ಸದನದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ ನರಿ ಕಥೆ!
Recommended Video
ಬೆಂಗಳೂರು, ಜುಲೈ 19: ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲಿ ಮಧ್ಯಾಹ್ನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬಳಿಕ ಮಾತಿಗೆ ನಿಂತವರು ಒಂದುಗಂಟೆಗೂ ಹೆಚ್ಚು ಕಾಲ ಮಾತನಾಡುವ ಮೂಲಕ ಸದನದ ಸಮಯವನ್ನು ಎಳೆಯುವುದರಲ್ಲಿ ಯಶಸ್ವಿಯಾದರು.
ಅವರು ಮಾತು ನಿಲ್ಲಿಸುತ್ತಾರೆ ಎಂದು ತಾಳ್ಮೆಯಿಂದ ಕಾದಿದ್ದ ಬಿಜೆಪಿ ನಾಯಕರು ಮಾತ್ರವಲ್ಲ, ಸುದೀರ್ಘ ಭಾಷಣ ಕೇಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೂ ಸುಸ್ತಾದರು. ಮಾತಿನ ನಡುವೆ ಚಟಾಕಿಗಳನ್ನು ಹಾರಿಸಿ ಸದನದಲ್ಲಿ ನಗುವಿನ ಅಲೆ ಎಬ್ಬಿಸುವ ಮೂಲಕ ಆಗಾಗ್ಗೆ ಚೈತನ್ಯದ ಔಷಧ ನೀಡುತ್ತಿದ್ದರು.
ತಮ್ಮ ಸುದೀರ್ಘಾವಧಿ ಭಾಷಣದ ಉದ್ದಕ್ಕೂ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಗರೇ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು. ಜನರು ನಮ್ಮನ್ನು ಕಂಡರೆ ಚಂಬಲ್ ಕಣಿವೆ ಡಕಾಯಿತರಂತೆ ನೋಡುತ್ತಿದ್ದಾರೆ ಎಂದು ತಮಾಷೆಯಾಗಿ ಹೇಳಿದರು. ಬಿಜೆಪಿಯ ಈ ಐಡಿಯಾಗಳು ಒಂದು ದಿನ ಅವರಿಗೇ ಉಲ್ಟಾ ಹೊಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.
ನರಿ ಶುಭ ಸೂಚನೆಯೂ ಸುಳ್ಳಾಯಿತಲ್ಲ
'ನಾನು ಬೆಂಗಳೂರಿನಿಂದ ಅರಸೀಕೆರೆಗೆ ಹೋಗುವಾಗ ಶಾಸಕ ಬಾಲಕೃಷ್ಣ ಕರೆ ಮಾಡಿ, ಎಂಟಿಬಿ ನಾಗರಾಜ್ ಅವರ ಮನವೊಲಿಸಲಾಯಿತು ಎಂದು ಹೇಳಿದರು. ಆಗ ನೆಮ್ಮದಿಯಾಯಿತು. ಕೂಡಲೇ ಚಿಕ್ಕತಿರುಪತಿಗೆ ಹೋಗಿ, ಅಪ್ಪಾ ಈ ಸರ್ಕಾರ ಉಳಿದರೆ ನಿನ್ನ ದೇವಾಲಯ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಅನುದಾನ ಕೊಡುವುದಾಗಿ ಕೇಳಿಕೊಂಡೆ.
