ಸರ್ಕಾರಿ ವೈದ್ಯರಿಗೆ ಹೈಟೆಕ್ ರಕ್ಷಣೆ, ಡಿಸಿಎಂ ಅಶ್ವಥ್ ನಾರಾಯಣ ಅಭಯ!
ಬೆಂಗಳೂರು, ನವೆಂಬರ್ 06: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸರ್ಕಾರಿ ವೈದ್ಯರ ನಡುವಿನ ತಿಕ್ಕಾಟ ಮುಂದುವರೆದಿದೆ. ಈ ನಡುವೆ ಸರ್ಕಾರಿ ವೈದ್ಯರ ಮೇಲಿನ ಹಲ್ಲೆ ತಡೆಯಲು ರಾಜ್ಯ ಸರ್ಕಾರವು ಬದ್ಧವಾಗಿದೆ. ವೈದ್ಯರ ರಕ್ಷಣೆಗಾಗಿ ವಾಕಿ-ಟಾಕಿ, ಸಿಸಿ ಕ್ಯಾಮರಾ, ಕೃತಕ ಬುದ್ಧಿಮತ್ತೆ (AI), ತನಿಖಾ ತಂಡವನ್ನು ನಿಯೋಜನೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಇವರು, ವೈದ್ಯರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಮುಂದುವರೆದ ಸರ್ಕಾರಿ ವೈದ್ಯರ ಮುಷ್ಕರ: ಖಾಸಗಿ ವೈದ್ಯರ ಸಾಥ್
ಇತ್ತೀಚಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ವೈದ್ಯರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಳೆದ ಶುಕ್ರವಾರದಿಂದ ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದರು. ನಂತರದಲ್ಲಿ ಕಿರಿಯ ವೈದ್ಯರ ಪ್ರತಿಭಟನೆಗೆ ನಗರದ ಮತ್ತೆರೆಡು ಆಸ್ಪತ್ರೆಗಳ ವೈದ್ಯರು ಬೆಂಬಲ ನೀಡಿ, ಪ್ರತಿಭಟನೆಗೆ ಇಳಿದರು. ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ವೈದ್ಯರ ಪ್ರತಿಭಟನೆಯಿಂದಾಗಿ ರೋಗಿಗಳು ಪರಿತಪಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ವೈದ್ಯರನ್ನು ಉದ್ದೇಶಿಸಿ ಮಾತನಾಡಿದರು.
ವೈದ್ಯರ ಮೇಲಿನ ಹಲ್ಲೆ ಖಂಡಿಸಿರುವ ಡಿಸಿಎಂ ಅಶ್ವಥ್ ನಾರಾಯಣ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು. ವೈದ್ಯರು ಎದುರಿಸುವ ಸವಾಲುಗಳು ಹಾಗೂ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ. ಈ ಹಿನ್ನೆಲೆಯಲ್ಲಿ ವೈದ್ಯರಿಗಾಗಿ 2009ರ ವೈದ್ಯರ ರಕ್ಷಣಾ ಕಾಯ್ದೆ ಜಾರಿಗೊಳಿಸಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಸಂಚಾರಿ ರಕ್ಷಣಾ ತಂಡ, ಪೊಲೀಸ್ ಮೀಸಲು ಪಡೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು. (ಪಿಟಿಐ)