'ರಾಜ್ಯದಲ್ಲಿ ಲಾಕ್ಡೌನ್ ಮುಂದುವರಿಸುವುದು ಸೂಕ್ತ' - ಎಚ್ಡಿಕೆ ಸಲಹೆ
ಬೆಂಗಳೂರು, ಮೇ 31: ಕೊರೊನಾ ಸಾವು ನೋವುಗಳು ಇನ್ನೂ ಕೂಡಾ ನಿಂತಿಲ್ಲ. ಈ ಹಿನ್ನೆಲೆ ರಾಜ್ಯದಲ್ಲಿ ಲಾಕ್ಡೌನ್ ಅನ್ನು ಇನ್ನೂ ಕೂಡಾ ಸ್ವಲ್ಪ ದಿನ ಮುಂದುವರಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅಭಿಪ್ರಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಎಚ್ಡಿಕೆ, ''ನನ್ನ ಅಭಿಪ್ರಾಯದಲ್ಲಿ ಲಾಕ್ಡೌನ್ ಇನ್ನೂ ಸ್ವಲ್ಪ ದಿನ ಮುಂದುವರೆಸುವುದು ಸೂಕ್ತ. ಪ್ರತಿದಿನ ರಾಜ್ಯದಲ್ಲಿ 20 ಸಾವಿರದಷ್ಟು ಕೊರೊನಾ ಪ್ರಕರಣಗಳು ದಾಖಲಾಗುತ್ತಿತ್ತು. ಆದರೆ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ದೊಡ್ಡ ಮಟ್ಟದಲ್ಲಿ ಕೊರೊನಾ ಆತಂಕವಿದೆ'' ಎಂದು ಹೇಳಿದರು.
ಎಚ್ಡಿಕೆ ಕೊಟ್ಟಿದ್ದು ಮಾಹಿತಿ ತಪ್ಪು ಎಂದು ಸಾರಲು, ಸಿಎಂ ಪ್ರೆಸ್ ಕಾನ್ಫರೆನ್ಸ್ ಕರೆದರೇ?
''ಬೆಂಗಳೂರಿನಲ್ಲಿ 5 ಸಾವಿರದಷ್ಟು ಕೊರೊನಾ ಪ್ರಕರಣಗಳು ಇರುತ್ತಿದೆ. 20 ಸಾವಿರದಿಂದ 5 ಸಾವಿರಕ್ಕೆ ಕೊರೊನಾ ಪ್ರಕರಣಗಳು ಇಳಿದಿದೆ ಎಂದು ಲಾಕ್ಡೌನ್ ಹಿಂಪಡೆದರೆ, ಮೂರನೇ ಅಲೆ ಆತಂಕವಿದೆ. ತಜ್ಞರು ಈಗಾಗಲೇ ಮೂರನೇ ಅಲೆ ಬರಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಈ ಹಿನ್ನೆಲೆ ಇನ್ನು ಒಂದು 15-20 ದಿನಗಳ ಕಾಲ ಲಾಕ್ಡೌನ್ ಮುಂದುವರಿಸಿ ಪರಿಸ್ಥಿತಿ ಸಂಪೂರ್ಣ ತಹಬದಿಗೆ ತರುವ ಕ್ರಮ ಸರ್ಕಾರ ಕೈಗೊಳ್ಳಬೇಕಾಗಿದೆ'' ಎಂದು ತಿಳಿಸಿದರು.
ಇನ್ನು ಪ್ಯಾಕೇಜ್ ವಿಚಾರದಲ್ಲಿ ಮಾತನಾಡಿದ ಅವರು, ''ಸರ್ಕಾರ ಮೊದಲನೇ ಹಂತದ ಪ್ಯಾಕೇಜ್ ಆಗಿ 1250 ಕೋಟಿ ಘೋಷಣೆ ಮಾಡಿದೆ. ಈ ಪ್ಯಾಕೇಜ್ ಸಂಪೂರ್ಣವಾಗಿ ಫಲಪ್ರದರಿಗೆ ತಲುಪಲಿದೆ ಎಂಬ ನಿರೀಕ್ಷೆ ನನಗೆ ಇಲ್ಲ. ಕಳೆದ ಬಾರಿ ಘೋಷಿಸಿದ ಪ್ಯಾಕೇಜ್ ಹಣ ಇನ್ನೂ ಹಲವು ಮಂದಿಯ ಕೈ ತಲುಪಿಲ್ಲ'' ಎಂದು ಸರ್ಕಾರವನ್ನು ಟೀಕಿಸಿದರು.
