ಸೋಮವಾರ ಕಲಾಪಕ್ಕೆ ಹಾಜರಾಗಲು ರಾಮಲಿಂಗಾ ರೆಡ್ಡಿ ನಿರ್ಧಾರ
ಬೆಂಗಳೂರು, ಜುಲೈ 13: ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಪಕ್ಷ ತ್ಯಜಿಸುವುದಿಲ್ಲ ಎಂದು ಹೇಳಿರುವ ಕಾಂಗ್ರೆಸ್ನ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಅವರು ಸೋಮವಾರ ನಡೆಯಲಿರುವ ವಿಧಾಸಭೆಯ ಅಧಿವೇಶನದಲ್ಲಿ ಹಾಜರಾಗುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತುಪಡಿಸಲು ಮುಂದಾದರೆ ಸದನದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಹಣಕಾಸು ಮಸೂದೆ ಮಂಡನೆ ಸಂದರ್ಭದಲ್ಲಿ ಕೂಡ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಯಾವ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ ಎಂದಿದ್ದಾರೆ.
'ಸೊಮವಾರದವರೆಗೂ ರಾಜಕೀಯ ವಿಚಾರವನ್ನು ಮಾತನಾಡುವುದಿಲ್ಲ. ಅಂದು ಅಧಿವೇಶನಕ್ಕೆ ಹೋಗುತ್ತೇನೆ. ತಮ್ಮನ್ನು ಭೇಟಿ ಮಾಡುವಂತೆ ಸ್ಪೀಕರ್ ಸೂಚಿಸಿದ್ದಾರೆ. ಅವರನ್ನು ಭೇಟಿಯಾಗುತ್ತೇನೆ' ಎಂದು ಅವರು ತಿಳಿಸಿದ್ದಾರೆ.
Breaking: ಸುಪ್ರೀಂಕೋರ್ಟ್ಗೆ ಮತ್ತೆ ಐವರು ಶಾಸಕರ ಅರ್ಜಿ
ಆದರೆ, ಕೆಲವು ಮೂಲಗಳ ಪ್ರಕಾರ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಮೊದಲು ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ ಮತ್ತು ಸದನಕ್ಕೂ ಹಾಜರಾಗುವುದಿಲ್ಲ ಎಂದು ಅವರು ಹೇಳಿದ್ದರು. ಈಗ ತಮ್ಮ ನಿಲುವನ್ನು ಸಡಿಲಿಸಿದಂತೆ ಕಾಣಿಸುತ್ತಿದೆ. ಹಾಗೆಯೇ ಕಾಂಗ್ರೆಸ್ನಿಂದ ಅಮಾನತಾಗಿರುವ ಶಾಸಕ ರೋಷನ್ ಬೇಗ್ ಅವರೂ ವಿಧಾನಸಭೆ ಕಲಾಪದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.
ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನವೊಲಿಸಲು ಕಾಂಗ್ರೆಸ್ ನಾಯಕರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಕೂಡ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ನಡುವೆ ಬಿಜೆಪಿಯ ಕೆಲವು ಮುಖಂಡರು ಶನಿವಾರ ಬೆಳಿಗ್ಗೆ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
'ನಾನು ಯಾವ ಶಾಸಕನಿಗೂ ರಾಜೀನಾಮೆ ಕೊಡುವಂತೆ ಹೇಳಿಲ್ಲ. ನಮ್ಮ ಮನೆಗೆ ಬಿಜೆಪಿ ನಾಯಕರು ಬಂದಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಕಮ್ಯುನಿಷ್ಟ್ ಸೇರಿದಂತೆ ಅನೇಕ ಪಕ್ಷಗಳ ನಾಯಕರು ಬರುತ್ತಾರೆ. ಯಾವ ಮುಖಂಡರು ಯಾವ ಮನೆಗೆ ಹೋಗಿದ್ದಾರೆಯೋ ಗೊತ್ತಿಲ್ಲ' ಎಂದು ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.