ಸಚಿವಾಲಯ ನೌಕರ ಬಂದ್ ಯಶಸ್ವಿ- ಟೇಬಲ್ಗಳೆಲ್ಲ ಖಾಲಿ ಖಾಲಿ!
ಬೆಂಗಳೂರು , ಮೇ 27: ರಾಜ್ಯ ಸರ್ಕಾರ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸದಿರುವುದನ್ನು ಖಂಡಿಸಿ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘವು ಮೇ 27(ಶುಕ್ರವಾರ) ಸಚಿವಾಲಯದ ಬಂದ್ಗೆ ನೀಡಿದ್ದ ಕರೆ ಭಾಗಶಃ ಯಶಸ್ವಿಯಾಗಿದೆ. ವಿಧಾನ ಸೌಧದ ಸಚಿವಾಲಯಗಳು ಬಿಕೋ ಎನ್ನುತ್ತಿವೆ. ಸಚಿವಾಲಯದಲ್ಲಿ ಮನುಷ್ಯರು ಬಿಟ್ಟು ಮೇಜು ಖರ್ಚಿ ಫೈಲ್ಗಳೇ ಕಾಣುತ್ತಿದೆ.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಹಾಗೂ ಸುತ್ತಮುತ್ತಲ ಸರಕಾರಿ ಕಚೇರಿಗಳಿಗೆ ಶುಕ್ರವಾರ ಬೆಳಗ್ಗೆಯಿಂದಲೇ ಸಿಬ್ಬಂದಿ ಗೈರಾಗಿದ್ದರು. ಎಲ್ಲಾ ಟೇಲ್ಗಲು ಖಾಲಿ ಹೊಡೆಯುತ್ತಿದ್ದವು. ಕಚೇರಿಗಳಲ್ಲಿ ಸ್ವಚ್ಛತಾ ಸಿಬ್ಬಂದಿ ಬಿಟ್ಟರೆ ಬೇರೆ ಯಾರೂ ಕಾಣಿಸುತ್ತಿರಲಿಲ್ಲ. ದೂರದ ಊರುಗಳಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದವರು ಖಾಲಿ ಖುರ್ಚಿಗಳನ್ನು ಕಂಡು ವಾಪಸ್ ತೆರಳುತ್ತಿದ್ದ ದೃಶ್ಯ ಕಂಡುಬಂತು.
ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಹೇಳಿದ್ದೇನು..?
ಸಚಿವಾಲಯದ ನೌಕರರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. "ಸಚಿವಾಲಯದ 542 ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆ ಸೇರಿದಂತೆ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಒಂದು ದಿನದ ಮಟ್ಟಿಗೆ ಸಚಿವಾಲಯದ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಹಲವು ದಿನಗಳಿಂದ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸೇವೆಯಿಂದ ನಿವೃತ್ತಿಯಾದ ನೌಕರರನ್ನು ಮರು ನೇಮಕ ಮಾಡುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಇದರಿಂದಾಗಿ ಬಂದ್ ಆಚರಣೆ ಮಾಡಲಾಗುತ್ತಿದೆ ನಮಗೆ ಸಿಬ್ಬಂದಿಯ ಸಂಪೂರ್ಣ ಸಹಕಾರವಿದೆ. ಬಂದ್ ಯಶಸ್ವಿಯಾಗಿದೆ. ಮುಖ್ಯಮಂತ್ರಿಗಳು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಗಮನಿಸಿ ಮುಂದಿನ ಹೋರಾಟದ ರೂಪುರೇಷಯನ್ನು ಸಿದ್ದಪಡಿಸುತ್ತೇವೆ" ಎಂದು ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ತಿಳಿಸಿದ್ದಾರೆ.
ಸಚಿವಾಲಯ ನೌಕರರ ಸಂಘದ ಬೇಡಿಕೆ ಏನು..?
