ಪೊಲೀಸರ ವರ್ಗಾವಣೆ: ಸಿದ್ದರಾಮಯ್ಯ, ದಿನೇಶ್ ಸೇರಿ 24 ಮಂದಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಆಗಸ್ಟ್ 21: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ 24 ಮಂದಿಗೆ ನೋಟಿಸ್ ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಕಾನೂನು ಬಾಹಿರವಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ವಿರುದ್ಧ ಕ್ರಮಕ್ಕೆ ಕೋರ್ಟ್ ಸೂಚನೆ
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ಎನ್.ಎ. ಹ್ಯಾರಿಸ್, ಶ್ಯಾಮನೂರು ಶಿವಶಂಕರಪ್ಪ, ಆರ್. ನರೇಂದ್ರ, ಅಖಂಡ ಶ್ರೀನಿವಾಸಮೂರ್ತಿ, ಬಿ. ನಾಗೇಂದ್ರ, ಡಾ. ಯತೀಂದ್ರ, ಬಿ,ಕೆ. ಸಂಗಮೇಶ್ವರ, ಎಸ್.ಎನ್. ಸುಬ್ಬಾರೆಡ್ಡಿ, ವಿ. ಮುನಿಯಪ್ಪ, ಅನಿಲ್ ಚಿಕ್ಕಮಾದು, ಬಿ.ಎಸ್. ಸುರೇಶ್, ಎಂ. ಕೃಷ್ಣಪ್ಪ, ಬಿ. ಶಿವಣ್ಣ, ಕನೀಜ್ ಫಾತಿಮಾ, ಸಂಸದ ಡಾ. ಉಮೇಶ್ ಜಾಧವ್, ಮಾಜಿ ಶಾಸಕ ಸಂತೋಷ್ ಲಾಡ್, ಅನರ್ಹ ಶಾಸಕರಾಗಿರುವ ರೋಷನ್ ಬೇಗ್, ಕೆ. ಸುಧಾಕರ್ ಮತ್ತು ಮುನಿರತ್ನ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಲಾಗಿದೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜನಪ್ರತಿನಿಧಿಗಳು ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡಿದ್ದರು. ಈ 24 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು. ಅವರ ವಿರುದ್ಧ ಎಸ್ಐಟಿ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ. ಶಶಿಧರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಹಾಗೆಯೇ, ಪೊಲೀಸ್ ಸಿಬ್ಬಂದಿ ನೇಮಕಾತಿ ಮಂಡಳಿ ಮೂಲಕವೇ ಪೊಲೀಸರ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಸಹ ಅವರು ಕೋರಿದ್ದರು. ಈ ಪ್ರಕರಣ ಸಂಬಂಧ 24 ಮಂದಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಲಾಗಿದೆ.