ಓಮಿಕ್ರಾನ್ ಸೋಂಕಿತನ ವರದಿ ಗೊಂದಲ; ತನಿಖೆಗೆ ಸೂಚಿಸಿದ ಸರ್ಕಾರ
ಬೆಂಗಳೂರು, ಡಿಸೆಂಬರ್ 03; ಕರ್ನಾಟಕದಲ್ಲಿ ಎರಡು ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಯಿತು. ಬಳಿಕ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬೆಂಗಳೂರು ನಗರದಲ್ಲಿ ಪತ್ತೆಯಾದ ಎರಡು ಓಮಿಕ್ರಾನ್ ಪ್ರಕರಣದಲ್ಲಿ 66 ವರ್ಷದ ಸೋಂಕಿತ ವ್ಯಕ್ತಿ BU-1261056 ನಗರಕ್ಕೆ ಬಂದು ವಾಪಸ್ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾನೆ. ಆದರೆ ಈತನ ಆರ್ಟಿಪಿಸಿಆರ್ ವರದಿ ಬಗ್ಗೆ ಹಲವು ಗೊಂದಲ ಉಂಟಾಗಿದೆ.
ಕರ್ನಾಟಕದಲ್ಲಿ ಓಮಿಕ್ರಾನ್; ಸೋಂಕಿತನಿಗೆ ಟ್ರಾವೆಲ್ ಹಿಸ್ಟರಿ ಇಲ್ಲ!
ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಸಿದ ಓಮಿಕ್ರಾನ್ ವೈರಸ್ ಸೋಂಕಿತ ವ್ಯಕ್ತಿಯ ಪರೀಕ್ಷಾ ವರದಿಗಳಲ್ಲಿ ವೈರುದ್ಯ ಕಂಡು ಬಂದಿರುವ ಕುರಿತು ಚರ್ಚೆ ನಡೆಯಿತು. ಕೂಲಂಕಷ ತನಿಖೆ ನಡೆಸುವಂತೆ ಹೈ ಗ್ರೌಂಡ್ ಠಾಣೆ ಪೊಲೀಸರಿಗೆ ಸೂಚಿಸಲಾಯಿತು.
ಓಮಿಕ್ರಾನ್ ಮೇಲೆ ನಿಗಾ:WHOಯಿಂದ ಅಧಿಕಾರಿಗಳ ತಂಡ ನಿಯೋಜನೆ
ಪ್ರಕರಣದ ವಿವರ; 66 ವರ್ಷದ ಸೋಂಕಿತ ವ್ಯಕ್ತಿಯ ಮಾದರಿಯನ್ನು 20/11/2021ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಡೆಯಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತೋರಿಸಿಯೇ ವ್ಯಕ್ತಿ ವಿಮಾನ ಹತ್ತಿದ್ದು, ದುಬೈ ಮೂಲಕ ಬೆಂಗಳೂರಿಗೆ ಆಗಮಿಸಿದ್ದ.
ಓಮಿಕ್ರಾನ್ ಅಪಾಯದಿಂದ ಪಾರಾಗಬೇಕೇ, ಮೊದಲು ಪ್ರಜೆಗಳಿಗೆ ಲಸಿಕೆ ನೀಡಿ: WHO
ದಕ್ಷಿಣ ಆಫ್ರಿಕಾದಿಂದ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಪ್ರಯಾಣ ಆರಂಭಿಸಿದ್ದ. ಬೆಂಗಳೂರಿನ ಕೆಐಎನಲ್ಲಿ ಸ್ಕ್ರೀನಿಂಗ್ ಮತ್ತು ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು. ನವೆಂಬರ್ 20ರಂದು ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ವ್ಯಕ್ತಿಯ ವರದಿ ಪಾಸಿಟಿವ್ ಬಂದಿತ್ತು.
ಸೋಂಕಿತ ಇದ್ದ ಹೋಟೆಲ್ಗೆ ವೈದ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆದರೆ ಯಾವುದೇ ರೋಗ ಲಕ್ಷಣಗಳ ಪತ್ತೆ ಆಗಿರಲಿಲ್ಲ. ಐಸೋಲೇಷನ್ನಲ್ಲಿ ಇರುವಂತೆ ಸಲಹೆ ನೀಡಲಾಗಿತ್ತು. ನವೆಂಬರ್ 22ರಂದು ಮಾದರಿಯನ್ನು ಬಿಬಿಎಂಪಿ ಮೂಲಕ ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ರವಾನೆ ಮಾಡಲಾಗಿತ್ತು.
ಸೋಂಕಿತ ವ್ಯಕ್ತಿ ನವೆಂಬರ್ 23ರಂದು ಖಾಸಗಿ ಲ್ಯಾಬ್ನಲ್ಲಿ ಪರೀಕ್ಷೆ ಮಾಡಿಸಿದಾಗ ವರದಿ ನಗೆಟಿವ್ ಬಂದಿತ್ತು. ಇದರಿಂದಾಗಿ ವರದಿ ಬಗ್ಗೆ ಹಲವು ಗೊಂದಲಗಳಿವೆ. ಆದ್ದರಿಂದ ಕರ್ನಾಟಕ ಸರ್ಕಾರ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದೆ.
ಓಮಿಕ್ರಾನ್ ರೂಪಾಂತರಿ ಸೋಂಕು ಪತ್ತೆಯಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ 24 ಜನರಿದ್ದರು. ಅವರಿಗೆ ಯಾವುದೇ ರೋಗದ ಲಕ್ಷಣವಿಲ್ಲ, ಎಲ್ಲರ ವರದಿ ನೆಗೆಟಿವ್ ಬಂದಿದೆ. ಎರಡನೇ ಹಂತದ ಸಂಪರ್ಕದಲ್ಲಿದ್ದ ಎಲ್ಲಾ 240 ಜನರ ಮಾದರಿ ಸಂಗ್ರಹ ಮಾಡಿ ಪರೀಕ್ಷೆ ಮಾಡಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಆಗಿದೆ.
ಸೋಂಕಿತ ವ್ಯಕ್ತಿ ನವೆಂಬರ್ 27ರಂದು ಮಧ್ಯರಾತ್ರಿ ವಿಮಾನ ನಿಲ್ದಾಣಕ್ಕೆ ಕ್ಯಾಬ್ನಲ್ಲಿ ಆಗಮಿಸಿ, ದೆಹಲಿಗೆ ಪ್ರಯಾಣ ಮಾಡಿದ್ದಾರೆ. ಅಲ್ಲಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾನೆ. ಓಮಿಕ್ರಾನ್ ಸೋಂಕಿತ ಮತ್ತೊಬ್ಬ 44 ವರ್ಷದ ವ್ಯಕ್ತಿ ಬೆಂಗಳೂರು ನಗರದಲ್ಲಿಯೇ ಇದ್ದು, ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿದ್ದಾರೆ.
ಹೊಸ ಮಾರ್ಗಸೂಚಿ; ಎರಡು ಓಮಿಕ್ರಾನ್ ಸೋಂಕಿನ ಪ್ರಕರಣ ಪತ್ತೆಯಾದ ಬಳಿಕ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಬಂದ ನಂತರವೇ ಹೊರಗೆ ಕಳುಹಿಸಲಾಗುವುದು ಎಂದು ಹೇಳಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ಏರ್ ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಪ್ರಯಾಣಿಕರಿಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
Recommended Video
ಹೊಸ ಮಾರ್ಗಸೂಚಿ ಪ್ರಕಾರ ಯಾವುದೇ ಸಮ್ಮೇಳನ, ಮದುವೆ ಮತ್ತಿತರ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆಯನ್ನು 500ಕ್ಕೆ ಸೀಮಿತಗೊಳಿಸಲಾಗಿದೆ. ಪರೀಕ್ಷಾ ಸಾಮರ್ಥ್ಯ ಹಾಗೂ ಪರೀಕ್ಷಾ ಪ್ರಮಾಣದ ಗುರಿ ಹೆಚ್ಚಿಸಲು ಸೂಚನೆ ಕೊಡಲಾಗಿದ್ದು, ಪ್ರತಿದಿನ 1 ಲಕ್ಷ ಮಾದರಿಗಳ ಪರೀಕ್ಷೆ ನಡೆಯಲಿದೆ.