ಮಗು ಅಕ್ರಮ ಬಂಧವಾಗಿದೆಯೆಂದು ಸುಳ್ಳು ಕೇಸು ದಾಖಲು: ತಂದೆಗೆ 50 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು ಜ.26: ಮಗು ತಾಯಿಯ ಬಳಿ ಇದ್ದರೂ ಅದು ಅಕ್ರಮ ಬಂಧನಲ್ಲಿಡಲಾಗಿದೆ ಹುಡುಕಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಹೇಬಿಯಸ್ ಕಾರ್ಪಸ್ ಅರ್ಜಿ ಹೂಡಿದ್ದ ತಂದೆಗೆ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿದೆ.
ಬೆಂಗಳೂರಿನ ಗೌರವ್ ರಾಜ್ ಜೈನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಬಿ.ವೀರಪ್ಪ ಹಾಗೂ ನ್ಯಾ. ಎಂ.ಜಿ. ಉಮಾ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಕೇಸ್ ಹೂಡಿದ್ದಕ್ಕಾಗಿ 50ಸಾವಿರ ರೂ. ದಂಡದ ರುಚಿ ತೋರಿಸಿರುವ ನ್ಯಾಯಪೀಠ, 1 ತಿಂಗಳಲ್ಲಿ ದಂಡದ ಮೊತ್ತವನ್ನು ಪೊಲೀಸ್ ಕಲ್ಯಾಣ ನಿಧಿಗೆ ಪಾವತಿಸುವಂತೆ ಆದೇಶಿಸಿದೆ.
''ಕಾನೂನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನಗಳನ್ನು ಹತ್ತಿಕ್ಕುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ. ಅಂತಹ ಪ್ರಕರಣಗಳು ಕಂಡು ಬಂದರೆ ಪರಿಣಾಮಕಾರಿಯಾಗಿ ಹತ್ತಿಕ್ಕಬೇಕು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಸುಳ್ಳು ಉದ್ದೇಶಗಳಿಗೆ ಅನಧಿಕೃತ ಕ್ರಮಗಳಿಗೆ ಬಳಸಿಕೊಳ್ಳುವುದನ್ನು ಸಹಿಸಲಾಗುದು. ಇದು ಅಂತಹ ಒಂದು ಪ್ರಕರಣವಾಗಿರುವುದರಿಂದ ಅರ್ಜಿದಾರರು ದಂಡನೆಗೆ ಅರ್ಹರು,''ಎಂದು ನ್ಯಾಯಪೀಠ ಹೇಳಿದೆ.
''ಇತ್ತೀಚಿನ ದಿನಗಳಲ್ಲಿ ಇಂತಹ ಸುಳ್ಳು ಪ್ರಕರಣ ದಾಖಲಿಸುವುದು ಹೆಚ್ಚುತ್ತಿದೆ. ಹೇಬಿಯಸ್ ಕಾರ್ಪಸ್ ಪ್ರಕರಣ ಗಂಭೀರವಾದುದು, ಅಂತಹ ಪ್ರಕರಣಗಳಲ್ಲಿ ಕೋರ್ಟ್ ಗಳು ಆದ್ಯತೆ ನೀಡಿ ಅಕ್ರಮ ಬಂಧನದಲ್ಲಿರುವವರನ್ನು ಹುಡುಕಲು ಪೊಲೀಸರಿಗೆ ಒತ್ತಡ ಹೇರುತ್ತದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಹುರುಳಿರುವುದಿಲ್ಲ,''ಎಂದು ನ್ಯಾಯಾಲಯ ತಿಳಿಸಿದೆ.
''ಈ ಪ್ರಕರಣದಲ್ಲಿ ಮಗು ತಾಯಿಯ ಬಳಿ ಇದೆ ಮತ್ತು ಅಕ್ರಮ ಬಂಧನದಲ್ಲೇನೂ ಇಟ್ಟಿಲ್ಲ. ಮಗುವಿನ ಸುಪರ್ದಿ ಕೋರಿ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈ ರೀತಿ ಅಕ್ರಮ ಬಂಧನಲ್ಲಿಡಲಾಗಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ, ಅದಕ್ಕೆ ಯಾವುದೇ ಪುರಾವೆ ಇಲ್ಲ. ಅನಗತ್ಯ ಅರ್ಜಿ ಸಲ್ಲಿಸಿ ಸಂವಿಧಾನದಡಿ ಲಭ್ಯವಿರುವ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಹಕ್ಕನ್ನು ದುರುಪಯೋಗಪಡಿಸಿಕೊಂಡಿದ್ದಾರೆ,'' ಎಂದೂ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ನಿಯಮದ ಪ್ರಕಾರ ಅಪ್ರಾಪ್ತ ಮಗು ತಾಯಿಯ ಬಳಿ ಇರುವುದೇ ಸೂಕ್ತ, ಅದರಲ್ಲಿ ಯಾವುದೇ ಅಕ್ರಮವಿಲ್ಲ. ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ತಂದೆ ಮಗು ತನ್ನ ಸುಪರ್ದಿಗೆ ಬೇಕಿದ್ದರೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬಹುದೆಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ದಂಪತಿ 2009ರಲ್ಲಿ ಮದುವೆಯಾಗಿದ್ದರು. ಅವರಿಗೆ ಅವಧಿಗೆ ಮುನ್ನವೇ ಶಿಶು ಜನನವಾಗಿತ್ತು. ಹಾಗಾಗಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. 2021ರ 5ರಂದು ತನ್ನ ಬಳಿಯಿಂದ ಪತ್ನಿ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಅಂದಿನಿಂದ ಮಗುವನ್ನು ತೋರಿಸಿಲ್ಲ, ಅದರ ಜೊತೆ ಮಾತನಾಡಿಸಲು ಬಿಟ್ಟಿಲ್ಲ, ಅದನ್ನು ಅಕ್ರಮ ಬಂಧನದಲ್ಲಿಟ್ಟಿರುವ ಸಾಧ್ಯತೆ ಇದೆ, ಹಾಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೂಡಿದ್ದರು.