ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ 35 ಎಕರೆ ಜಾಗ ನಿಗದಿ
ಬೆಂಗಳೂರು, ಜುಲೈ 02 : ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಇದುವರೆಗೂ 97 ಜನರು ಮೃತಪಟ್ಟಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಡೆಸಲು ಜಾಗ ಹುಡುಹುವುದು ಬಿಬಿಎಂಪಿಗೆ ಸವಾಲಾಗಿತ್ತು.
Recommended Video
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೋವಿಡ್ - 19 ಸೋಂಕಿನಿಂದ ಮೃತಪಡುವ ನಾಗರಿಕರ ಅಂತ್ಯಕ್ರಿಯೆಗಾಗಿ ಕಂದಾಯ ಇಲಾಖೆಗೆ ಸೇರಿದ ನಗರದ ಸುತ್ತಮುತ್ತಲಿನ 35 ಎಕರೆ ಜಾಗವನ್ನು ಮೀಸಲಾಗಿಟ್ಟಿದೆ. ಬೆಂಗಳೂರು ನಗರ ಜಿಲ್ಲಾಡಳಿತ ಈ ಭೂಮಿಯನ್ನು ಪಾಲಿಕೆಗೆ ನೀಡಲಿದೆ.
ಮೊದಲು ನಮಗೆ ಭೂಮಿ ಕೊಡಿ- ಮಹಿಳಾ ರೈತ ವೇದಿಕೆಯಿಂದ ಹಕ್ಕೊತ್ತಾಯ
ಕೋವಿಡ್ - 19 ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಲು ಸಾರ್ವಜನಿಕ ಸ್ಮಶಾನವನ್ನು ಸ್ಥಾಪಿಸುವುದು ಅಗತ್ಯವಾಗಿತ್ತು. ಆದ್ದರಿಂದ 35 ಎಕರೆ 18 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಲಭ್ಯವಿರುವ ಜಮೀನಿನ ಕುರಿತು ತಹಶೀಲ್ದಾರ್ ಲಿಖಿತ ಮತ್ತು ಮೌಖಿಕ ರೂಪದಲ್ಲಿ ಜಿಲ್ಲಾಧಿಕಾರಿ, ಪಾಲಿಕೆಗೆ ಮಾಹಿತಿ ನೀಡಿದ್ದಾರೆ.
ನಿವೇಶನ ಇ-ಹರಾಜಿಗೆ ಅರ್ಜಿ ಕರೆದ ಬಿಡಿಎ; ಎಲ್ಲೆಲ್ಲಿ ಇವೆ ಸೈಟ್
ಈಗ ಗುರುತಿಸಿರುವ ಜಮೀನುಗಳ ಬಗ್ಗೆ ಘನ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿದ್ದಲ್ಲಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಕಳೆದ ಎರಡು ದಿನಗಳಿಂದ ಬೆಂಗಳೂರು ನಗರದಲ್ಲಿ ಕೋವಿಡ್ - 19ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಸ್ಥಳ ಹುಡುಕುವುದು ವಿವಾದಕ್ಕೆ ಕಾರಣವಾಗಿತ್ತು.
ಅಸಾರಾಂ ಬಾಪು ಆಶ್ರಮಕ್ಕೆ ನೀಡಿದ ಸೈಟ್ ರದ್ದುಗೊಳಿಸಿದ ಬಿಡಿಎ
ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲೂಕು
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಗಿಡ್ಡೆನಹಳ್ಳಿ ಗ್ರಾಮದ ಸರ್ವೆ ನಂಬರ್ 80ರಲ್ಲಿ ಸ್ಥಳವನ್ನು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಉತ್ತರಹಳ್ಳಿ ಹೋಬಳಿಯ ಸೋಮನಹಳ್ಳಿ (ಸರ್ವೆ ನಂಬರ್ 259), ಗುಳಿಕಮಲೆ (ಸರ್ವೆ ನಂಬರ್ 35, 36), ತಾವರೆಕೆರೆಯ ತಿಮ್ಮಗೊಂಡನಹಳ್ಳಿ (ಸರ್ವೆ ನಂಬರ್ 4)ರಲ್ಲಿ ಸ್ಥಳ ಗುರುತಿಸಲಾಗಿದೆ.
ಆನೇಕಲ್, ಯಲಹಂಕ ತಾಲೂಕು
ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಗಿಡ್ಡೆನಹಳ್ಳಿ ಗ್ರಾಮದ ಸರ್ವೇ ನಂಬರ್ 23ರಲ್ಲಿ ಸ್ಥಳ ಗುರುತಿಸಲಾಗಿದೆ.ಯಲಹಂಕ ತಾಲೂಕಿನ ಜಾಲಾ ಹೋಬಳಿಯ ಎಂ. ಹೊಸಹಳ್ಳಿ ಗ್ರಾಮದ ಸರ್ವೇ ನಂಬರ್ 89, ಹೆಸರಘಟ್ಟ ಹೋಬಳಿ ಹುತ್ತನಹಳ್ಳಿ ಗ್ರಾಮದ ಸರ್ವೇ ನಂಬರ್ 72, ಜಾಲಾ ಹೋಬಳಿಯ ಮಾರೇನಹಳ್ಳಿ ಸರ್ವೇ ನಂಬರ್ 182, ಹೆಸರಘಟ್ಟ ಗ್ರಾಮದ ಮಾವಳ್ಳಿಪುರದ ಸರ್ವೆ ನಂಬರ್ 8ರಲ್ಲಿ ಜಾಗ ಗುರುತಿಸಲಾಗಿದೆ.
ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಬೇಕು
ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಅವರು ಪ್ರತ್ಯೇಕವಾದ ಪ್ರಸ್ತಾವನೆಯನ್ನು ಸರ್ವೆ ನಂಬರ್ ವಾರು ಸಿದ್ಧಪಡಿಸಿ, ಸರ್ವೆ ಸ್ಕೆಚ್ ನೊಂದಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆಯನ್ನು ಪಡೆಯತಕ್ಕದ್ದು ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಎನ್. ಶಿವಮೂರ್ತಿ ಆದೇಶದಲ್ಲಿ ತಿಳಿಸಿದ್ದಾರೆ.
ಬೇರೆ ಯಾವುದೇ ಉದ್ದೇಶಕ್ಕೆ ಬಳಸಲ್ಲ
ಈಗ ಗುರುತಿಸಿರುವ ಜಾವನ್ನು ಸ್ಮಶಾನಕ್ಕೆ ಅಲ್ಲದೇ ಯಾವುದೇ ಬೇರೆ ಉದ್ದೇಶಕ್ಕೆ ಬಳಕೆ ಮಾಡಬಾರದು ಎಂದು ಸೂಚಿಸಲಾಗಿದೆ. ಈ ಜಮೀನಿನ ಗಡಿ ಗುರುತಿಸಿ, ಸಂಬಂಧಿಸಿದವರಿಗೆ ಹಸ್ತಾಂತರ ಮಾಡಬೇಕು. ಈ ಜಮೀನು ಒತ್ತುವರಿ ಆಗದಂತೆ ತಂತಿ ಬೇಲಿ ನಿರ್ಮಾಣ ಮಾಡಿ, ಸಂರಕ್ಷಣೆ ಮಾಡಬೇಕು ಈ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ಕೊಡಲಾಗಿದೆ.