ಸರ್ಕಾರಕ್ಕೆ ಛಾಟಿ ಬೀಸಿದ ಕರ್ನಾಟಕ ಹೈಕೋರ್ಟ್, ಯಾಕೆ ಗೊತ್ತಾ?
ನವದೆಹಲಿ, ಜನವರಿ.31: ಕಾವೇರಿ ನದಿ ಶುದ್ಧೀಕರಣ ಮತ್ತು ಪುನಶ್ಚೇತನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ತರಾಟೆ ತೆಗದುಕೊಂಡಿದೆ. ಕೋರ್ಟ್ ಆದೇಶ ಪಾಲನೆ ಮಾಡದ ಅಧಿಕಾರಿಗಳ ಪಟ್ಟಿ ನೀಡುವಂತೆ ಖಡಕ್ ಆದೇಶ ಹೊರಡಿಸಿದೆ.
ಕಾವೇರಿ ನದಿ ಶುದ್ಧೀಕರಣ ಮತ್ತು ಪುನಶ್ಚೇತನಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಆ ಮೂಲಕ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಆಯಾ ಇಲಾಖೆಯ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಹೆಸರು ಮತ್ತು ಹುದ್ದೆಯನ್ನೊಳಗೊಂಡ ಪಟ್ಟಿಯನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.
ಬೆಂಗಳೂರಿಗಾಗಿ ಥೀಮ್ ಸಾಂಗ್ ಹಾಡಿದ ಗಾಯಕ ಲಕ್ಕಿ ಅಲಿ...
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತು. ಸರ್ಕಾರವು ಒಂದು ವೇಳೆ ಅಧಿಕಾರಿಗಳ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸದಿದ್ದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ಧವೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕಾವೇರಿ ಶುದ್ಧೀಕರಣದ ವರದಿ ಕೇಳಿದ್ದ ಕೋರ್ಟ್:
ಕಳೆದ ಜನವರಿ.06ರಂದು ಕಾವೇರಿ ನದಿ ನೀರು ಶುದ್ಧೀಕರಣ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಸಲ್ಲಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಇನ್ನು, ಈ ಕಾರ್ಯಯೋಜನೆಯಲ್ಲಿ ಹಲವು ಇಲಾಖೆಗಳ ಇಂಜಿನಿಯರ್ಸ್ ಕೆಲಸ ಮಾಡುತ್ತಿದ್ದಾರೆ ಎಂದು ನಿಗಮವು ವಾದಿಸಿತ್ತು. ಇದಕ್ಕೆ ಕೆರಳಿದ ಹೈಕೋರ್ಟ್, ಇಂಜಿನಿಯರ್ಸ್ ಏನು ಸರ್ಕಾರವೇ ಎಂದು ಪ್ರಶ್ನೆ ಮಾಡಿದೆ.
ಮಡಿಕೇರಿ ಟು ತಲಕಾವೇರಿ ಮತ್ತು ನಾಪೋಕ್ಲು ಟು ತಲಕಾವೇರಿಗೆ ಭಾಗ ಮಂಡಲ ಫ್ಲೈ ಓವರ್ ಮತ್ತು ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಕ್ಕೆ ಛಾಟಿ ಬೀಸಿದೆ.