ಶೀಘ್ರ ವೃಷಭಾವತಿ ತುಂಬಿ ಹರಿಯಲಿದ್ದಾಳೆ, ಯಾವ್ಯಾವ ಭಾಗಕ್ಕೆ ಅನುಕೂಲ
ಬೆಂಗಳೂರು, ಜನವರಿ 29: ವೃಷಭಾವತಿ ನದಿಗೆ ಕಲುಷಿತ ನೀರು ಮಿಶ್ರಿತವಾಗಿ ದುರ್ನಾತ ಬೀರುತ್ತಿದೆ.ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಅಧಿಕಾರ ವಿಳಂಬ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಜತೆಗೆ ಕೆರೆಗಳ ಪುನರ್ಜೀವನ ಕುರಿತಾಗಿ ಕೈಗೊಂಡ ಕಾರ್ಯಗಳ ವರದಿ ನೀಡುವಂತೆಯೂ ಸೂಚಿಸಿದ್ದರು.
ಇದೀಗ ಕೆಸಿ ವ್ಯಾಲಿ ಕಲುಷಿತ ನೀರನ್ನು ಶುದ್ಧೀಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಹರಿಸಿದ ಬೆನ್ನಲ್ಲೇ ವೃಷಭಾವತಿ ಕಣಿವೆಗಳ ತ್ಯಾಜ್ಯ ನೀರನ್ನು ನೆಲ ಮಂಗಲ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕು ಕೆರೆಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮುಂದಾಗಿದೆ.
ಲೋಕಾಯುಕ್ತ ಸೂಚನೆ: ಅಧಿಕಾರಿಗಳಿಂದ ವೃಷಭಾವತಿ ನದಿ ಪರಿಶೀಲನೆ
ಕೆಂಗೇರಿ ಬಳಿ ವೃಷಭಾವತಿ ಕಣಿವೆಯ ನೀರು ಶುದ್ಧೀಕರಣಗೊಳಿಸಿ ಏತ ನೀರಾವರಿ ಯೋಜನೆ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ಮೂರು ತಾಲೂಕುಗಳ ಕೆರೆಗಳನ್ನು ತುಂಬಿಸಲು 800 ಕೋಟಿ ರೂ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ಕುರಿತು ಸಣ್ಣ ನೀರಾವರಿ ಸಚಿವ ಪುಟ್ಟರಂಗಶೆಟ್ಟಿ ಮಾಹಿತಿ ನೀಡಿದ್ದಾರೆ. ಕೆಸಿ ವ್ಯಾಲಿ ನೀರನ್ನು ಕೋಲಾರ ಭಾಗದ ಕೆರೆಗಳಿಗೆ ಹರಿಸಲಾಗುತ್ತಿದ್ದು, ಇದರಿಂದ ಆ ಭಾಗದಲ್ಲಿ ಅಂತರ್ಜಲ ಮಟ್ಟವೂ ಸುಧಾರಿಸಿದೆ. ನೀರಿನ ಗುಣಮಟ್ಟ ಪರೀಕ್ಷೆ ಮತ್ತು ದೃಢೀಕರಣ ಮಾಡಿಕೊಂಡೇ ಕೆರೆಗಳನ್ನು ತುಂಬಿಸಲಾಗುತ್ತದೆ ಎಂದು ಹೇಳಿದ್ದಾರೆ.