ಡಾಕ್ಟರ್ ಗಳಿಗೆ ಬಿಗ್ ರಿಲೀಫ್ ನೀಡಿದ ಹೈ ಕೋರ್ಟ್ ತಡೆಯಾಜ್ಞೆ
ನೋಂದಾವಣಿ ನವೀಕರಣ ಕುರಿತಂತೆ ಕೆಎಂಸಿ ಆದೇಶಕ್ಕೆ ನ್ಯಾ. ಎ.ಎಸ್. ಬೋಪಣ್ಣರಿಂದ ಮಧ್ಯಂತರ ತಡೆಯಾಜ್ಞೆ
ಬೆಂಗಳೂರು, ಫೆಬ್ರವರಿ 2: ನವೀಕರಣಗೊಳ್ಳದ ವೈದ್ಯರ ನೋಂದಾವಣಿಗಳನ್ನು ರದ್ದುಗೊಳಿಸುವ ಬಗ್ಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ (ಕೆಎಂಸಿ) ನೀಡಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನೋಂದಾವಣಿಗಳ ನವೀಕರಣಕ್ಕೆ ಶುಲ್ಕ ನೀಡದ ಹಾಗೂ ನವೀಕರಣಕ್ಕಾಗಿ ಅರ್ಜಿಗಳನ್ನು ಸಲ್ಲಿಸದ ವೈದ್ಯರ ನೋಂದಾವಣಿಗಳನ್ನು ರದ್ದುಗೊಳಿಸಲು ಕೆಎಂಸಿ ಇತ್ತೀಚೆಗೆ ನಿರ್ಧಾರ ಕೈಗೊಂಡಿತ್ತು. ಆದರೀಗ, ಹೈಕೋರ್ಟ್ ಅದಕ್ಕೆ ಬ್ರೇಕ್ ಹಾಕಿರುವುದರಿಂದ ಹಲವಾರು ವೈದ್ಯರು ನಿಟ್ಟುಸಿರು ಬಿಡುವಂತಾಗಿದೆ.
ಕೆಎಂಸಿಯ ಈ ನಿರ್ಧಾರದ ವಿರುದ್ಧ ಬಿ.ಎಸ್. ಕಕ್ಕಿಲಯ್ಯ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನೋಂದಾವಣಿ ನವೀಕರಣಗೊಳಿಸುವ ಹಾಗೂ ಅದಕ್ಕಾಗಿ ಶುಲ್ಕ ಹಾಗೂ ಸಮಯದ ಮಿತಿ ನಿಗದಿಗೊಳಿಸುವ ಅಧಿಕಾರ ಹೊಂದುವ ಅಧಿಕಾರ ಕೆಎಂಸಿಗೆ ಇದೆಯೇ ಎಂದು ಅರ್ಜಿದಾರರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
ಅಲ್ಲದೆ, 2012ರಲ್ಲಿ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದ ಕೆಎಂಸಿ, ತಮ್ಮ ನೋಂದಾವಣಿಯನ್ನು ನವೀಕರಣಗೊಳಿಸ ಬಯಸುವ ವೈದ್ಯರು ಕೆಎಂಸಿಯಿಂದ ಮಾನ್ಯತೆ ಪಡೆದ ಯಾವುದೇ ಆಸ್ಪತ್ರೆ ಅಥವಾ ಆರೋಗ್ಯ ಸಂಸ್ಥೆಯಲ್ಲಿ ಕನಿಷ್ಠ 100 ಗಂಟೆಗಳ ಸೇವೆ ಸಲ್ಲಿಸಿರುವ ಪ್ರಮಾಣ ಪತ್ರ ತರುವುದು ಕಡ್ಡಾಯವೆಂದು ಸೂಚಿಸಿತ್ತು. ಹೈಕೋರ್ಟ್ ನಲ್ಲಿ ಕೆಎಂಸಿ ವಿರುದ್ಧ ತಕರಾರು ಎತ್ತಿದ್ದ ಅರ್ಜಿದಾರರು ಈ ನಿಯಮದ ಔಚಿತ್ಯವನ್ನೂ ಪ್ರಶ್ನಿಸಿದ್ದರು.
ಶುಕ್ರವಾರ ನಡೆದ ಪ್ರಕರಣದ ವಿಚಾರಣೆಯನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ಕೆಎಂಸಿಯ ಆದೇಶಕ್ಕೆ ಮಧ್ಯಂತರ ತಡೆ ನೀಡಿದರು.