ದೆಹಲಿ ಮಾದರಿಯಲ್ಲಿ ಟ್ರಾಫಿಕ್ ನಿಯಂತ್ರಣ: ಸಮ-ಬೆಸ ಜಾರಿಗೆ ಚಿಂತನೆ
ಬೆಂಗಳೂರು, ನವೆಂಬರ್ 11 : ದೆಹಲಿಯಂತೆ ಬೆಂಗಳೂರು ಸಹ ವಾಯು ಮಾಲಿನ್ಯ ಅಧಿಕವಾಗಿ ನರಳುವ ಮುನ್ನವೇ ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಈಗ ಮೂರನೇ ಬಾರಿಗೆ ಸಮ-ಬೆಸ ಸಂಖ್ಯೆಯ ನಿಯಮ ಜಾರಿಗೆ ತರುತ್ತಿದ್ದಾರೆ. ಈ ಬಾರಿ ಅಲ್ಲಿ ಯಶಸ್ವಿಯಾದರೆ ಅದನ್ನು ಬೆಂಗಳೂರಿನಲ್ಲಿಯೂ ಜಾರಿಗೊಳಿಸುವುದಾಗಿ ರಾಮಲಿಂಗಾರೆಡ್ಡಿ ಶನಿವಾರ(ನ.11) ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲಿ ಹೇಳಿಕೆ ನೀಡಿದ್ದಾರೆ.
ಸಮ-ಬೆಸ ನಿಯಮ ದೆಹಲಿ ಮಾಲಿನ್ಯ ನಿಯಂತ್ರಿಸುತ್ತದೆ ಎಂಬುದು ಸಾಬೀತಾದರೆ ಅದನ್ನು ಬೆಂಗಳೂರಿನಲ್ಲೂ ಜಾರಿಗೊಳಿಸುವಂತೆ ಸಾರಿಗೆ ಇಲಾಖೆಗೆ ಸೂಚಿಸಲಾಗುವುದು ಮತ್ತು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಂತಹ ಕೆಲವು ನಗರಗಳಲ್ಲಿ ಕೇವಲ ಸಮ-ಬೆಸ ನಿಯಮದಿಂದ ಮಾತ್ರ ಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ವಾಹನಗಳ ಪ್ರಮಾಣ ಕಡಿಮೆಯಾಗಬೇಕು .2013ರಲ್ಲಿ ನಗರದಲ್ಲಿ 54ಲಕ್ಷ ವಾಹನಗಳಿದ್ದವು.ಕಳೆದ ನಾಲ್ಕು ವರ್ಷಗಳಲ್ಲಿ 12ಲಕ್ಷ ವಾಹನಗಳು ಹೆಚ್ಚಾಗಿದೆ ಎಂದು ಈ ಮೊದಲೇ ಮಾಹಿತಿ ನೀಡಿದ್ದರು.
ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಅಪಾಯದ ಮಟ್ಟಕ್ಕೆ ಏರಿದ್ದು, ಅದನ್ನು ತಡೆಯುವುದಕ್ಕಾಗಿ ದೆಹಲಿ ಸರ್ಕಾರ ನವೆಂಬರ್ 13 ರಿಂದ 5 ದಿನಗಳ ಕಾಲ ಸಮ-ಬೆಸ ನಿಯಮ ಜಾರಿಗೆ ತರುತ್ತಿದೆ.