ಈ ಸಂದರ್ಭದಲ್ಲೇ ''ಸರ್ಕಾರಕ್ಕೆ ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ'' ಎಂದು ಹೇಳಿದ ಎಚ್ಡಿಕೆ, ''ರಾಜ್ಯದ ಜನರೇ ಸರ್ಕಾರದ ಖಜಾನೆ ತುಂಬಿಸುತ್ತಾರೆ. ಆ ಜನತೆಯ ಸಂಕಷ್ಟದಲ್ಲಿ ಸರ್ಕಾರ ಕಷ್ಟ ಪರಿಹಾರಕ್ಕೆ ದೊಡ್ಡ ಮಟ್ಟದ ಪ್ಯಾಕೇಜ್ ನೀಡಬೇಕಾಗಿದೆ. ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆಯಿಲ್ಲ'' ಎಂದು ಸರ್ಕಾರಕ್ಕೆ ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ನೆನಪಿಸಿದ ಹೆಚ್.ಡಿ.ಕುಮಾರಸ್ವಾಮಿ!
''ಸರ್ಕಾರ ಈ ರೀತಿಯ ತೋರ್ಪಡಿಕೆಯ ಪ್ಯಾಕೇಜ್ ಘೋಷಣೆ ಮಾಡುವ ಬದಲಿಗೆ, ಸರಿಯಾದ ರೀತಿಯಲ್ಲಿ ಜನರಿಗೆ ಪ್ಯಾಕೇಜ್ ನೀಡಬೇಕು'' ಎಂದು ಎಚ್ಡಿಕೆ ಆಗ್ರಹಿಸಿದ್ದಾರೆ. ''ಸರ್ಕಾರ ಈಗ ನೀಡುವ ಪ್ಯಾಕೇಜ್ ಮುಂದೆ ಜನರ ಟ್ಯಾಕ್ಸ್ ಮೊದಲಾದವುಗಳ ಮುಖಾಂತರ ಸರ್ಕಾರಕ್ಕೆಯೇ ವಾಪಾಸ್ ಬರಲಿದೆ'' ಎಂದು ಹೇಳಿದರು.
''ರೈತರಿಗೆ, ಕಾರ್ಮಿಕರಿಗೆ, ಆಟೋ ಚಾಲಕರಿಗೆ ಮೊದಲಾದವರಿಗೆ ನೀಡುವ ಪ್ಯಾಕೇಜ್ ಹಣದಿಂದ ಕಮೀಷನ್ ಬರಲ್ಲ ಎಂಬುದು ನಿಮ್ಮ ನೋವು. ಅದು ನಮಗೆ ತಿಳಿದಿದೆ'' ಎಂದು ಸರ್ಕಾರಕ್ಕೆ ಟಾಂಗ್ ನೀಡಿದ ಹೆಚ್ಡಿಕೆ, ''ನೀವು ಹಣ ಹೊಡೆಯುವ ಕೆಲಸ ಬಿಟ್ಟು ಸಂಕಷ್ಟದಲ್ಲಿರುವ ವರ್ಗಕ್ಕೆ ಪ್ಯಾಕೇಜ್ ನೀಡಿ. ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಿ. ಎಲ್ಲಾ ವರ್ಗಕ್ಕೆ ಕನಿಷ್ಠ 10-15 ಸಾವಿರ ನೀಡಿದರೆ, ನಿಮ್ಮ ಖಜಾನೆ ಏನು ಖಾಲಿಯಾಗಲ್ಲ'' ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video