ಯುನಿಕೋಡ್ ಆಧಾರಿತ ತಂತ್ರಾಂಶಗಳ ಬಿಡುಗಡೆ
ಬೆಂಗಳೂರು, ಜು. 4 : ಆಡಳಿತದಲ್ಲಿ, ಸರಕಾರಿ ವೆಬ್ ಸೈಟ್ ಗಳಲ್ಲಿ, ಪತ್ರ ವ್ಯವಹಾರಗಳಲ್ಲಿ ಕನ್ನಡ ಬಳಕೆಯನ್ನು ತರುವ ಉದ್ದೇಶದಿಂದ ರಾಜ್ಯ ಸರಕಾರ ಶುಕ್ರವಾರ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಯುನಿಕೋಡ್ ಆಧಾರಿತ ವಿವಿಧ ತಂತ್ರಾಂಶಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ ಸೈಟ್ ನಲ್ಲಿ ತಕ್ಷಣದಿಂದ ಅಳವಡಿಸಲು ತೀರ್ಮಾನಿಸಿದೆ.
ವಿವಿಧ ಕನ್ನಡ ತಂತ್ರಾಂಶಗಳಾದ ಪರಿವರ್ತಕಗಳು (ಆಸ್ಕಿಯಿಂದ ಯುನಿಕೋಡ್), ಬ್ರೈಲ್ ಕನ್ನಡ ತಂತ್ರಾಂಶ, 12 ಬಗೆಯ ಅಕ್ಷರ ವಿನ್ಯಾಸಗಳು, ಮೊಬೈಲ್ ದೂರವಾಣಿಯಲ್ಲಿ ಕನ್ನಡ ಬಳಕೆ ಹಾಗೂ ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು ಉಚಿತವಾಗಿ ನೀಡಿರುವ ಕ್ಷೇಮ ಕೀಲಿಮಣೆ ವಿನ್ಯಾಸ ಈ ಎಲ್ಲಾ ತಂತ್ರಾಂಶಗಳ ಬೀಟಾ ಆವೃತ್ತಿಯನ್ನು 2014ರ ಜನವರಿ 22ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ "ಕೃಷ್ಣಾ"ದಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಸದರಿ ತಂತ್ರಾಂಶವನ್ನು ಬಳಕೆ ಮಾಡಿದ ಬಳಕೆದಾರರಿಂದ ಬಂದಂತಹ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ತಾಂತ್ರಿಕ ಸಲಹಾ ಸಮಿತಿ ಪರಿಷ್ಕರಿಸಿ, ಈ ಪರಿಷ್ಕೃತ ಆವೃತ್ತಿ-1.2ನ್ನು ಜುಲೈ 4ರಂದು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸಮಕ್ಷಮದಲ್ಲಿ ಪರಿಶೀಲಿಸಿ ಇಲಾಖೆಯ ವೆಬ್ ಸೈಟ್ ಗೆ ತಕ್ಷಣದಿಂದಲೇ ಅಳವಡಿಸಲು ತೀರ್ಮಾನಿಸಲಾಯಿತು.
ಬಳಕೆದಾರರು ಈ ಎಲ್ಲಾ ತಂತ್ರಾಂಶಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡಿಕೊಳ್ಳಬಹುದು. ಬಳಕೆದಾರರು ಬಳಕೆ ಮಾಡುವಂತಹ ಸಂದರ್ಭದಲ್ಲಿ ತಂತ್ರಾಂಶಗಳಲ್ಲಿ ಏನಾದರೂ ಸಲಹೆ, ಸೂಚನೆಗಳಿದ್ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ [email protected] ಅಥವಾ [email protected] ಇ-ಮೇಲ್ಗೆ ಕಳುಹಿಸಬಹುದಾಗಿದೆ.
ಕನ್ನಡ ಭವನದ ಅಂತರಂಗ ಕೊಠಡಿಯಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ. ಚಿದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು, ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ತಂತ್ರಾಂಶಗಳನ್ನು ಎಲ್ಲಾ ಸರ್ಕಾರಿ ಇಲಾಖೆಗಳು ಅಪ್ಡೇಟ್ ಮಾಡಿಕೊಂಡು ಬಳಸುವಂತೆ ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದ್ದು, ಸದರಿ ತಂತ್ರಾಂಶವನ್ನು ಕಡ್ಡಾಯವಾಗಿ ಯುನಿಕೋಡ್ನಲ್ಲಿ ಬಳಸಲು ಸೂಚಿಸಿದರು.
ಅಲ್ಲದೆ ಸರ್ಕಾರಿ ಇಲಾಖೆಗಳ ವೆಬ್ಸೈಟ್ನಲ್ಲಿ ಯುನಿಕೋಡ್ ಅಪ್ಡೇಟ್ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಲ್ಲಾ ಇಲಾಖೆಗಳಿಗೆ ಪತ್ರ ಬರೆಯಲು ತೀರ್ಮಾನಿಸಲಾಗಿತ್ತು. ಯುನಿಕೋಡ್ನ ತಂತ್ರಾಂಶ ಬಳಸುವ ಬಗ್ಗೆ ತರಬೇತಿ ನೀಡಲು ಹಾಗೂ ಇದನ್ನು ಅಪ್ಡೇಟ್ ಮಾಡಲು ಇ-ಆಡಳಿತ ಇಲಾಖೆಯಿಂದ ಕನ್ಸ್ಲ್ಟೆಂಟ್ ಒಬ್ಬರನ್ನು ನೇಮಕ ಮಾಡಬೇಕೆಂದು ಸಭೆಯಲ್ಲಿ ಹಾಜರಿದ್ದ ಇ-ಆಡಳಿತ ಇಲಾಖೆಯ ಗಂಗಾಧರ ಧಾಟಿನಾಳ ಅವರಿಗೆ ತಿಳಿಸಲಾಯಿತು.
ಮುಂದಿನ ಹಂತದಲ್ಲಿ 1) Optical Charecter Recognisation (OCR), 2) Plug in ತಂತ್ರಾಂಶ, Open Office ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರ, ತಾಂತ್ರಿಕ ತಜ್ಞ ಸಮಿತಿಯ ಸದಸ್ಯರಾದ ಡಾ. ಅನಂತ್ ಆರ್. ಕೊಪ್ಪರ್, ಡಾ. ಯು.ಬಿ.ಪವನಜ, ಜಿ.ಎನ್.ನರಸಿಂಹಮೂರ್ತಿ, ಎನ್.ಐ.ಸಿ., ಇ-ಆಡಳಿತ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಕನ್ನಡ ಕೀಲಿಮಣೆ ಜನಕರಾದ ಕೆ.ಪಿ.ರಾವ್, CDACನ ಅಣ್ಣಾರಾವ್ ಕುಲಕರ್ಣಿ ಅವರು, ತಂತ್ರಾಂಶ ಅಭಿವೃದ್ಧಿಗಾರರಾದ ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು, ಹಾಸನ ಇವರು ಹಾಜರಿದ್ದರು.