ಹಾಸನದಲ್ಲಿ 38 ಕೋತಿಗಳ ಹತ್ಯೆ; ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿ ಹೈಕೋರ್ಟ್
ಹಾಸನ, ಜುಲೈ 30: ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿ ಗ್ರಾಮದಲ್ಲಿ ನಡೆದ ಮಂಗಗಳ ಮಾರಣಹೋಮಕ್ಕೆ ಸಂಬಂಧಿಸಿದಂತೆ ರಾಜ್ಯದ ಉಚ್ಛ ನ್ಯಾಯಾಲಯವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ. ಜಿಲ್ಲೆಯಲ್ಲಿ ನಡೆದಿರುವ ಘಟನೆ ತೀರಾ ಅಮಾನವೀಯ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಒಕಾ ಮತ್ತು ನ್ಯಾಯಮೂರ್ತಿ ಸಂಜಯ್ ಗೌಡ ನೇತೃತ್ವದ ವಿಭಾಗೀಯ ಪೀಠವು ಕೋತಿಗಳ ಹತ್ಯೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್ ಹಾಸನದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪ್ರಾದೇಶಿಕ ಅರಣ್ಯ ಅಧಿಕಾರಿಯನ್ನು ಪ್ರತಿವಾದಿಯಾಗಿಸಲು ಸೂಚನೆ ನೀಡಿದೆ.
ಹಾಸನ ಜಿಲ್ಲೆಯ ಚೌಡನಹಳ್ಳಿಯಲ್ಲಿ 38 ಕೋತಿಗಳನ್ನು ಕೊಂದ ಕ್ರೂರಿಗಳು!?
ಮಂಗಗಳ ಹಾವಳಿಯನ್ನು ಘನತೆಯಿಂದ ನಿಯಂತ್ರಿಸಬೇಕು. ಅದನ್ನು ಬಿಟ್ಟು ಬರ್ಬರವಾಗಿ ಹತ್ಯೆಗೈದಿರುವುದು ಆಘಾತಕಾರಿ ಅಂಶವಾಗಿದೆ. ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಆದರೆ ಹಾಸನ ಜಿಲ್ಲೆಯಲ್ಲಿ ನಡೆದಿರುವ ಘಟನೆಯಲ್ಲಿ ಪ್ರಾಣಿಗಳ ದೌರ್ಜನ್ಯ ತಡೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಆಗಸ್ಟ್ 4ರೊಳಗೆ ವರದಿ ಸಲ್ಲಿಸಲು ಕೋರ್ಟ್ ಸೂಚನೆ:
Recommended Video
ಮನುಷ್ಯತ್ವವನ್ನು ಮರೆತು ಮೂಕಪ್ರಾಣಿಗಳ ಮೇಲೆ ಕ್ರೌರ್ಯ ಮರೆದವರು ಯಾರು ಎಂಬುದರ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಕಾನೂನು ರೀತಿಯಲ್ಲಿ ತಪ್ಪಿತಸ್ಥರನ್ನು ಹಿಡಿದು ದಂಡಿಸಬೇಕು. ಈ ಘಟನೆಗೆ ಸಂಬಂಧಿಸಿದಂತೆ ಮುಂದಿನ ಆಗಸ್ಟ್ 4ರ ವೇಳೆಗೆ ವರದಿ ಸಲ್ಲಿಸಬೇಕು ಎಂದು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.
