ಅರಣ್ಯ ಪ್ರದೇಶ ಸಮೀಕ್ಷೆಗೆ ರಾಜ್ಯ ಸರ್ಕಾರದ 2 ತಂಡ
ಬೆಂಗಳೂರು, ಜ. 9: ಪಶ್ಚಿಮ ಘಟ್ಟ ನಿವಾಸಿಗಳ ನಿದ್ದೆಗೆಡಿಸಿದ್ದ ಕಸ್ತೂರಿ ರಂಗನ್ ವರದಿಯ ಕುರಿತು ಸಮಗ್ರ ಅಧ್ಯಯನ ನಡೆಸಲು ರಾಜ್ಯ ಸಚಿವ ಸಂಪುಟವು ಉಪ ಸಮಿತಿಗೆ ಸೂಚಿಸಿದ್ದು, ಜ. 31ರೊಳಗೆ ವರದಿ ಸಲ್ಲಿಸಬೇಕೆಂದು ತಿಳಿಸಿದೆ. ಅರಣ್ಯ ಸಚಿವ ರಮಾನಾಥ ರೈ ಹಾಗೂ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ತಲಾ ಒಂದು ತಂಡ ರಾಜ್ಯಾದ್ಯಂತ ಸಂಚರಿಸಿ ಅಧ್ಯಯನ ನಡೆಸಲಿದೆ.
ಶುಕ್ರವಾರ ಆಯೋಜಿಸಿದ್ದ ಸಂಪುಟ ಸಭೆಯಲ್ಲಿ ಅರಣ್ಯ ಪ್ರದೇಶ ಹಾಗೂ ಡೀಮ್ಡ್ ಅರಣ್ಯ ಪ್ರದೇಶದಲ್ಲಿರುವ ನಿವಾಸಿಗಳ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿನ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಧಾಮಗಳು ಮತ್ತು ರಕ್ಷಿತ ಪ್ರದೇಶಗಳ ಸುತ್ತ ಮುತ್ತಲಿನ ಹತ್ತು ಕಿ.ಮೀ. ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳನ್ವಯ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕೆಂದು ಎರಡೂ ತಂಡಗಳಿಗೆ ಸೂಚಿಸಲಾಗಿದೆ. [ಕಲಬುರಗಿ ಸಚಿವ ಸಂಪುಟ ಸಭೆಯ ತೀರ್ಮಾನ]
ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು...
- ಹೊಸ ಗ್ರಾಮ ಪಂಚಾಯಿತಿ ರಚನೆಗೆ 131.70 ಕೋಟಿ ರು. ಹಾಗೂ ವಾರ್ಷಿಕ ನಿರ್ವಹಣೆಗೆ 69.5 ಲಕ್ಷ ರು. ಅನುದಾನ
- ಮೂರನೇ ಹಂತದಲ್ಲಿ ಅರಣ್ಯ ಪ್ರದೇಶಗಳ ಅಭಿವೃದ್ಧಿಗೆ 1,899 ಕೋಟಿ ರು. ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ.
- ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ 120 ಹೆಕ್ಟೇರ್ ಭೂಮಿ ನೀಡಲು ಒಪ್ಪಿಗೆ.
- ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿಗೆ ಶೇ. 50 ಮಾರ್ಗಸೂಚಿ ದರದಲ್ಲಿ ಸಾಗರದ ಇಡುವಳ್ಳಿ-ಹೆಬ್ಬುಡಿ ಬಳಿ 777 ಎಕರೆ ಜಾಗ.
- ಮಂಗಳೂರು, ಬೆಳಗಾವಿ ಹಾಗೂ ಹೊಸಕೋಟೆಯಲ್ಲಿ ಚಾಲಕರಿಗೆ ಸ್ವಯಂ ಪ್ರಮಾಣ ಪತ್ರ ನೀಡುವ ಪರೀಕ್ಷಾರ್ಥ ಪಥ ನಿರ್ಮಾಣಕ್ಕೆ 19.5 ಕೋಟಿ ರು.
