ರಾಜ್ಯದಲ್ಲಿ ಲಾಕ್ಡೌನ್ ವದಂತಿಗೆ ತೆರೆ ಎಳೆದ ಸುಧಾಕರ್
ಬೆಂಗಳೂರು, ಜನವರಿ 07: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣದಿಂದಾಗಿ ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ ಹಾಗೂ ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಈ ನಡುವೆ ರಾಜ್ಯದಲ್ಲಿ ಲಾಕ್ಡೌನ್ ಮಾಡಲಾಗುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಲಾಕ್ಡೌನ್ನ ಆತಂಕ ಜನರಲ್ಲಿ ಹುಟ್ಟಿದೆ. ಈ ನಿರ್ಬಂಧಗಳು ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಮುನ್ಸೂಚನೆ ಎಂದು ಸುದ್ದಿ ಹರಿದಾಡುತ್ತಿದೆ. ಈ ನಡುವೆ ಲಾಕ್ಡೌನ್ ವದಂತಿಗೆ ಕರ್ನಾಟಕ ಆರೋಗ್ಯ ಸಚಿವ ಡಾ ಕೆ ಸುಧಾಕರ್ ತೆರೆ ಎಳೆದಿದ್ದಾರೆ.
ಇನ್ನು ಸಾರ್ವಜನಿಕರು, ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು, ಗಾರ್ಮೆಂಟ್ಸ್ ಫ್ಯಾಕ್ಟರಿ ನೌಕರರು ಸೇರಿದಂತೆ ಅನೇಕರಲ್ಲಿ ಲಾಕ್ಡೌನ್ ಜಾರಿಯಾಗಲಿದೆ ಎಂಬ ಆತಂಕವು ಮನೆ ಮಾಡಿದೆ. ಈ ಈ ಎಲ್ಲ ವದಂತಿಗಳಿಗೆ ಖುದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತೆರೆ ಎಳೆದಿದ್ದು, "ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನ ಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸದ್ಯಕ್ಕೆ ಲಾಕ್ಡೌನ್ ಮಾಡುವ ಚಿಂತನೆಯಲ್ಲಿ ಇಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
" />ಕರ್ನಾಟಕದಲ್ಲಿ ವಾರಾಂತ್ಯದ ಕರ್ಫ್ಯೂ: ಏನಿರುತ್ತೆ ಮತ್ತು ಏನಿರಲ್ಲ?
ಒಂದು ಕಡೆ ಇಂದಿನಿಂದ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಾಗುತ್ತಿರುವ ಸಂದರ್ಭದಲ್ಲೇ ಲಾಕ್ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೆ ಸುಧಾಕರ್, "ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದನ್ನು ಯಾರೂ ಕೂಡಾ ತಡೆಗಟ್ಟಲು ಸಾಧ್ಯವಿಲ್ಲ. ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದೇ ಹೊರತು ಎಲ್ಲ ಸಂದರ್ಭದಲ್ಲಿಯೂ ಲಾಕ್ಡೌನ್ ಪರಿಹಾರವಲ್ಲ. ನಾವು ಸಾಧಕ ಭಾದಕಗಳನ್ನು ನೋಡಿಕೊಂಡು ಯಾವುದೇ ಕ್ರಮವನ್ನು ಕೈಗೊಳ್ಳಲಿದ್ದೇವೆ," ಎಂದು ಸ್ಪಷ್ಟಪಡಿಸಿದ್ದಾರೆ.
"ಜನರ ಹಿತದೃಷ್ಟಿಯಿಂದ ಲಾಕ್ಡೌನ್ ಚಿಂತನೆ ಇಲ್ಲ"
"ಈ ಹಿಂದೆ ಒಂದು ಮತ್ತು 2ನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಜನಸಾಮಾನ್ಯರು ಎಷ್ಟು ಕಷ್ಟಪಟ್ಟಿದ್ದಾರೆ ಎಂಬ ಅರಿವು ನಮಗಿದೆ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಲಾಕ್ಡೌನ್ ಮಾಡುವ ಚಿಂತನೆಯನ್ನು ಮಾಡಿಲ್ಲ. ಲಾಕ್ಡೌನ್ ಕಳೆದು ಹೋಗಿರುವ ನೀತಿ. ಹಾಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಇಲ್ಲ. ಆದರೆ ಕೋವಿಡ್ ಮೂರನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ. ವಿಶ್ವವ್ಯಾಪಿಯಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಯಾರೊಬ್ಬರೂ ತಲೆಕೆಡಿಸಿಕೊಳ್ಳಬಾರದು. ಪಾಸಿವಿಟಿ ದರ ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ನಾವು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಾವು ಅಗತ್ಯ ಸುರಕ್ಷತೆ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ನಾವು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರವು ಕೂಡಾ ಅತ್ಯಗತ್ಯ," ಎಂದು ಜನರಿಗೆ ಮನವಿ ಮಾಡಿದ್ದಾರೆ.
"ಮೊದಲ ಹಾಗೂ ಎರಡನೇ ಕೋವಿಡ್ ಅಲೆಯ ಸಂಂದರ್ಭದಲ್ಲಿ ಯಾವ ರೀತಿ ಕೋವಿಡ್ಗೆ ಚಿಕಿತ್ಸೆ ಕೊಡಬೇಕು ಎಂಬುವುದು ನಮ್ಮ ಅರಿವಿಗೆ ಬಂದಿದೆ. ಈಗ ನಮಗೆ ಸಾಕಷ್ಟು ಅನುಭವವಾಗಿದೆ. ಒಂದು ಕಡೆ ಕೋವಿಡ್ ಲಸಿಕೆ, ಮತ್ತೊಂದು ಕಡೆ ಮಾತ್ರೆಗಳು ಸಹ ಬರುತ್ತಿದೆ. ಇದನ್ನು ನಾವು ಈಗ ಧೈರ್ಯವಾಗಿ ಎದುರಿಸಲು ಸಿದ್ದರಾಗಿದ್ದೇವೆ," ಎಂದು ಹೇಳಿದರು.
ಕರ್ನಾಟಕದಲ್ಲಿ 13.2 ಲಕ್ಷ ಮಕ್ಕಳಿಗೆ ಕೊವಿಡ್-19 ಮೊದಲ ಡೋಸ್!
"ಕರ್ನಾಟಕ ದೇಶದಲ್ಲೇ ಅತೀ ಹೆಚ್ಚು ಜನರಿಗೆ ಅತ್ಯುತ್ತಮವಾಗಿ ಲಸಿಕೆ ನೀಡಿರುವ ರಾಜ್ಯಗಳ ಪೈಕಿ ಒಂದಾಗಿದೆ. ಒಂದು ರಾಜ್ಯ ಹಾಗೂ ಒಂದು ದೇಶದಲ್ಲಿ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ನೀಡಿದರೆ ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಕೋವಿಡ್ ಸಾಂಕ್ರಾಮಿಕವನ್ನು ಮಣಿಸಲು ವಿಶ್ವದ ಎಲ್ಲಾ ದೇಶಗಳಲ್ಲಿ ಸಂಪೂರ್ಣ ಲಸಿಕಾಕರಣ ಆದಾಗ ಮಾತ್ರವೇ ನಮಗೆ ಸಂಪೂರ್ಣವಾಗಿ ಕೋವಿಡ್ ಮಣಿಸಲು ಸಾಧ್ಯ ಎಂದು ಕೂಡಾ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ," ಎಂದು ಕೂಡಾ ಈ ಸಂದರ್ಭದಲ್ಲಿ ಉಲ್ಲೇಖ ಮಾಡಿದ್ದಾರೆ. ಹಾಗೆಯೇ ಜನರು ಲಸಿಕೆಯನ್ನು ಪಡೆಯುವಂತೆ, ಈ ಮೂಲಕ ಸುರಕ್ಷತೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಲಸಿಕೆ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದಿದ್ದಾರೆ. (ಒನ್ಇಂಡಿಯಾ ಸುದ್ದಿ)