ಜಾಹೀರಾತಿನಲ್ಲಿ ನೆಹರು ಹೆಸರು ಕೈ ಬಿಟ್ಟ ಸರಕಾರ; ಜನರ ಆಕ್ರೋಶ
ಬೆಂಗಳೂರು, ಆಗಸ್ಟ್ 14: ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರಕಾರ ಭಾನುವಾರ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನೀಡಿರುವ ಜಾಹಿರಾತು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬಹುತೇಕ ಎಲ್ಲಾ ದಿನಪತ್ರಿಕೆಗಳಿಗೆ ಸರಕಾರ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಮತ್ತು ಪುಟ್ಟ ಟಿಪ್ಪಣಿ ನೀಡಿ ಜಾಹೀರಾತು ನೀಡಿದೆ. ಆದರೆ, ಜಾಹೀರಾತಿನಲ್ಲಿ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ, ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಭಾರೀ ಜೈಲು ಸೇರಿದ್ದ ಪಂಡಿತ್ ಜವಹರಲಾಲ್ ನೆಹರೂ ಅವರ ಪರಿಚಯ ನೀಡದೆ ಇರುವುದು ಮತ್ತು ಸಾವರ್ಕರ್ ಫೋಟೋವನ್ನು ಹಾಕಿ, 'ಕ್ರಾಂತಿಕಾರಿ' ಸಾವರ್ಕರ್ ಎಂದು ಪರಿಚಯ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
Breaking: ಜಾಹೀರಾತಲ್ಲಿ ನೆಹರು ಹೆಸರು ಕೈ ಬಿಟ್ಟ ಕರ್ನಾಟಕ ಸರ್ಕಾರ
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ಸರಕಾರವನ್ನು ಟೀಕೆ ಮಾಡಿದ್ದು, ನೆಹರು ಬಗೆಗಿನ ಬಿಜೆಪಿಯ ದ್ವೇಷ ಈ ರೀತಿ ಹೊರ ಬಂದಿದೆ ಎಂದಿದ್ದಾರೆ.
ಬ್ರಿಟಿಷ್ ಗಲ್ಲುಗಂಭಕ್ಕೆ ಕೊರಳೊಡ್ಡಿದ ಹುತಾತ್ಮರಿಲ್ಲ!
"ಕ್ಷಮೆ ಕೇಳಿ ಅಂಡಮಾನ್ ಜೈಲಿನಿಂದ ಹೊರಬಂದು ಸ್ವಾತಂತ್ರ್ಯ ಹೋರಾಟದಿಂದ ವಿಮುಖನಾದ ಸಾವರ್ಕರ್ ಪಟ ಇದೆ. ಅದೇ ಅಂಡಮಾನ್ ಜೈಲಿನಲ್ಲಿ ಒಂದು ದಿನವೂ ವಿಚಲಿತರಾಗದೆ, ಬ್ರಿಟಿಷ್ ಪ್ರಭುತ್ವಕ್ಕೆ ತಲೆಬಾಗದೆ ಕರಿನೀರು ಶಿಕ್ಷೆಯನ್ನು ಅನುಭವಿಸಿದ, ಅಲ್ಲಿಯೇ ಅಮರರಾದ ಪ್ರಮುಖ ಕ್ರಾಂತಿಕಾರಿಗಳ ಉಲ್ಲೇಖ ಇಲ್ಲ. ಬ್ರಿಟಿಷ್ ಗಲ್ಲುಗಂಭದಲ್ಲಿ ಕೊರಳೊಡ್ಡಿ ಹುತಾತ್ಮರಾದ ರಾಮ್ ಪ್ರಸಾದ್ ಭಿಸ್ಮಿಲ್, ಅಶ್ಫಖುಲ್ಲಾ ಖಾನ್ ಎಂಬ ಅಮರ ಕ್ರಾಂತಿಕಾರಿ ಜೋಡಿಗೂ ಇವರ "ಸರಕಾರಿ" ಜಾಹೀರಾತಿನಲ್ಲಿ ಜಾಗ ಇಲ್ಲ. ಇಂತಹ ಬಿಜೆಪಿ ಪಕ್ಷವನ್ನು "ದೇಶಭಕ್ತರ ಪಕ್ಷ" ಎಂದು ನಾವು ನಂಬ ಬೇಕು" ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಟೀಕಿಸಿದ್ದಾರೆ.
