ಜಮ್ಮು ಕಾಶ್ಮೀರ ಬಿಟ್ಟುಕೊಟ್ಟ ಕರ್ನಾಟಕ ಸರ್ಕಾರ!
ಬೆಂಗಳೂರು ಜೂ. 23 : ಜಮ್ಮು ಕಾಶ್ಮೀರ ಬೇಕು ಎಂದು ಪಾಕಿಸ್ತಾನ ಸಲ್ಲದ ತಗಾದೆ ತೆಗೆಯುತ್ತಿರುವುದಕ್ಕೆ ಇತಿಹಾಸವೇ ಇದೆ. ಆದರೆ ಇತ್ತ ಕರ್ನಾಟಕ ರಾಜ್ಯ ಸರ್ಕಾರ ಕಾಶ್ಮೀರವನ್ನು ಬಿಟ್ಟುಕೊಟ್ಟಿದೆ!
ಯಾಕೆ ಅರ್ಥವಾಗುತ್ತಿಲ್ವ? ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇಂಥದ್ದೊಂದು ಎಡವಟ್ಟು ಮಾಡಿದೆ. ಮಲೇಷಿಯಾದ ನಿಯತಕಾಲಿಕವೊಂದಕ್ಕೆ ನೀಡಿರುವ ಜಾಹೀರಾತಿನಲ್ಲಿ ಭಾರತದ ಕಿರೀಟ ಜಮ್ಮು ಕಾಶ್ಮೀರದ ಕೆಲ ಭಾಗಗಳು ನಾಪತ್ತೆಯಾಗಿದೆ.
ಏನಾಗಿತ್ತು?: ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ (ಪಿಎಟಿಎ) ಎಂಬ ಖಾಸಗಿ ಸಂಸ್ಥೆ ಬರುವ ಸೆಪ್ಟೆಂಬರ್ನಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ವಹಿವಾಟು ಶೋ ಆಯೋಜಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಲೇಷ್ಯಾದ ಮ್ಯಾಗಜೀನ್ ಒಂದಕ್ಕೆ ಜಾಹೀರಾತು ನೀಡಿದೆ. ಹೀಗೆ ನೀಡಿದ ಜಾಹೀರಾತಿನಲ್ಲಿ ಭಾರತದ ಭೂಪಟವಿದೆ. ಆದರೆ, ಈ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯದ ಹಲವು ರಾಜ್ಯಗಳೇ ಇಲ್ಲ. ಇದು, ಇದೀಗ ವಿವಾದಕ್ಕೆ ಕಾರಣವಾಗಿದೆ [ಭಾರತದ ವಿವಾದಿತ ವಿದೇಶಾಂಗ ಖಾತೆ ಮಂತ್ರಿಗಳು]
ಗಂಭೀರ ಲೋಪ: ಈ ಜಾಹೀರಾತು ಎಡವಟ್ಟಿನ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಬಿಜೆಪಿ ನಾಯಕ, ಮಾಜಿ ಸಚಿವ ಸುರೇಶ್ ಕುಮಾರ್, "ಇದು ದೇಶದ ಸಾರ್ವಭೌಮತೆಗೆ ಸಂಬಂಧಿಸಿದ ವಿಷಯ. ಸರ್ಕಾರದ ಇಂಥ ಎಡವಟ್ಟಿನಿಂದಾಗಿ ಭಾರತದ ವಿರುದ್ಧ ಹಲ್ಲು ಮಸೆಯುತ್ತಿರುವ ನೆರೆಯ ಚೀನಾ, ಪಾಕಿಸ್ತಾನದಂಥ ದೇಶಗಳು ಸಂಭ್ರಮ ಪಡುವುದರಲ್ಲಿ ಸಂದೇಹವಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕು ಮತ್ತು ಭಾರತದ ಭೂಪಟ ತಪ್ಪಾಗಿ ಪ್ರಕಟಗೊಳ್ಳಲು ಕಾರಣವಾದ ಸಿಂಗಾಪುರದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ತಪ್ಪಾಗಿ ಜಾಹೀರಾತು ಪ್ರಕಟವಾಗಿರುವ ಕುರಿತು ಮಲೇಷ್ಯಾ ಸರ್ಕಾರಕ್ಕೆ ದೂರು ನೀಡಿ, ವಿವಾದಿತ ಜಾಹೀರಾತನ್ನು ಹಿಂಪಡೆಯಬೇಕು' ಎಂದಿದ್ದಾರೆ.
ದೇಶಪಾಂಡೆ ಸ್ಪಷ್ಟನೆ: ಈ ನಡುವೆ ಜಾಹೀರಾತು ಎಡವಟ್ಟು ಮತ್ತು ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಪ್ರವಾಸೋದ್ಯಮ ಖಾತೆ ಸಚಿವ ಆರ್.ವಿ.ದೇಶಪಾಂಡೆ, "ಜಾಹೀರಾತು ತಪ್ಪಾಗಿ ಪ್ರಕಟಗೊಂಡಿರುವುದಕ್ಕೆ ರಾಜ್ಯ ಸರ್ಕಾರ ಕಾರಣವಲ್ಲ. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಸಿಂಗಾಪುರ ಮೂಲದ ಕಂಪನಿಯೊಂದಕ್ಕೆ ನೀಡಲಾಗಿತ್ತು. ಹೀಗಾಗಿ ಇದಕ್ಕೆ ಅವರೇ ಹೊಣೆ. ನಾವು ಇದರ ಹೊಣೆ ಹೊರಲು ಸಾಧ್ಯವಿಲ್ಲ' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಆದರೆ, ದೇಶಪಾಂಡೆ ಅವರ ವಾದಕ್ಕೆ ತಿರುಗೇಟು ನೀಡಿರುವ ಸುರೇಶ್ ಕುಮಾರ್, "ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಕಾರ್ಯಕ್ರಮ ಆಯೋಜಿಸಿದೆ. ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರದ ಒಂದು ಭಾಗ, ಹೀಗಿರುವಾಗ ಇಲಾಖೆ, ಹೊಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದ್ದಾರೆ.
ಇದು ದೇಶದ ಸಾರ್ವಭೌಮತೆಗೆ ಸಂಬಂಧಿಸಿದ ವಿಷಯ. ಭೂಪಟವನ್ನು ತಪ್ಪಾಗಿ ಮುದ್ರಿಸಿದ್ದು ಗಂಭೀರ ಲೋಪ. ಸರ್ಕಾರ ಘಟನೆಯ ಹೊಣೆ ಹೊರಬೇಕು. ತಪ್ಪು ಜಾಹೀರಾತು ಮುದ್ರಿಸಿದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