ಕಸ ಸಮಸ್ಯೆ; ಬಿಬಿಎಂಪಿ ವಿಸರ್ಜಿಸುವುದಾಗಿ ಎಚ್ಚರಿಸಿದ ಹೈಕೋರ್ಟ್
ಬೆಂಗಳೂರು, ಜನವರಿ 30: ಬೆಂಗಳೂರಿನ ಕಸದ ಸಮಸ್ಯೆಯ ಬಗ್ಗೆ ಕರ್ನಾಟಕ ಹೈಕೋರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಲೆ ತೀವ್ರ ಕಿಡಿ ಕಾರಿದೆ.
ಈ ಕುರಿತು ಗುರುವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ''ಘನತ್ಯಾಜ್ಯ ವಿಲೇವಾರಿಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಈ ವಿಚಾರದಲ್ಲಿ ನಾವು ಕಠಿಣ ತೀರ್ಮಾನ ತೆಗೆದುಕೊಳ್ಳದೇ ಅನ್ಯ ಮಾರ್ಗವಿಲ್ಲ. ಇಲ್ಲದಿದ್ದರೆ, ವರ್ಷಗಳೇ ಗತಿಸಿದರೂ ಇದಕ್ಕೆ ಪರಿಹಾರ ಸಿಗುವುದಿಲ್ಲ'' ಎಂದು ಎಚ್ಚರಿಸಿದೆ.
ವಾಹನಗಳ ನಾಮಫಲಕ ಉಲ್ಲಂಘನೆ; ಹೈಕೋರ್ಟ್ಗೆ ಸರ್ಕಾರ ಹೇಳಿದ್ದೇನು?
''ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗಿರುವ ಪಾಲಿಕೆಯನ್ನು ವಿಸರ್ಜಿಸಿ ಆಡಳಿತಾಧಿಕಾರಿ ನೇಮಿಸಬೇಕು. ಇಲ್ಲವೇ ನಗರದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕು' ಎಂದು ಪೀಠ ಬಿಬಿಎಂಪಿಗೆ ಚಾಟಿ ಬೀಸಿದೆ.
''ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಸಂಬಂಧ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಲಿದ್ದು, ಕ್ರಮ ಕೈಗೊಳ್ಳಲು 2 ವಾರ ಕಾಲಾವಕಾಶ ನೀಡುವಂತೆ ಅಡ್ವೋಕೇಟ್ ಜನರಲ್ ಮನವಿ ಮಾಡಿದ ಹಿನ್ನೆಲೆಯಲ್ಲಿ, ಕೋರ್ಟ್ ಯಾವುದೇ ಕಠಿಣ ಆದೇಶ ನೀಡಲು ಬಯಸುವುದಿಲ್ಲ'' ಎಂದು ನ್ಯಾಯಮೂರ್ತಿ ಪ್ರಭುಲಿಂಗ ನಾವಡಗಿ ನೇತೃತ್ವದ ಪೀಠ ಹೇಳಿದೆ.