ಚರ್ಚೆ ಮುಗಿದ ಬಳಿಕವಷ್ಟೇ ವಿಶ್ವಾಸಮತ ಯಾಚನೆ: ಸಿದ್ದರಾಮಯ್ಯ
ಅಲ್ಲಿಂದ ಕಾರಿನಲ್ಲಿ ಮರಳುವಾಗ ನರಿಯೊಂದು ಎಡದಿಂದ ಬಲಕ್ಕೆ ಹೋಯಿತು. ತಕ್ಷಣ ಬಾಲಕೃಷ್ಣಗೆ ಕರೆ ಮಾಡಿ ನರಿ ಎಡದಿಂದ ಬಲಕ್ಕೆ ಹೋಯಿತು. ಕುಮಾರಣ್ಣನ ಸರ್ಕಾರ ಭದ್ರ. ಶುಭ ಸೂಚನೆ ಎಂದು ಖುಷಿ ಹಂಚಿಕೊಂಡೆ. ಆಗ ಬಾಲಕೃಷ್ಣ, ಅಣ್ಣಾ ಎಂಟಿಬಿ ವಿಮಾನ ಹತ್ತಿ ಬಾಂಬೆಗೆ ಹಾರಿಯಾಯಿತು ಎಂದಾಗ ದಿಗಿಲಾಯಿತು. ಅರೇ, ನರಿ ಶುಭ ಸೂಚನೆಯೂ ಸುಳ್ಳಾಯಿತಲ್ಲ ಎಂದುಕೊಂಡೆ' ಎಂದು ಹೇಳಿದಾಗ ಸದನ ನಗುವಿನಲ್ಲಿ ತುಂಬಿಹೋಯಿತು.
ಡಕಾಯಿತರಿಗೆ ಅವಮಾನ ಮಾಡಬೇಡಿ
'ಈ ಸರ್ಕಾರ ಯಾವಾಗ ಬಿದ್ದುಹೋಗುತ್ತದೆಯೋ ಎಂಬಂತಹ ವಾತಾವರಣ ಸೃಷ್ಟಿಸಲಾಗಿದೆ. ಸ್ಪಷ್ಟ ಬಹುಮತ ಹೊಂದಿರದೆ ಇದ್ದರೂ ಬಿಜೆಪಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ನಾವು ಅಧಿಕಾರಕ್ಕೆ ಬಂದ ಗಳಿಗೆಯಿಂದ ಇದುವರೆಗೂ ಒಂದು ದಿನವೂ ನೆಮ್ಮದಿಯಿಂದ ಆಡಳಿತ ನಡೆಸಲು ಬಿಡಲಿಲ್ಲ. ಇಲ್ಲಿರುವ ಯಾವ ಶಾಸಕರೂ ನೆಮ್ಮದಿಯಿಂದ ಇಲ್ಲ. ನಮ್ಮನ್ನು ಕಂಡರೆ ಜನರು ಚಂಬಲ್ ಡಕಾಯಿತರಂತೆ ನೋಡುತ್ತಿದ್ದಾರೆ. ನಮ್ಮ ಹೆಂಡತಿ, ಮಕ್ಕಳು ಸಹ ನಮ್ಮನ್ನು ನೋಡಿ ಹೆದರುವಂತಾಗಿದೆ' ಎಂದು ಹೇಳಿದರು. ಆಗ ಸ್ಪೀಕರ್ ರಮೇಶ್ ಕುಮಾರ್, 'ಪಾಪ ಡಕಾಯಿತರಿಗೆ ಅವಮಾನ ಮಾಡಬೇಡಿ' ಎಂದಾಗ ಸದನ ನಗೆಗಡಲಲ್ಲಿ ತೇಲಿತು.