- ಕಲಬುರಗಿಯಲ್ಲಿ 15 ಕೋಟಿ ರು. ವೆಚ್ಚದಲ್ಲಿ ಭಾರೀ ವಾಹನ ತರಬೇತಿ ಸಂಸ್ಥೆ ಸ್ಥಾಪನೆಗೆ ಅನುಮೋದನೆ.
- ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಳ್ಳುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಎಲ್ಲ ದಾಖಲೆಗಳ ಸಂಗ್ರಹದ ಹೊಣೆ ಬೆಂಗಳೂರಿನ ಬಿಇಎಲ್ ಸಂಸ್ಥೆಗೆ.
- 43.09 ಕೋಟಿ ರು. ಮೊತ್ತದ ಈ ಯೋಜನೆಗೆ ಖರೀದಿಯಲ್ಲಿ ಪಾರದರ್ಶಕತೆ ಕಾಯಿದೆಯ ಅಡಿಯಲ್ಲಿ 4 (ಜಿ) ವಿನಾಯಿತಿ.
- ಪೊಲೀಸ್ ಇಲಾಖೆಯ ಆಧುನೀಕರಣ ಯೋಜನೆಯ ಅಡಿ ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್ ಮೂಲಕ 6.95 ಕೋಟಿ ರು. ವೆಚ್ಚದಲ್ಲಿ ಆಯುಧಗಳ ಖರೀದಿ.
- ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಶಿಕ್ಷಣ ಸಂಸ್ಥೆಯ 10 ಎಕರೆ ಭೂಮಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜ್ಞಾನ ಸಂಪನ್ಮೂಲ ಕೇಂದ್ರ ಸ್ಥಾಪನೆಗೆ 5 ಕೋಟಿ ರು. ಅನುದಾನ.
- ತಲಾ 31 ಲಕ್ಷ ರು. ವೆಚ್ಚದಲ್ಲಿ ಖರೀದಿಸಿದ್ದ 143 ಟಾಟಾ ಮಾರ್ಕೋಪೋಲೋ ಹವಾನಿಯಂತ್ರಿತ ಬಸ್ಗಳ ಸ್ಥಗಿತ (ಬಿಎಂಟಿಸಿಯಲ್ಲಿರುವ 98 ಬಸ್ ಹಾಗೂ ಮೈಸೂರು ನಗರ ಸಾರಿಗೆಯಲ್ಲಿರುವ 45 ಬಸ್)
- ಈ ಬಸ್ಗಳು ಪದೇ ಪದೆ ದುರಸ್ತಿಗೆ ಬರುತ್ತಿದ್ದ ಕಾರಣ ಸ್ಥಗಿತಗೊಳಿಸಲು ತೀರ್ಮಾನ. ಖರೀದಿ ಸಂಬಂಧ ತನಿಖೆಗೆ ಆದೇಶ. [3 ಎಕರೆವರೆಗೆ ಅರಣ್ಯ ಅತಿಕ್ರಮಣ ಮಾಡಿದವರು ನಿರಾಳ]
ಹಲವು ಪ್ರಕರಣಗಳು ವಾಪಸ್...
- ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಹಿಂದೂ-ಮುಸ್ಲಿಂ ಗಲಭೆಯ ಪ್ರಕರಣ.
- ಕಲಬುರಗಿ ಜಿಲ್ಲೆಯ ಅಳಂದದಲ್ಲಿ ನಡೆದ ಎರಡು ದೊಂಬಿ ಪ್ರಕರಣಗಳ ಮೊಕದ್ದಮೆ.
- ಚುನಾವಣೆ ಸಂದರ್ಭ ನಾಗಮಂಗಲ ಕ್ಷೇತ್ರದಲ್ಲಿ ಸುರೇಶ್ ಗೌಡ ವಿರುದ್ಧ ದಾಖಲಿಸಿದ್ದ ಪ್ರಕರಣ.
- ಎಚ್.ಟಿ. ಕೃಷ್ಣೇಗೌಡ ಮತ್ತು ಇತರ 25 ಜನರ ವಿರುದ್ಧದ ಮೊಕದ್ದಮೆ.
- ಮಂಡ್ಯ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ಮೇಲೆ ಹೂಡಿದ್ದ ಮೊಕದ್ದಮೆ.