ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ತಜ್ಞರ ಸಮಿತಿ
ಬೆಂಗಳೂರು, ಮೇ. 06: ಮಾಲಿನ್ಯದ ಆಗರದಂತಾಗಿರುವ ಬೆಂಗಳೂರು ಕೆರೆಗಳ ಶುದ್ಧೀಕರಣ ಮತ್ತು ಸ್ವಚ್ಛತೆಗೆ ರಾಜ್ಯ ಸರ್ಕಾರ ಆಸಕ್ತಿ ವಹಿಸಿದೆ. ರಾಸಾಯನಿಕ ನೊರೆ ತುಂಬಿರುವ ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಸಂಬಂಧಿಸಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಸಭೆ ನಡೆಸಿ ವರದಿ ಕಲೆಹಾಕಿದ್ದಾರೆ.
ಬೆಳ್ಳಂದೂರು ಕೆರೆ ಪುನರುಜ್ಜೀವನ ಸಂಬಂಧ ಪರಿಹಾರ ಕ್ರಮಗಳ ಕುರಿತು ಸಲಹೆ, ಅಭಿಪ್ರಾಯ ಆಲಿಸಲು ಜಾರ್ಜ್ ವಿದೇಶಿ ಕಂಪನಿಗಳು, ತಜ್ಞರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಭೆ ಕರೆದಿದ್ದರು.[ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ]
ಬೆಳ್ಳಂದೂರು ಕೆರೆ ಶುದ್ಧೀಕರಿಸಿ ಸ್ವಚ್ಛ ಹಾಗೂ ಸುಂದರವಾಗಿ ಪರಿವರ್ತಿಸಲು ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಜಾರ್ಜ್ ತಿಳಿಸಿದರು.
ಕೆರೆ ಶುದ್ಧೀಕರಣ ಮಾಡಿ ಪುನರುಜ್ಜೀವನಗೊಳಿಸಲು ದೇಶ, ವಿದೇಶಗಳ ಹಲವು ಕಂಪನಿಗಳು ಹೊಸ ತಂತ್ರಜ್ಞಾನಗಳ ಭರವಸೆಯೊಂದಿಗೆ ಆಸಕ್ತಿ ತೋರಿವೆ. ಜತೆಗೆ, ನಗರದ ಕೆರೆಗಳ ಸಂರಕ್ಷಣೆ ಬಗ್ಗೆ ಸಭೆಯಲ್ಲಿ ಉತ್ತಮ ಸಲಹೆ, ಸೂಚನೆಗಳು ಬಂದಿವೆ. ಇವೆಲ್ಲವನ್ನು ಸೇರಿಸಿ 2-3 ವಾರಗಳಲ್ಲಿ ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.[ಬೆಳ್ಳಂದೂರು ಕೆರೆ ಶುದ್ಧಿಗೆ ನಮ್ಮ 'ಬೆಂಗಳೂರು ಫೌಂಡೇಷನ್ ' ಸೂತ್ರ]
ಮುಂಬೈ ಮೂಲಕ ಆರ್.ಇ. ಇನ್ರಾ ಕಂಪನಿ ಹೊಸ ತಂತ್ರಜ್ಞಾನದೊಂದಿಗೆ ಕೆರೆಗಳ ಕಲುಷಿತ ನೀರನ್ನು ಸಂಸ್ಕರಿಸುವುದಾಗಿ ಹೇಳಿ ವರದಿಯನ್ನು ನೀಡಿತು. ಕೆನಡಾದ ಬಯೋಡೆಲ್ ಕಂಪನಿ ಎಲ್ಪಿಡಿ ಪ್ರೊಸೆಸಿಂಗ್ ಮೂಲಕ ನೀರು ಶುದ್ಧೀಕರಣ ಮಾಡುವ ತಂತ್ರಜ್ಞಾನದ ಬಗ್ಗೆ ಸಭೆಗೆ ವಿವರಣೆ ನೀಡಿತು.
ಕೆರೆ ಸ್ವಚ್ಛ ಮಾಡುವ ಬಗ್ಗೆ ಸಲಹೆ ನೀಡಿದ ನಮ್ಮ ಬೆಂಗಳೂರು ಫೌಂಡೇಷನ್ ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕಾದರೆ, ರಾಜಕಾಲುವೆಗಳ ಒತ್ತುವರಿ ತೆರವು ಮಾಡಿ ಕೊಳಚೆ ನೀರು ಕೆರೆಗಳಿಗೆ ಸೇರುವುದನ್ನು ಮೊದಲು ಬಂದ್ ಮಾಡಬೇಕು ಎಂದು ಆಗ್ರಹ ಮಾಡಿತು.