BREAKING: ಜೆಡಿಎಸ್ ಸಭೆ ಆರಂಭ; ಜೆಡಿಎಸ್ ಟಿಕೆಟ್ ಫೈನಲ್?
ಬೆಂಗಳೂರು, ಜೂ. 15: ವಿಧಾನ ಪರಿಷತ್ ಟಿಕೆಟ್ ಪಡೆಯಲು ಎಲ್ಲ ಪಕ್ಷಗಳಲ್ಲಿಯೂ ತೀವ್ರ ಪೈಪೋಟಿ ಶುರುವಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ ಪ್ರವೇಶಿಸಲು ಕನಿಷ್ಠ 32 ಶಾಸಕರ ಬೆಂಬಲ ಅಗತ್ಯವಾಗಿದೆ. ಹೀಗಾಗಿ ಜೆಡಿಎಸ್ನಿಂದ ಒಬ್ಬರು ವಿಧಾನ ಪರಿಷತ್ ಪ್ರವೇಶ ಸಾಧ್ಯವಾಗಲಿದೆ. ಜೆಡಿಎಸ್ನಲ್ಲಿ ಆ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.
Recommended Video
ಇರುವ ಒಂದೇ ಸ್ಥಾನಕ್ಕೆ ಹಲವಾರು ಜನ ಆಕಾಂಕ್ಷಿಗಳು ಜೆಡಿಎಸ್ ಪಕ್ಷದಲ್ಲಿದ್ದಾರೆ. ಸಧ್ಯ ಸ್ಥಾನ ತೆರವು ಮಾಡಲಿರುವ ಪರಿಷತ್ ಸದಸ್ಯ ಟಿ ಎ ಶರವಣ ಅವರು ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ಜೊತೆಗೆ ಮೊನ್ನೆಯಷ್ಟೇ ರಾಜ್ಯಸಭೆಯಿಂದ ನಿವೃತ್ತಿಯಾಗಿರುವ ಕುಪೇಂದ್ರ ರೆಡ್ಡಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ರಾಜ್ಯಸಭೆ ಪ್ರವೇಶಿಸಲು ನೆರವಾಗಿದ್ದಾರೆ. ಹೀಗಾಗಿ ಅವರೂ ಕೂಡ ಜೆಡಿಎಸ್ನಿಂದ ವಿಧಾನ ಪರಿಷತ್ ಪ್ರವೇಶಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ.
ಪರಿಷತ್ ಚುನಾವಣೆ: ಇವರೇನಾದರೂ ಅಭ್ಯರ್ಥಿಯಾದರೆ, ಜೆಡಿಎಸ್ ಇಮೇಜಿಗೆ ಭರ್ಜರಿ ಟಾನಿಕ್
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಜೆಡಿಎಸ್ ಕಛೇರಿಯಲ್ಲಿ ಸಭೆ ಆರಂಭವಾಗಿದ್ದು, ಪರಿಷತ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಶಾಸಕರು, ಮತ್ತು ಪರಿಷತ್ ಸದಸ್ಯರ ಅಭಿಪ್ರಾಯ ಸಂಗ್ರಹವನ್ನು ಇಬ್ಬರು ನಾಯಕರು ಮಾಡುತ್ತಿದ್ದಾರೆ. ಸಭೆ ಬಳಿಕ ಯಾರಿಗೆ ಟಿಕೆಟ್ ಎಂಬ ಬಗ್ಗೆ ಘೋಷಣೆ ಮಾಡಲಾಗುತ್ತದೆ.
ಆದರೆ ಜೆಡಿಎಸ್ ಪಕ್ಷದ ಸಂಪ್ರದಾಯ ನೋಡುವುದಾದರೆ ಕೇವಲ ಅಭಿಪ್ರಾಯ ಸಂಗ್ರಹ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ವಿವೇಚನೆಯನ್ನು ದೇವೇಗೌಡರಿಗೆ ನೀಡುವ ಸಾಧ್ಯತೆ ಹೆಚ್ಚು. ಬುಧವಾರ ದೇವೇಗೌಡರು ಅಧಿಕೃತವಾಗಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಘೋಷಿಸುವ ಸಾದ್ಯತೆ ಇದೆ. ಬಹುತೇಕವಾಗಿ ಕುಪೇಂದ್ರ ರೆಡ್ಡಿ ಹಾಗೂ ಶರವಣ ಅವರಲ್ಲಿ ಒಬ್ಬರಿಗೆ ಜೆಡಿಎಸ್ ಟಿಕೆಟ್ ಸಿಗಲಿದೆ ಎಂಬುದು ಜೆಡಿಎಸ್ ಮೂಲಗಳ ಮಾಹಿತಿ.