ಖಾಲಿ ಫುಟ್ ಪಾತ್ ತೋರ್ಸಿ, ಅಂಗಡಿ ಹಾಕೋತೀನಿ: ಹೈಕೋರ್ಟ್
ಬೆಂಗಳೂರು, ಜು 2: ಕಳೆದ ಐದಾರು ವರ್ಷಗಳಲ್ಲಿ ಕಂಡು ಕೇಳರಿಯದ ಭ್ರಷ್ಟಾಚಾರದಿಂದ ವ್ಯಾಪಕ ಟೀಕೆಗೆ ಒಳಗಾಗಿರುವ ಬಿಬಿಎಂಪಿಗೆ ರಾಜ್ಯ ಉಚ್ಚ ನ್ಯಾಯಾಲಯ ಬುಧವಾರ (ಜು 1) ಮತ್ತೊಮ್ಮೆ ಮಹಾ ಮಂಗಳಾರತಿ ಮಾಡಿದೆ.
ನೂತನವಾಗಿ ಅಧಿಕಾರ ಸ್ವೀಕರಿಸಿ ಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಮುಖರ್ಜಿ, ಬೆಂಗಳೂರಿನಲ್ಲಿ ಎಲ್ಲಾದರೂ ಖಾಲಿ ಫುಟ್ ಪಾತ್ ಇದ್ದರೆ ತಿಳಿಸಿ ನಾನೂ ಆ ಜಾಗವನ್ನು ಆಕ್ರಮಿಸಿ ಕೊಳ್ಳುತ್ತೇನೆ ಎನ್ನುವ ಮೂಲಕ ಬಿಬಿಎಂಪಿ ಆಡಳಿತ ಶೈಲಿಗೆ ಛೀಮಾರಿ ಹಾಕಿದ್ದಾರೆ. (ಬಿಬಿಎಂಪಿ ಚುನಾವಣೆ: ಗುಪ್ತಚರ ವರದಿ)
ಫುಟ್ ಪಾತ್ ಇರೋದು ಸಾರ್ವಜನಿಕರು ನಡೆದಾಡಲು, ವ್ಯಾಪಾರ ಮಾಡಲು ಅಲ್ಲ. ಫುಟ್ ಪಾತ್ನಲ್ಲಿ ಅಂಗಡಿ ಇಡೋದೇ ಮೊದಲು ತಪ್ಪು, ಅದನ್ನು ಆಕ್ರಮಿಸಿಕೊಳ್ಳೋದು ಬೇರೆ. ಬಿಬಿಎಂಪಿಯವರು ಏನು ಕೆಲಸ ಮಾಡ್ತಾ ಇದ್ದಾರೆಂದು ನ್ಯಾ. ಮುಖರ್ಜಿ, ಬಿಬಿಎಂಪಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಾಜಿನಗರದ ಆರು ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟಿನ ಕಾನೂನು ಬಗ್ಗೆ ಮಾತನಾಡುವ ನೀವು, ಮೊದಲು ಖಾಲಿ ಇರೋ ಫುಟ್ ಪಾತ್ ತೋರಿಸಿ, ನಾನೂ ಅಲ್ಲೇ ಅಂಗಡಿ ಇಡುತ್ತೇನೆಂದು ಲೇವಡಿ ಮಾಡಿದ್ದಾರೆ.
ಫುಟ್ ಪಾತ್ ಅತಿಕ್ರಮಣದಿಂದ ಜನ ಓಡಾಡುವುದೇ ಕಷ್ಟವಾಗಿದೆ, ಇಲ್ಲಿನ ವ್ಯಾಪಾರಿಗಳನ್ನು ಖಾಲಿ ಮಾಡಲು ಆದೇಶ ನೀಡಬೇಕೆಂದು ರಾಜಾಜಿನಗರದ ಆರು ಮಂದಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಉತ್ತರಿಸುತ್ತಿದ್ದ ಬಿಬಿಎಂಪಿ ವಕೀಲರು, ಫುಟ್ ಪಾತ್ ಮೇಲೆ ಅಂಗಡಿ ತೆರೆಯಲು ಸುಪ್ರೀಂಕೋರ್ಟಿನ ಕೆಲ ನಿಯಮಾವಳಿಗಳ ಪ್ರಕಾರ ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ನಿಲುವನ್ನು ಸಮರ್ಥಿಸಿ ಕೊಂಡಿದ್ದರು.