ಗೋಣಿಚೀಲ ತೆರೆದ ಸಾರ್ವಜನಿಕರಿಗೆ ಆಘಾತ:
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿ ಗ್ರಾಮದ ರಸ್ತೆ ಮಧ್ಯದಲ್ಲೇ ದೊಡ್ಡ ಗೋಣಿ ಚೀಲವೊಂದನ್ನು ಎಸೆಯಲಾಗಿತ್ತು. ಮಧ್ಯರಾತ್ರಿ 10 ಗಂಟೆ ಸುಮಾರಿಗೆ ನಡುರಸ್ತೆಯಲ್ಲಿ ಚೀಲವೊಂದು ಬಿದ್ದಿದ್ದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದರು. ಚೀಲದಲ್ಲಿ ಏನಿರಬಹುದು ಎಂದು ಅದನ್ನು ತೆರೆದು ನೋಡಿದಾಗ ಮನಕಲುಕುವಂತಾ ದೃಶ್ಯ ಕಣ್ಣಿಗೆ ರಾಚಿತು. ಗೋಚಿ ಚೀಲದಲ್ಲಿ ಕೆಲವು ಕೋತಿಗಳು ಸತ್ತು ಬಿದ್ದಿದ್ದರೆ ಇನ್ನು ಕೆಲವು ಕೋತಿಗಳು ವಿಷ ಸೇವನೆಯಿಂದಾಗಿ ನರಳುತ್ತಿದ್ದವು. ಗಾಯಗೊಂಡ ಮಂಗಗಳ ಆರ್ತನಾದ ಎಂಥವರನ್ನೂ ಮರಮರ ಮರಗುವಂತೆ ಮಾಡಿತು.
38ಕ್ಕೂ ಹೆಚ್ಚು ಕೋತಿಗಳ ಹತ್ಯೆ:
ಹಾಸನ ಜಿಲ್ಲೆಯ ಚೌಡನಹಳ್ಳಿ ಬಳಿ 38ಕ್ಕೂ ಹೆಚ್ಚು ಕೋತಿಗಳಿಗೆ ವಿಷಾಹಾರ ಉಣಿಸಿ ಹಾಗೂ ಹೊಡೆದು ಕೊಂದು ಹಾಕಿರುವ ಬಗ್ಗೆ ವರದಿಯಾಗಿದೆ. 35ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆಯಾಗಿದ್ದು, 20ಕ್ಕೂ ಹೆಚ್ಚು ಕೋತಿಗಳು ಗಾಯಗೊಂಡಿದ್ದವು. ಕೆಲವು ದುಷ್ಕರ್ಮಿಗಳಉ ಕೋತಿಗಳಿಗೆ ವಿಷಾಹಾರ ನೀಡಿ ನಂತರ ಅವುಗಳನ್ನು ಗೋಣಿ ಚೀಲದಲ್ಲಿ ತುಂಬಿ ಥಳಿಸಿ ಕೊಂದಿರುವ ಬಗ್ಗೆ ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡು ನರಳುತ್ತಿದ್ದ 20 ಕೋತಿಗಳಿಗೆ ಗ್ರಾಮಸ್ಥರು ನೀರು ಆಹಾರ ನೀಡಿ ಆರೈಕೆ ಮಾಡಿದರು.
ದುಷ್ಕರ್ಮಿಗಳ ಕೃತ್ಯಕ್ಕೆ ಗ್ರಾಮಸ್ಥರ ತೀವ್ರ ಆಕ್ರೋಶ:
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೌಡನಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕೋತಿಗಳೇ ಇರಲಿಲ್ಲ. ಬೇರೆ ಯಾವುದೋ ಊರಿನಿಂದ ಕೋತಿಗಳನ್ನು ಹೊಡೆದು ಹಾಕಿ ಅದನ್ನು ಈ ಗ್ರಾಮದ ರಸ್ತೆಯ ನಡುವೆ ಎಸೆದು ಹೋಗಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಇನ್ನು, ಕೋತಿಗಳಿಗೆ ವಿಷ ಮಿಶ್ರಿತ ಆಹಾರವನ್ನು ನೀಡಲಾಗಿದೆ. ಅದರಿಂದ ನಿತ್ರಾಣಗೊಂಡ ಕೋತಿಗಳನ್ನು ಗೋಣಿ ಚೀಲದಲ್ಲಿ ತುಂಬಿ ಅವುಗಳು ಸಾವನ್ನಪ್ಪುವಂತೆ ಥಳಿಸಲಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ.