ಕೋವಿಡ್ ಸೋಂಕಿತರಿಗೆ ಸಮಾಧಾನಕರ ಸುದ್ದಿ; ಬೆಂಗಳೂರಿಗೆ ಬಂತು ಆಕ್ಸಿಬಸ್
ಬೆಂಗಳೂರು, ಮೇ 11: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ವೆಂಟಿಲೇಟರ್ ಸಮಸ್ಯೆಗಳು ಎದುರಾಗುತ್ತಿವೆ.
ಆದರೆ, ಈಗ ಕೊರೊನಾ ಸೋಂಕಿತರಿಗೆ ಸಮಾಧಾನ ತರುವ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರು ನಗರ ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ನೀಗಿಸಲು ಆಕ್ಸಿಜನ್ ಬಸ್ ಬಂದಿದೆ. ತುರ್ತು ಸಂದರ್ಭದಲ್ಲಿ ತಕ್ಷಣವೇ ಸೋಂಕಿತರ ಜೀವ ಉಳಿಸಲಿದೆ.
ಇಂದು (ಮಂಗಳವಾರ) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಕ್ಸಿಜನ್ ಬಸ್ ಅನ್ನು ಉದ್ಘಾಟಿಸಿ, ಅದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಪರಿವೀಕ್ಷಣೆ ಮಾಡಿದ್ದಾರೆ.
ತಮಿಳುನಾಡು ಮಾದರಿಯ ಆಕ್ಸಿಜನ್ ಬಸ್ಸನ್ನು ಕರ್ನಾಟಕಕ್ಕೂ ಪರಿಚಯಿಸಲಾಗಿದೆ. ಶಾಲೆಯ ಬಸ್ಸನ್ನು ಆಕ್ಸಿಜನ್ ಬಸ್ ಆಗಿ ಪರಿವರ್ತನೆ ಮಾಡಲಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದ ಎದುರು ಈ ಆಕ್ಸಿಜನ್ ಬಸ್ ಅನ್ನು ನಿಲ್ಲಿಸಲಾಗಿದೆ.
ಬಸ್ಸಿನಲ್ಲಿ ಏನೆಲ್ಲಾ ಇದೆ
ಆಕ್ಸಿಜನ್ ಬಸ್ಸಿನಲ್ಲಿ ಭರ್ತಿಯಾದ ಸಿಲಿಂಡರ್ ಇದ್ದು, ಅದಕ್ಕೆ ಬೇಕಾದ ಉಪಕರಣಗಳಿವೆ. ಬಸ್ಸಿನ ಸೀಟಿನಲ್ಲಿ ಸೋಂಕಿತ ಆರಾಮವಾಗಿ ಕುಳಿತುಕೊಳ್ಳಲು ಒಂದು ದಿಂಬು ಇಡಲಾಗಿದೆ.
ಕೊರೊನಾ ಸೋಂಕಿತರು ಬಂದ ತಕ್ಷಣ ನೀಡಲು ಫೇಸ್ ಶಿಲ್ಡ್ (ಮಾಸ್ಕ್) ಅನ್ನು ಸಹ ಬಸ್ಸಿನಲ್ಲಿ ಇರುತ್ತದೆ. ಬೆಂಗಳೂರು ಮಹಾನಗರದಲ್ಲಿರುವ ಈ ಬಸ್ಸಿನಲ್ಲಿ ಒಂದೇ ಬಾರಿಗೆ ೮ ಜನ ಸೋಂಕಿತರು ಕುಳಿತುಕೊಳ್ಳಬಹುದು. ಪ್ರತಿ ಸೀಟಿಗೂ ಸಣ್ಣ ಸಣ್ಣ ಸಿಲಿಂಡರ್ ಅಳವಡಿಸಿದ್ದು, ಅಲ್ಲಿ ಆಕ್ಸಿಜನ್ ಅವಶ್ಯವಿದ್ದರೆ ಅದರ ಬಳಕೆ ಮಾಡಿಕೊಳ್ಳಬಹುದು.
ಸದ್ಯಕ್ಕೆ ಬೆಂಗಳೂರಿನಲ್ಲಿ ಒಂದು ಆಕ್ಸಿಜನ್ ಬಸ್ ಸಂಚರಿಸಲಿದ್ದು, ಇದನ್ನು ಬಿಬಿಎಂಪಿ ನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
"ತುರ್ತು ಸಂದರ್ಭಗಳಲ್ಲಿ ಕೋವಿಡ್-19 ರೋಗಿಗಳಿಗೆ ಸಹಾಯ ಮಾಡಲು ನವೀನ ಮಾದರಿಯ ಆಕ್ಸಿಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರತಿ ತಾತ್ಕಾಲಿಕ ಆಕ್ಸಿಬಸ್ ನಲ್ಲಿ 8 ರೋಗಿಗಳಿಗೆ ಸಹಾಯ ಮಾಡುತ್ತದೆ. ಅಂತಹ 20 ಘಟಕಗಳನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳ ಬಳಿ ಸ್ಥಾಪಿಸಲಾಗುವುದು ಮತ್ತು ರಾಜ್ಯದಾದ್ಯಂತ ಹೆಚ್ಚಿನ ಘಟಕಗಳನ್ನು ಸ್ಥಾಪಿಸಲಾಗುವುದು'' ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
Recommended Video