕರ ಗುಂಪು ಏನೋ ಮಾತಾಡಿಕೊಂಡು ನಗುವಿನ ಅಲೆಯಲ್ಲಿ ತೇಲಿತು. ಶ್ರೀರಾಮುಲು ಅವರತ್ತ ತಿರುಗಿದ ಸಚಿವ ಡಿಕೆ ಶಿವಕುಮಾರ್, 'ಬಿಜೆಪಿಯವರು ನಿನ್ನನ್ನು ಉಪ ಮುಖ್ಯಮಂತ್ರಿ ಮಾಡುವುದಿಲ್ಲ. ಬೇರೆಯವರನ್ನು ಡಿಸಿಎಂ ಮಾಡುತ್ತಾರೆ. ಜಾರಕಿಹೊಳಿ ಅವರನ್ನು ಮಾಡುತ್ತಾರೆ' ಎನ್ನುತ್ತಾ ತಮ್ಮ ಪಕ್ಷಕ್ಕೆ ಬರುವಂತೆ ಆಫರ್ ನೀಡಿದರು.
ಹೋಟೆಲಿಗೆ ಹಾಜರ್, ಸದನಕ್ಕೆ ಚಕ್ಕರ್, ಇದು ವಿಶ್ವಾಸಮತ ಹಾಜರಿ ಪುಸ್ತಕ!
'ಅಲ್ಲೇನು ಯೋಚನೆ ಮಾಡ್ತಿದ್ದೀಯಾ?'
ವಿಶ್ವಾಸಮತ ಯಾಚನೆ ವಿಚಾರದಲ್ಲಿ ಟೆನ್ಷನ್ನಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಊಟದ ಬಳಿಕ ವಿನೋದದ ಲಹರಿಯಲ್ಲಿದ್ದರು. ಡಿಕೆ ಶಿವಕುಮಾರ್ ಅವರ ಆಫರ್ ಕೇಳಿ ನಗುತ್ತಾ ಇದ್ದ ಅವರು, 'ಅಲ್ಲಿ ಕುಳಿತು ಏನು ಯೋಚನೆ ಮಾಡುತ್ತಿದ್ದೀಯ? ನಮ್ಮ ಬಳಿಗೆ ಬಾ' ಎಂದು ಶ್ರೀರಾಮುಲು ಅವರನ್ನು ಕರೆದರು. ಅದಕ್ಕೆ ಶ್ರೀರಾಮುಲು ನಗುತ್ತಾ ಕೈ ಅಲ್ಲಾಡಿಸಿದರು.
ಅವರು ಹೇಳಿದ್ದು ಕೇಳಿಸಲಿಲ್ಲ
ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮಗೆ ಆಫರ್ ನೀಡಿದ್ದು ಕೇಳಿಸಲಿಲ್ಲ ಎಂದು ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡಿದ ಅವರು, 'ಊಟಕ್ಕೆ ಕ್ಯೂ ಇದ್ದಿದ್ದರಿಂದ ತಡವಾಗಿ ಹೊರಟೆ. ಅಲ್ಲಿಯೇ ಕುಳಿದಿದ್ದರಿಂದ ಆಡಳಿತ ಪಕ್ಷದ ಮುಖಂಡರು ಹೇಗಿದ್ದೀರಿ ಎಂದು ವಿಚಾರಿಸಿದರು. ಡಿಕೆ ಶಿವಕುಮಾರ್ ಅವರು ಏನೋ ಕೂಗಾಡುತ್ತಾ ಬಂದಿದ್ದರು. ಅವರು ಏನು ಹೇಳಿದರೆಂದು ಸರಿಯಾಗಿ ಕೇಳಿಸಲಿಲ್ಲ. ಡಿಕೆ ಶಿವಕುಮಾರ್ ಅವರು ನನ್ನ ಬಳಿ ಬಂದು ಊಟಕ್ಕೆ ಹೋಗಿಲ್ಲವೇ ಎಂದು ಮಾತನಾಡಿಸಿದರು. ಅವರಾಗಿಯೇ ಬಂದಾಗ ಮಾತನಾಡದೆ ಇರುವುದು ನನ್ನ ಸಂಸ್ಕಾರ ಅಲ್ಲ ಎಂದು ಮಾತನಾಡಿಸಿದೆ' ಎಂದು ತಿಳಿಸಿದರು.
ವಿಶ್ವಾಸಮತ ಯಾಚನೆ ವಿಳಂಬ, ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪ
ಕಾಂಗ್ರೆಸ್ನವರು ನನಗೆ ಹೆದರುತ್ತಾರೆಯೇ?
'ಕಾಂಗ್ರೆಸ್ನವರು ನನ್ನನ್ನು ನೋಡಿದರೆ, ನನ್ನ ಹೆಸರು ಕೇಳಿದರೆ ಹೆದರುತ್ತಾರೆಯೇ? ಅವರೂ ದೊಡ್ಡ ಮನುಷ್ಯರೇನಲ್ಲ. ಡಿಕೆ ಶಿವಕುಮಾರ್ ಅವರು ಅವರ ಭಾಗಕ್ಕಷ್ಟೇ ಜನಪ್ರಿಯರು. ಅವರು ಡಿಸಿಎಂ ಅಲ್ಲ, ಸಿಎಂ ಸ್ಥಾನ ಕೊಟ್ಟರೂ ನಾನು ಅಲ್ಲಿಗೆ ಹೋಗುವುದಿಲ್ಲ. ಅವರು ತಮ್ಮ ಸ್ಥಾನ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇನ್ನು ಬೇರೆಯವರಿಗೆ ಏನು ಮಾಡುತ್ತಾರೆ?' ಎಂದು ಪ್ರಶ್ನಿಸಿದರು.
'ಸಿಎಂ ಕೂಡ ಏನೋ ಮಾತನಾಡುತ್ತಿದ್ದರು. ಅವರನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳೊಲ್ಲ. ಅವರನ್ನೇ ಬೇಕಾದರೆ ಪಕ್ಷಕ್ಕೆ ಕರೆಯುತ್ತೇನೆ' ಎಂದು ಹೇಳಿದರು.