ಬೆಂಗಳೂರಿಗರ ಆತಂಕ ದೂರ ಮಾಡಿದ ಸರ್ಕಾರ
ಬೆಂಗಳೂರು, ಮೇ 8 : ಬೆಂಗಳೂರಿನ ಜನರಿಗೆ ಆತಂಕ ಹುಟ್ಟಿಸಿರುವ ಕೆರೆ ಒತ್ತುವರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಗುರುವಾರದ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದ ಸದನ ಸಮಿತಿಯ ವರದಿ ಬರುವವರೆಗೆ ಕೆರೆ ಜಾಗದಲ್ಲಿ ಬಿಡಿಎ ನಿರ್ಮಿಸಿರುವ ಬಡಾವಣೆಗಳ ತೆರವು ಕಾರ್ಯ ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು. [ಗುರುವಾರದ ಸಚಿವ ಸಂಪುಟ ಸಭೆಯ ತೀರ್ಮಾನಗಳು]
ರಿಯಲ್ ಎಸ್ಟೇಟ್ ಉದ್ಯಮಿಗಳು ಅಥವಾ ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ ಬಡಾವಣೆಗಳ ತೆರವು ಕಾರ್ಯಾಚರಣೆ ಮುಂದುವರೆಸಲು ನಿರ್ಧರಿಸಲಾಗಿದೆ. ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡವರಿಗೆ ಪುರ್ನವಸತಿ ಕಲ್ಪಿಸಲು ಸಭೆಯಲ್ಲಿ ಚರ್ಚಿಸಲಾಗಿದ್ದು, ಸಮಿತಿ ವರದಿ ಅನ್ವಯ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು. [ಕೆರೆ ವಿಧೇಯಕ ತಿದ್ದುಪಡಿಗೆ ಮುಂದಾದ ರಾಜ್ಯ ಸರ್ಕಾರ]
ವಿಶೇಷ ಕೋರ್ಟ್ ಸ್ಥಾಪನೆ : ಕೆರೆ ಮತ್ತು ಅರಣ್ಯ ಜಮೀನು ಸೇರಿದಂತೆ ಸರ್ಕಾರಿ ಜಮೀನು ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸಲು ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಕೋರ್ಟ್ ಸ್ಥಾಪನೆಗೆ ಹೈಕೋರ್ಟ್ ಅನುಮೋದನೆ ನೀಡಿದೆ. ಬೆಂಗಳೂರಿನಲ್ಲೇ ಎರಡು ನ್ಯಾಯಾಲಯಗಳು ಸ್ಥಾಪನೆಯಾಗಲಿವೆ ಎಂದು ವಿವರಣೆ ನೀಡಿದರು. ಒತ್ತುವರಿ ಕಾರ್ಯಾಚರಣೆ ವಿವರಗಳು ಚಿತ್ರಗಳಲ್ಲಿ [ಡಿಸಿ ಶಂಕರ್ ದಿಟ್ಟ ನಡೆ: ಸಾರಕ್ಕಿ ಕೆರೆ ತೆರವು]
ಜೆಸಿಬಿ ಘರ್ಜನೆಗೆ ತಡೆ ನೀಡಿದ ಸರ್ಕಾರ
ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ಸದನ ಸಮಿತಿಯ ವರದಿ ಬರುವವರೆಗೆ ಕೆರೆ ಜಾಗದಲ್ಲಿ ಬಿಡಿಎ ನಿರ್ಮಿಸಿರುವ ಬಡಾವಣೆಗಳ ತೆರವು ಕಾರ್ಯ ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಆದರೆ, ರಿಯಲ್ ಎಸ್ಟೇಟ್ ಉದ್ಯಮಿಗಳು ಅಥವಾ ಖಾಸಗಿ ವ್ಯಕ್ತಿಗಳು ನಿರ್ಮಿಸಿರುವ ಬಡಾವಣೆಗಳ ತೆರವು ಕಾರ್ಯಾಚರಣೆ ಮುಂದುವರೆಸಲಾಗುತ್ತದೆ.
ಶಾಸಕ ಕೆ.ಬಿ.ಕೋಳಿವಾಡ ನೇತೃತ್ವದ ಸಮಿತಿ
ಕೆರೆ ಒತ್ತುವರಿ ತೆರವು ಮಾಡುವ ಕುರಿತು ಶಾಸಕ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯ ಸದನ ಸಮಿತಿ ರಚನೆ ಮಾಡಲಾಗಿದೆ. ಇನ್ನೂ 15 ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿವರೆಗೆ, ಸರ್ಕಾರದ ಅನುಮತಿ ಪಡೆದು ಕೆರೆ ಜಾಗಗಳಲ್ಲಿ ಬಿಡಿಎ ನಿರ್ಮಿಸಿದ ಬಡಾವಣೆಗಳಲ್ಲಿ ಕಟ್ಟಲಾಗಿರುವ ವಸತಿ ಅಥವಾ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲಾಗುವುದಿಲ್ಲ ಎಂದು ಟಿ.ಬಿ.ಜಯಚಂದ್ರ ಅವರು ಹೇಳಿದರು.
ಪುನರ್ವಸತಿ ಬಗ್ಗೆ ಸಭೆಯಲ್ಲಿ ಚರ್ಚೆ
ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಸದನ ಸಮಿತಿಯು ಮಾಡುವ ಶಿಫಾರಸುಗಳನ್ನು ಆಧರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಸರ್ಕಾರದ ಅನುಮತಿ ಇರುವ ಕಟ್ಟಡಗಳನ್ನು ಸದ್ಯಕ್ಕೆ ನೆಲಸಮಗೊಳಿಸುವುದಿಲ್ಲ. ದಾಖಲೆಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಯಚಂದ್ರ ಅವರು ಸ್ಪಷ್ಟನೆ ನೀಡಿದರು.
ಎರಡು ವಿಶೇಷ ಕೋರ್ಟ್ ಸ್ಥಾಪನೆ
ಕೆರೆ ಮತ್ತು ಅರಣ್ಯ ಜಮೀನು ಸೇರಿದಂತೆ ಸರ್ಕಾರಿ ಜಮೀನು ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸಲು ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ಕರ್ನಾಟಕ ಹೈಕೋರ್ಟ್ ನ್ಯಾಯಾಲಯ ಸ್ಥಾಪನೆಗೆ ಒಪ್ಪಿಗೆ ಕೊಟ್ಟಿದ್ದು, ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡಿದೆ. ಬೆಂಗಳೂರಿನಲ್ಲಿ ಈ ನ್ಯಾಯಾಲಯಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ಸಚಿವ ಜಯಚಂದ್ರ ಹೇಳಿದರು.
ಎಷ್ಟು ಒತ್ತುವರಿ ತೆರವುಗೊಳಿಸಲಾಗಿದೆ?
ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ನೀಡಿರುವ ಮಾಹಿತಿಯಂತೆ ಸಾರಕ್ಕಿ, ಪುಟ್ಟೇನಹಳ್ಳಿ, ಜರಗನಹಳ್ಳಿ ಕೆರೆಯ 82.23 ಎಕರೆ ಪ್ರದೇಶದ ಪೈಕಿ 34.20 ಎಕರೆ ಒತ್ತುವರಿಯಾಗಿತ್ತು. ಶೇ.99ರಷ್ಟು ತೆರವುಗೊಳಿಸಲಾಗಿದೆ. ಬಾಣಸವಾಡಿ ಕೆರೆಯ 3 ಎಕರೆಯಲ್ಲಿ ನಿರ್ಮಿಸಿದ್ದ ವಾಣಿಜ್ಯ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಚಿಕ್ಕಲಸಂದ್ರ ಕೆರೆ ಒತ್ತುವರಿ ತೆರವು ಸಂಬಂಧ ನೋಟಿಸ್ ನೀಡಲಾಗಿದೆ.