ಶಾಸಕ ಸ್ಥಾನದಿಂದ ಅನರ್ಹ ಪ್ರಕರಣ : ಮುನಿರತ್ನಗೆ ಹೈಕೋರ್ಟ್ ಸಮನ್ಸ್
ಬೆಂಗಳೂರು, ಆಗಸ್ಟ್ 29 : ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನಗೆ ಸಮನ್ಸ್ ನೀಡಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.
ರಾಜರಾಜೇಶ್ವರಿ ನಗರ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಎಂ.ಮುನಿರಾಜು ಗೌಡ ಅವರು ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಮುನಿರತ್ನ ಶಾಸಕತ್ವ ಅನರ್ಹಗೊಳಿಸುವಂತೆ ಸ್ಪೀಕರ್ಗೆ ಮನವಿ
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ಏಕ ಸದಸ್ಯ ಪೀಠ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 13 ಅಭ್ಯರ್ಥಿಗಳಿಗೆ ನೋಟಿಸ್ ನೀಡಲು ಹಾಗೂ ಶಾಸಕ ಮುನಿರತ್ನ ಅವರಿಗೆ ಸಮನ್ಸ್ ನೀಡಲು ಆದೇಶ ನೀಡಿತು. ವಿಚಾರಣೆಯನ್ನು ಸೆ.28ಕ್ಕೆ ಮುಂದೂಡಿತು.
ಮೇ 28ರಂದು ಆರ್.ಆರ್.ನಗರ ಕ್ಷೇತ್ರದ ಮತದಾನ ನಡೆದಿತ್ತು. ಮುನಿರತ್ನ ಅವರು 108064 ಮತಗಳನ್ನು ಪಡೆದು ಚುನಾವಣೆಯಲ್ಲಿ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಅವರು 82,572 ಮತಗಳನ್ನು ಪಡೆದಿದ್ದರು.
ರಾಜರಾಜೇಶ್ವರಿ ನಗರದ ಚುನಾವಣೆ : ಯಾರಿಗೆ ಎಷ್ಟು, ಮತ?
ಅರ್ಜಿದಾರರ ಪರವಾಗಿ ವಾದ ಮಂಡನೆ ಮಾಡಿದ ವಕೀಲ ಎಂ.ಶಿವಪ್ರಕಾಶ್, 'ಚುನಾವಣೆ ವೇಳೆ ಜಾಲಹಳ್ಳಿಯ ಫ್ಲಾಟ್ನಲ್ಲಿ 10 ಸಾವಿರ ಮತದಾರರ ಗುರುತಿನ ಚೀಟಿ ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಈ ಬಗ್ಗೆ ಚುನಾವಣಾಧಿಕಾರಿಗಳು ಹತ್ತು ಜನರ ವಿರುದ್ಧ ದೂರು ದಾಖಲು ಮಾಡಿದ್ದರು' ಎಂದರು.
'ಮುನಿರತ್ನ ಅವರು ಮತದಾರರರಿಗೆ ಸೀರೆ, ಕುಕ್ಕರ್ ಹಂಚಿ ನೀತಿ ಸಂಹಿತೆ ಉಲ್ಲಂಘಟನೆ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ನಿಗದಿ ಮಾಡಿದ 25 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಆದ್ದರಿಂದ ಅವರ ಶಾಸಕ ಸ್ಥಾನ ಅನರ್ಹಗೊಳಿಸಿ ಅತಿ ಹೆಚ್ಚು ಮತಗಳಿಸಿರುವ 2ನೇ ಅಭ್ಯರ್ಥಿಯನ್ನು ಜಯಶಾಲಿಯಾಗಿ ಘೋಷಣೆ ಮಾಡಬೇಕು' ಎಂದು ಮನವಿ ಮಾಡಿದರು.