ಅಪ್ಪ ರಾಜೀನಾಮೆ ನೀಡಿದ್ದಕ್ಕೆ ಕಾರಣ ಒಬ್ಬ ಸೋ ಕಾಲ್ಡ್ ಲೀಡರ್: ಸೌಮ್ಯಾ ರೆಡ್ಡಿ
Recommended Video
ಬೆಂಗಳೂರು, ಜುಲೈ 13: 'ಪಕ್ಷದಲ್ಲಿ ಅಪ್ಪ ಮೂಲೆಗುಂಪಾಗಲು ಕಾರಣ ಒಬ್ಬ ಸೋಕಾಲ್ಡ್ ಸ್ಟೇಟ್ ಲೀಡರ್. ಅವರು ಏಕೆ ರಾಜೀನಾಮೆ ಕೊಟ್ಟರು ಎಂದು ನಾನು ಹೊಸದಾಗಿ ಹೇಳಬೇಕೇ? ಅದು ನಿಮಗೂ ಗೊತ್ತಿದೆ' ಎಂದು ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.
ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಸೋಮವಾರ ಕಲಾಪಕ್ಕೆ ಹಾಜರಾಗಲು ರಾಮಲಿಂಗಾ ರೆಡ್ಡಿ ನಿರ್ಧಾರ
'ನನ್ನ ಅಪ್ಪ 45 ವರ್ಷಗಳಿಂದ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಒಮ್ಮೆಯೂ ತಮಗೆ ಇಂಥದ್ದನ್ನು ಕೊಡಿ ಎಂದು ಕೇಳಿಲ್ಲ. ಕಾಂಗ್ರೆಸ್ನಲ್ಲಿ 45 ವರ್ಷಗಳಿಂದ ಇದ್ದು ಪಕ್ಷ ಕಟ್ಟಿದವರು ಎಷ್ಟು ಜನರಿದ್ದಾರೆ? ಒಂದು ಕಾಲದಲ್ಲಿ ಐದು ಜಿಲ್ಲೆಗಳಿಗೆ ಇವರೊಬ್ಬರೇ ಕಾಂಗ್ರೆಸ್ ಶಾಸಕರಾಗಿದ್ದರು. ಒಮ್ಮೆಯೂ ಸರ್ಕಾರಿ ಬಂಗಲೆಯನ್ನು ಅವರು ಬಳಸಲಿಲ್ಲ. ಏಳುಬಾರಿ ಶಾಸಕ ಮತ್ತು ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರನ್ನು ಮೈತ್ರಿ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ. ಇದಕ್ಕೆ ಖಾರಣ ಸೋಕಾಲ್ಡ್ ಲೀಡರ್. ಅವರ ಹೆಸರನ್ನು ಹೇಳಲು ನಾನು ಇಷ್ಟಪಡುವುದಿಲ್ಲ' ಎಂದು ಹೇಳಿದರು.
ನನ್ನ ತಂದೆಯನ್ನು ಕೆಲವು ನಾಯಕರು ಹೇಗೆ ನಡೆಸಿಕೊಂಡರು ಎನ್ನುವುದು ತಿಳಿದಿದೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದ ಅವರು ರಾಜೀನಾಮೆ ನೀಡಿದ ಬಳಿಕ ಮನವೊಲಿಕೆಗೆ ಮುಂದಾಗುತ್ತಿದ್ದಾರೆ. ಅವರಿಗೆ ನನ್ನ ತಂದೆಯ ಬೆಲೆ ಈಗ ಗೊತ್ತಾಯಿತೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜೀನಾಮೆ ನೀಡುವ ಬಗ್ಗೆ ಮೌನ ಮುರಿದ ಶಾಸಕಿ ಸೌಮ್ಯಾ ರೆಡ್ಡಿ
'ನಾನು ಕೂಡ ಒಂದು ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ರೂಪಾಯಿ ಕೂಡ ಲಂಚ ತೆಗೆದುಕೊಂಡಿಲ್ಲ. ಆ ರೀತಿಯ ಆರೋಪ ಸಾಬೀತಾದರೆ ಇವತ್ತೇ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಶಾಸಕಾಂಗ ಪಕ್ಷದ ಸಭೆಗೂ ನಾನು ಹಾಜರಾಗಿದ್ದೆ. ಕಾಂಗ್ರೆಸ್ ಸದಸ್ಯೆಯಾಗಿ ಶಾಸಕಿಯಾಗಿ ನನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಎಂದರು.
ಶಾಸಕರು ರೆಸಾರ್ಟ್ಗೆ ಹೋದರೆ ನಾನೇನು ಮಾಡುವುದು? ಜನರು ನಮ್ಮನ್ನು ಆಯ್ಕೆ ಮಾಡಿರುವುದು ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂದು. ಪದೇ ಪದೇ ರೆಸಾರ್ಟ್ಗೆ ಹೋಗುತ್ತಿರುವುದರಿಂದ ಜನರು ಬಾಯಿಗೆ ಬಂದಂತೆ ನಮ್ಮನ್ನು ಬೈಯ್ತಾರೆ ಎಂದು ಹೇಳಿದರು.