ಸದನಕ್ಕೆ ಸುಳ್ಳು ಹೇಳಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 20: ಸದನಕ್ಕೆ ಸುಳ್ಳು ಮಾಹಿತಿ ನೀಡಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿಕ್ಕಿಬಿದ್ದಿದ್ದಾರೆ.
ಸದನದಲ್ಲಿ ಬೆಂಗಳೂರಲ್ಲಿ ಡಿಸೆಂಬರ್ 18 ರಂದು 144 ಸೆಕ್ಷನ್ ಸಮಯದಲ್ಲಿ ನಡೆದ ಪ್ರತಿಭಟನೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಅಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು ಪೊಲೀಸರು ಬಲವಂತದಿಂದ ಎಳೆದೊಯ್ದ ಘಟನೆ ಬಗ್ಗೆ ಪ್ರಸ್ತಾಪವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, 'ರಾಮಚಂದ್ರ ಗುಹಾ ಅವರನ್ನು ಎಳೆದಾಡಬಾರದಿತ್ತು, ಘಟನೆ ನಂತರ ನಾನೇ ಗುಹಾ ಅವರಿಗೆ ಕರೆ ಮಾಡಿ ಕ್ಷಮೆ ಕೋರಿದ್ದೇನೆ' ಎಂದರು.
ಆದರೆ ಈ ಬಗ್ಗೆ ಟ್ವಿಟ್ಟರ್ನಲ್ಲಿ ಸ್ಪಷ್ಟನೆ ಕೊಟ್ಟಿರುವ ರಾಮಚಂದ್ರ ಗುಹಾ, 'ಕರ್ನಾಟಕದ ಗೃಹ ಮಂತ್ರಿಗಳು ನನಗೆ ಯಾವುದೇ ಫೋನ್ ಕರೆ ಮಾಡಿಲ್ಲ, ಒಂದೊಮ್ಮೆ ಅವರು ಫೋನ್ ಕರೆ ಮಾಡಿ ಕ್ಷಮೆ ಕೋರಿದ್ದರೂ ಸಹ ನಾನು ಅವರ ಕ್ಷಮೆಯನ್ನು ಮನ್ನಿಸುತ್ತಿರಲಿಲ್ಲ' ಎಂದಿದ್ದಾರೆ.
''144 ಸೆಕ್ಷನ್ ಅನ್ನು ಕಾನೂನು ಬಾಹಿರವಾಗಿ ಹೇರಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗಾಗಿ ನಾನು ಅಂದು ಸರ್ಕಾರದ ಕ್ರಮದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದ ಸಾವಿರಾರು ಮಂದಿಯಲ್ಲಿ ಒಬ್ಬ ಎನಿಸಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತೀನಿ'' ಎಂದಿದ್ದಾರೆ.