ಶಿವಾನಂದ ಸರ್ಕಲ್ ಮೇಲ್ಸೇತುವೆ ವಿರುದ್ಧದ ಪಿಐಎಲ್ ವಜಾ!
ಬೆಂಗಳೂರು, ಆಗಸ್ಟ್ 08: ಶಿವಾನಂದ ಸರ್ಕಲ್ ಸಮೀಪ ನಿರ್ಮಾಣವಾಗಲಿರುವ ಸ್ಟೀಲ್ ಬ್ರಿಡ್ಜ್ ಗೂ ಜನ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಸುದ್ದಿ ಓದಿರುತ್ತೀರಿ. ಉದ್ದೇಶಿತ ಸ್ಟೀಲ್ ಫ್ಲೈ ಓವರ್ ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಗೂ ಜನರ ವಿರೋಧ
ರೇಸ್ ಕೋರ್ಸ್ ರಸ್ತೆಯಿಂದ ಶಿವಾನಂದ ಸರ್ಕಲ್ ವರೆಗೆ 19.85 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟೀಲ್ ಫ್ಲೈ ಓವರ್ ನಿರ್ಮಾಣಕ್ಕೆ ಜೂನ್ 8ರಂದು ರಾಜ್ಯ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಭೂ ಪರಭಾರೆ ಸೇರಿ ಒಟ್ಟಾರೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವೆಚ್ಚ 40 ಕೋಟಿ ದಾಟಿದೆ. ಆಂಧ್ರ ಪ್ರದೇಶ ಮೂಲದ ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಒಂದು ವರ್ಷದ ಯೋಜನಾ ಅವಧಿ ನಿಗದಿ ಪಡಿಸಲಾಗಿದೆ.
ಚಾಲುಕ್ಯ ವೃತ್ತದಿಂದ ಹೆಬ್ಬಾಳವರೆಗಿನ 1800 ಕೋಟಿ ರೂಪಾಯಿಯ ಫ್ಲೈ ಓವರ್ ನಿರ್ಮಾಣವನ್ನು ಜನರ ಪ್ರತಿಭಟನೆಯ ನಂತರ ಸರಕಾರ ಕೈಬಿಟ್ಟಿತ್ತು. ಇದೀಗ ಈ ಫ್ಲೈಓವರ್ ನಿರ್ಮಾಣವನ್ನೂ ಜನ ವಿರೋಧಿಸುತ್ತಿದ್ದಾರೆ.
ಆದರೆ, ಕೆ.ಎಸ್ ಪ್ರಸಾದ್ ಹಾಗೂ 24 ಇತರೆ ವ್ಯಕ್ತಿಗಳು ಹಾಕಿದ್ದ ಅರ್ಜಿಯನ್ನು ಸೋಮವಾರದಂದು ಹೈಕೋರ್ಟ್ ತಿರಸ್ಕರಿಸಿದೆ. ನಿಮ್ಮ ಅಹವಾಲನ್ನು ಬೆಂಗಳೂರು ಅಭಿವೃದ್ಧಿ ಹಾಗೂ ರಾಜ್ಯ ನಗರ ಯೋಜನೆ ವಿಭಾಗ ಬಿ ಬಿಎಂಪಿಯ ಮುಖ್ಯ ಕಾರ್ಯದರ್ಶಿಯಲ್ಲಿ ಹೇಳಿಕೊಳ್ಳುವಂತೆ ಸೂಚಿಸಿದೆ.