ಸಚಿವಾಲಯದ ಯಾವುದೇ ಇಲಾಖೆ ಹುದ್ದೆಗಳ ಕಡಿತದ ಪ್ರಸ್ತಾನೆಯನ್ನು ಕೈ ಬಿಡಬೇಕು. ಜನಸ್ಪಂದನೆ ಇಲಾಖೆ ರದ್ದುಗೊಳಿಸಿರುವುದನ್ನು ಹಿಂಪಡೆಯುವುದು. ಖಾಲಿ ಇರುವ ಗ್ರೂಪ್ ಡಿ ಮತ್ತು ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು, ಎನ್ಕೇಡರ್ ಹುದ್ದೆಗಳನ್ನು ಸಿಆಸು ಮೂಲಕವೇ ತುಂಬ ಬೇಕೆಂದು ಗುರುಸ್ವಾಮಿ ಮನವಿ ಮಾಡಿದರು.
ಸಚಿವಾಲಯದ ಆಪ್ತ ಶಾಖೆಗಳಲ್ಲಿ ಆಪ್ತ ಕಾರ್ಯದರ್ಶಿ/ ಆಪ್ತ ಸಹಾಯಕರ ಸೇವೆಗಳನ್ನು ಹೊರತುಪಡಿಸಿ ಹೊರಗುತ್ತಿಗೆ ನೌಕರರ ಸೇವೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ನೌಕರರ ಸೇವೆಗಳನ್ನು ಸಚಿವ ಆಪ್ತ ಶಾಖೆಗಳಲ್ಲಿ ಕಡ್ಡಾಯವಾಗಿ ಬಳಸಿಕೊಳ್ಳುವುದು, ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿಯೇ ಇಲಾಖೆಗಳನ್ನು ತರುವುದು, ಬಹುಮಹಡಿ ಕಟ್ಟಡದ ಆವರಣದ ರಸ್ತೆಯನ್ನು ಸಾರ್ವಜನಿಕ ರಸ್ತೆಯನ್ನಾಗಿ ಮಾಡಿರುವ ಕ್ರಮವನ್ನು ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಲಾಗಿದೆ.ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಚೇರಿಗೆ ರಜೆ ಹಾಕಿ ಸಚಿವಾಲಯ ಬಂದ್ ಮಾಡುತ್ತೇವೆ ಎಂದು ನೌಕರ ಸಂಘ ತಿಳಿಸಿದೆ.
ಬಂದ್ಗೆ ಅನುಮತಿ ಇಲ್ಲ ಎಂದ ಸರ್ಕಾರಕ್ಕೆ ಸಡ್ಡು ಹೊಡೆದ ನೌಕರರು.
"ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘವು ಹಲವು ಬೇಡಿಕೆಗಳನ್ನು ಈಡೇರಿಸದ ಕುರಿತು ಮೇ 27(ಶುಕ್ರವಾರ) ಸಚಿವಾಲಯದ ಬಂದ್ಗೆ ಕರೆಯನ್ನು ನೀಡಿರುವುದು ಕಾನೂನುಬಾಹಿರವಾಗಿರುತ್ತದೆ. ಈ ಕ್ರಮವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಅಧಿಕಾರಿಗಳು/ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗತಕ್ಕದ್ದು. ಒಂದು ವೇಳೆ ಸಚಿವಾಲಯದ ಅಧಿಕಾರಿಗಳು/ ಸಿಬ್ಬಂದಿ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯದೆ ಕಚೇರಿಗೆ ಗೈರುಹಾಜರಾದರೇ ಅದನ್ನು ಲೆಕ್ಕಕ್ಕಿಲ್ಲದ ಅವಧಿ (Dies-non) ಎಂದು ಪರಿಗಣಿಸಲಾಗುವುದು," ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿರವಿಕುಮಾರ್ ಸುತ್ತೋಲೆಯನ್ನು ಹೊರಡಿಸಿದ್ದರು. ಆದರೆ ಸರ್ಕಾರ ಮುಖ್ಯಕಾರ್ಯದರ್ಶಿಯವರ ಸುತ್ತೊಲೆಗೆ ನೌಕರರು ಕ್ಯಾರೇ ಎಂದಿಲ್ಲ. ಸಚಿವಾಲಯಗಳು ಖಾಲಿ ಖಾಲಿಯಾಗಿದ್ದು ಬಂದ್ ಅನ್ನು ಯಶಸ್ವಿಗೊಳಿಸಿದ್ದಾರೆ.
Recommended Video