ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್: ಹೈಕೋರ್ಟ್ನಿಂದ ಸ್ವಯಂಪ್ರೇರಿತ ಪಿಐಎಲ್
ಬೆಂಗಳೂರು, ಮಾರ್ಚ್ 6: ನಗರದಲ್ಲಿ ಆಗಾಗ ನಡೆಯುವ ಪ್ರತಿಭಟನೆಗಳು ಮತ್ತು ಮೆರವಣಿಗೆಗಳಿಂದ ಉಂಟಾಗುವ ಸಂಚಾರ ದಟ್ಟಣೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಕರ್ನಾಟಕ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿದೆ.
ಮಾರ್ಚ್ 2ರಂದು ವಿವಿಧ ಪ್ರತಿಭಟನೆಗಳಿಂದ ಬೆಳಿಗ್ಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದರ ಕುರಿತಾದ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸುವಂತೆ ಕೋರಿದ್ದರು. ಅದರ ಆಧಾರದಲ್ಲಿ ಮುಖ್ಯ ನ್ಯಾ. ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಸ್ವಯಂಚಾಲಿತ ಅರ್ಜಿ ದಾಖಲಿಸಿಕೊಂಡಿದೆ.
ಕುಂದಲಹಳ್ಳಿ ಅಂಡರ್ಪಾಸ್ ಕಾಮಗಾರಿ ನಿಧಾನಗತಿ, ಟ್ರಾಫಿಕ್ ಜಾಮ್
ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರನ್ನು ಒಳಗೊಂಡ ನ್ಯಾಯಪೀಠ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ, ಪೊಲೀಸ್ ಆಯುಕ್ತರು, ಬಿಬಿಎಂಪಿ ಆಯುಕ್ತರು ಮತ್ತು ಪ್ರಮುಖ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿಸಿದೆ.
'ಕೇಂದ್ರ ಸರ್ಕಾರದ ವಸತಿ ಇಲಾಖೆಯ ಸೂಚ್ಯಂಕದಲ್ಲಿ ಬೆಂಗಳೂರು ಅತ್ಯಂತ ವಾಸಯೋಗ್ಯ ನಗರ ಎಂದು ಹೇಳಲಾಗಿದೆ. ಆದ್ದರಿಂದ ನಗರದಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸಂಬಂಧಿಸಿದ ಎಲ್ಲರ ಜವಾಬ್ದಾರಿ. ಬೆಳಿಗ್ಗೆ ಮತ್ತು ಸಂಜೆ ನಗರದ ಹೃದಯಭಾಗದಲ್ಲಿ ಸಂಚಾರ ದಟ್ಟಣೆ ನಿಭಾಯಿಸುವುದು ಸವಾಲಿನ ಕೆಲಸ' ಎಂದು ಪೀಠ ಹೇಳಿತು.
ಟ್ರಾಫಿಕ್: ಬೆಂಗಳೂರು ವಿಶ್ವದಲ್ಲೇ 6ನೇ ಅತ್ಯಂತ ಕೆಟ್ಟ ನಗರ
'ಪ್ರತಿಭಟನೆಗಳಿಂದಾಗಿ ನಗರದಲ್ಲಿ ಅನೇಕ ಬಾರಿ ಜನರು ತೊಂದರೆ ಅನುಭವಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ಮೂಲಭೂತ ಹಕ್ಕಾಗಿದ್ದರೂ, ಅದು ಇತರರ ಹಕ್ಕುಗಳ ಮೇಲೆ ಪರಿಣಾಮ ಬೀರಬಾರದು. ಪ್ರತಿಭಟನೆಗಾಗಿ ನಿಗದಿ ಮಾಡಿರುವ ಸ್ವಾತಂತ್ರ್ಯ ಉದ್ಯಾನವನ್ನು ಅದಕ್ಕೆ ಬಳಸಿಕೊಳ್ಳಬೇಕು' ಎಂದು ಸಲಹೆ ನೀಡಿತು.