ಬೊಮ್ಮಾಯಿ ಅಧಿಕಾರಾವಧಿಯಲ್ಲಿ ಇಂಥ ಅಪಚಾರ ನಡೆಯಬಾರದಿತ್ತು
ಹಿರಿಯ ಪತ್ರಕರ್ತ ಸನತ್ಕುಮಾರ್ ಬೆಳಗಲಿಯವರು, "ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಧ್ಯಗಳಿಗೆ ನೀಡಿದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪಟ ಇಲ್ಲ. ಅಂದಿನ ಹೋರಾಟದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಸೆರೆಮನೆ ವಾಸ ಅನುಭವಿಸಿದ ಅಪಾರ ತ್ಯಾಗ ಮಾಡಿದ ನೆಹರೂ ಅವರನ್ನು ಕಡೆಗಣಿಸುವಷ್ಟು ಸಣ್ಣತನ ಒಳ್ಳೆಯದಲ್ಲ. ಬ್ರಿಟಿಷ್ ಸರಕಾರಕ್ಕೆ ಕ್ಷಮಾಪಣೆ ಕೇಳಿ ಜೈಲಿನಿಂದ ಹೊರಗೆ ಬಂದವರ ಪಟ ಹಾಕುವ ಸಿಎಂ ಬಸವರಾಜ ಬೊಮ್ಮಾಯಿಯವರೇ ನಿಮ್ಮ ಅಧಿಕಾರಾವಧಿಯಲ್ಲಿ ಇಂಥ ಅಪಚಾರ ನಡೆಯಬಾರದಿತ್ತು" ಎಂದಿದ್ದಾರೆ.
ಮನಸ್ಸುಗಳಲ್ಲಿ ಸ್ಥಿರಸ್ಥಾಯಿಯಾಗಿರುವ ನೆಹರೂ ಅಳಿಸಿ ಹೋಗರು!
ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಗುಲಾಬಿ ಬಿಳಿಮಲೆ, "ಬೊಮ್ಮಾಯಿಯವರೇ, ನೀವು ಈ ದೇಶವನ್ನು ಕಟ್ಟಿದ ಮಹಾ ಮುತ್ಸುದ್ದಿ ನೆಹರೂ ಅವರನ್ನು ನಿಮ್ಮ ಸರಕಾರದ ಜಾಹೀರಾತಿನಲ್ಲಿ ಮರೆ ಮಾಡಿದ್ದೀರಿ. ಏನು ಸಾಧನೆಯಾಯ್ತು..? ಕರ್ನಾಟಕದ ಜನತೆ ಇವತ್ತು ನೆಹರೂ ಅವರನ್ನು ಎಂದಿಲ್ಲದಷ್ಟು ನೆನಪು ಮಾಡಿಕೊಳ್ತಾ ಇದ್ದಾರೆ. ಸಾಮಾಜಿಕ ಜಾಲತಾಣಗಳು ಇಂದು ಅವರ ನೆನಪುಗಳೊಂದಿಗೇ ಬಣ್ಣ ಪಡೆದಿವೆ. ಜನರ ಮನಸಿನಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿ ಸ್ಥಿರಸ್ಥಾಯಿಯಾಗಿರುವ ನೆಹರೂ ಅವರನ್ನು ಕೇವಲ ನಿಮ್ಮ ಜಾಹೀರಾತು ಅಳಿಸಿಹಾಕದು ನೆನಪಿರಲಿ. ನಿಮ್ಮ ಸರಕಾರಕ್ಕೆ ಇದು ನೆಗೆಟಿವ್ ಪ್ರಚಾರ, ಮುಖ್ಯಮಂತ್ರಿಯಾಗಿ ನಿಮಗೂ ಎಂದೂ ಅಳಿಸಲಾಗದ ಕಪ್ಪುಚುಕ್ಕೆ' ಎಂದು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡುವುದು ಜವಾಬ್ದಾರಿ