ಸದನದಲ್ಲಿ ರೇಣುಕಾಚಾರ್ಯ ಮಹಾತ್ಮೆ ಬಿಚ್ಚಿಟ್ಟ ಸಿಎಂ ಕುಮಾರಸ್ವಾಮಿ
ಶ್ರೀಮಂತ ಪಾಟೀಲ್ ಅಜ್ಜ ಬಹಳ ಮುಗ್ಧ
'ಪಾಪ ಶ್ರೀಮಂತ ಪಾಟೀಲ್ ಅಜ್ಜ ಬಹಳ ಮುಗ್ಧ. ಆಯಪ್ಪನಿಗೆ ಏನೂ ಗೊತ್ತಿಲ್ಲ. ಅಂತಹ ವ್ಯಕ್ತಿಯನ್ನು ಇವರು ಹೊಡ್ಕೊಂಡು ಹೋದ್ರಲ್ಲ, ಅದು ಸರಿನಾ? ಆ ಅಜ್ಜ ರೆಸಾರ್ಟ್ನಲ್ಲಿ ನಮ್ಮ ಜೊತೆ ಇದ್ದರು. ರೆಸಾರ್ಟ್ನಿಂದಲೇ ಅವರನ್ನು ಹಾರಿಸಿಕೊಂಡು ಹೋದ್ರಲ್ಲಾ. ಬಹುಶಃ ಇಂತಹ ಐಡಿಯಾ ಇವರಿಗೆ ಬಿಟ್ಟರೆ ಇನ್ನು ಯಾರಿಗೂ ಬರಲು ಸಾಧ್ಯವಿಲ್ಲ. ಈಗಾಗಲೇ 15 ಶಾಸಕರನ್ನು ಹಾರಿಸಿಕೊಂಡು ಹೋಗಿದ್ದರಲ್ಲ, ಅವರಷ್ಟೇ ಸಾಕಾಗಿರಲಿಲ್ಲವಾ ನಿಮಗೆ ಈ ಸರ್ಕಾರ ಬೀಳಿಸಲು. ಇನ್ನು ಒಬ್ಬ ಶಾಸಕರನ್ನು ಏಕೆ ಹಾರಿಸಿಕೊಂಡು ಹೋದಿರಿ?' ಎಂದು ಬಿಜೆಪಿ ನಾಯಕರನ್ನು ಕೆಣಕಿದರು.
'ಬಿಜೆಪಿಯಿಂದ ರಾಜ್ಯಪಾಲರ ಕಚೇರಿಯ ದುರುಪಯೋಗ': ಸಿಪಿಐಎಂ
ಬಿಜೆಪಿಯವರು ಟ್ರೀಟ್ಮೆಂಟ್ ಕೊಟ್ಟರಾ?
'ಮದ್ರಾಸ್ನಲ್ಲಿ ಶ್ರೀಮಂತ್ ಪಾಟೀಲ್ ಅವರ ಹಾರ್ಟು ಜುಂಜುಂ ಅಂತಾ? ಬಿಜೆಪಿಯವರು ಹಿಡಿದುಕೊಂಡು ಟ್ರೀಟ್ಮೆಂಟ್ ಕೊಟ್ಟರಾ? ಈ ಅಜ್ಜಂಗೆ ಬಾಂಬೆಯಲ್ಲಿಯೇ ಟ್ರೀಟ್ಮೆಂಟ್ ಬೇಕಿತ್ತಾ? ಈ ಫೋಟೊ ತೆಗೆದು ನೋಡಿ. ಇದು ಆಸ್ಪತ್ರೆಯ ಫೋಟೊ ಅಲ್ಲ. ಕನ್ನಡಕ ಬೇರೆ ಐತೆ' ಎಂದು ತಮಾಷೆಯ ಧಾಟಿಯಲ್ಲಿ ಹೇಳಿದರು.
ಸಿಎಂ ಹಾಗೂ ಆಡಳಿತ ಪಕ್ಷದ ನಾಯಕರಿಗೆ ಕೊಡಬಾರದ ನೋವು ಕೊಟ್ಟಿದ್ದಾರೆ. ನೀವು ಉಪಯೋಗಿಸಿದ ತಲೆಗಳೆಲ್ಲ ನಿಮಗೇ ಉಲ್ಟಾ ಹೊಡೆಯುತ್ತವೆ. 2018ರ ವಿಧಾನಸಭೆಯ ಆಯ್ಕೆ ಮತ್ತೆ ಬರುವಂತೆ ಆಗಬಾರದು. ಈ ರೀತಿ ಫಲಿತಾಂಶದಿಂದಾಗಿ ಯಾವುದೇ ಶಾಸಕರು ಅಭಿವೃದ್ಧಿ ಕೆಲಸವನ್ನು ಮಾಡಲು ಸಾಧ್ಯವಾಗಿಲ್ಲ ಎಂದರು.