ಚಿಂತಕ ರಾಜಾರಾಮ್ ತಲ್ಲೂರು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. "ಇಂದು ರಾಜ್ಯ ಸರ್ಕಾರದ ವತಿಯಿಂದ ಪ್ರಕಟಗೊಂಡಿರುವ (ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಡಿ ಬರುವ ಕರ್ನಾಟಕ ವಾರ್ತೆ ಈ ಜಾಹೀರಾತು ಪ್ರಕಟಿಸಿದೆ) ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯು ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರೂ, ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಗಳೂ ಆದ ಪಂಡಿತ್ ಜವಹರಲಾಲ್ ನೆಹರೂ ಅವರ (ಮತ್ತು ಅಲ್ಲಿ ಕಾಣಿಸಿಕೊಳ್ಳಲೇ ಬೇಕಾಗಿದ್ದ ಹಲವು ಮಂದಿ ಪ್ರಮುಖ ಹೋರಾಟಗಾರರ) ಚಿತ್ರವನ್ನು ಕೈಬಿಟ್ಟಿದೆ. ಇದು ಅಕಸ್ಮಾತ್ ಸಂಭವಿಸಿರುವ ಪ್ರಮಾದವೇ? ತಳಮಟ್ಟದಲ್ಲಿ ಸಂಭವಿಸಿರುವ ಕರ್ತವ್ಯ ಲೋಪವೇ? ಉದ್ದೇಶಪೂರ್ವಕ ಕೃತ್ಯವೇ? ಸೈದ್ಧಾಂತಿಕವಾದ ಕುತರ್ಕವೆ? ಅಥವಾ ನೆಹರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡದ್ದೇ "ಫೇಕ್ ಸುದ್ದಿಯೆ?" ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡುವುದು ತನ್ನ ನೈತಿಕ, ಸಾಮಾಜಿಕ, ರಾಷ್ಟ್ರೀಯ ಮತ್ತು ಸಾಂವಿಧಾನಿಕ ಜವಾಬ್ದಾರಿ ಎಂದು ಭಾವಿಸಬೇಕು. ದೇಶದ ಒಬ್ಬ ನಾಗರಿಕನಾಗಿ ನಾನು ಈ ಲೋಪಕ್ಕಾಗಿ ತಲೆತಗ್ಗಿಸುತ್ತೇನೆ" ಎಂದಿದ್ದಾರೆ.
ಇನ್ನು ಕರ್ನಾಟಕ ಕಾಂಗ್ರೆಸ್, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಜೈರಾಮ್ ರಮೇಶ್ ಸೇರಿದಂತೆ ಹಲವು ನಾಯಕರು ಬೊಮ್ಮಾಯಿ ಸರಕಾರದ ನಡೆಯನ್ನು ಖಂಡಿಸಿದ್ದಾರೆ.
ಸರಕಾರ ನೀಡಿರುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಲಾಲಾ ಲಜಪತ್ ರಾಯ್, ಬಾಲ ಗಂಗಾಧರ್ ತಿಲಕ್, ಬಿಪಿನ್ ಚಂದ್ರ ಪಾಲ್, ಡಾ.ಬಿ.ಆರ್.ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ಮೌಲಾನ ಅಬ್ದುಲ್ ಕಲಾಂ ಆಜಾದ್, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ಹಲವು ಹೋರಾಟಗಾರರ ಫೋಟೋಗಳ ಜೊತೆಗೆ ಕಿರುಪರಿಚಯವನ್ನು ನೀಡಲಾಗಿದೆ.
ಇದರ ಜೊತೆಗೆ ಸಾವರ್ಕರ್ ಫೋಟೋವನ್ನು ಹಾಕಿ, 'ಕ್ರಾಂತಿಕಾರಿ' ಸಾವರ್ಕರ್ ಎಂದು ಪರಿಚಯ ನೀಡಲಾಗಿದೆ. ಅವರನ್ನು ಮೊದಲ ಸಾಲಿನಲ್ಲಿ ಹಾಕಿ. ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಅವರ ಚಿತ್ರವನ್ನು ಎರಡನೇ ಸಾಲಿನಲ್ಲಿ ಹಾಕಲಾಗಿದೆ.