ಬಿಗ್ ಬ್ರೇಕಿಂಗ್ : ಉಕ್ಕಿನ ಸೇತುವೆ ಯೋಜನೆ ಕೈ ಬಿಟ್ಟ ಕರ್ನಾಟಕ ಸರ್ಕಾರ
ಬೆಂಗಳೂರು, ಜೂನ್ 18 : ವಿವಾದಕ್ಕೆ ಕಾರಣವಾಗಿದ್ದ ಉಕ್ಕಿನ ಸೇತುವೆ ಯೋಜನೆಯನ್ನು ಕೈ ಬಿಡಲಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಕರ್ನಾಟಕ ಹೈಕೋರ್ಟ್ಗೆ ಮಂಗಳವಾರ ಈ ಕುರಿತು ಅಧಿಕೃತ ಪ್ರಮಾಣ ಪತ್ರ ಸಲ್ಲಿಸಲಾಗಿದೆ.
ಕರ್ನಾಟಕ ಸರ್ಕಾರ ಮಂಗಳವಾರ ಈ ಕುರಿತು ಹೈಕೋರ್ಟ್ಗೆ ಮಾಹಿತಿ ನೀಡಿದೆ. ಬೆಂಗಳೂರಿನ ಬಸವೇಶ್ವರ ವೃತ್ತ-ಹೆಬ್ಬಾಳ ನಡುವಿನ ಉಕ್ಕಿನ ಸೇತುವೆ ಯೋಜನೆಯನ್ನು ಕೈ ಬಿಡಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ಹೇಳಿದೆ. ಇದರಿಂದಾಗಿ ಪರಿಸರವಾದಿಗಳ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.
ಉಕ್ಕಿನ ಸೇತುವೆ ನಿರ್ಮಾಣ ಸದ್ಯಕ್ಕಿಲ್ಲ: ಕರ್ನಾಟಕ ಸರ್ಕಾರ
ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸಂಘ ಸಂಸ್ಥೆಗಳು, ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೂ ಅರ್ಜಿಯನ್ನು ಸಲ್ಲಿಸಲಾಗಿತ್ತು. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮರಗಳ ಮಾರಣ ಹೋಮ ನಡೆಯುತ್ತಿತ್ತು. ಆದ್ದರಿಂದ, ಯೋಜನೆಗೆ ವಿರೋಧ ವ್ಯಕ್ತವಾಗಿತ್ತು.
ಉಕ್ಕಿನ ಸೇತುವೆ ನಿರ್ಮಾಣಕ್ಕೆ ಬ್ರೇಕ್
13/10/2016ರಲ್ಲಿ ಬಸವೇಶ್ವರ ವೃತ್ತದಿಂದ ಲೀ-ಮೆರಿಡಿಯನ್ ಹೋಟೆಲ್ ಹಾಗೂ ಮೇಖ್ರಿ ವೃತ್ತದ ಮೂಲಕ ಹೆಬ್ಬಾಳದ ಮೇಲು ಸೇತುವೆ ಸಂಪರ್ಕಿಸಲು ಆರು ಪಥದ ಮೇಲ್ಪಟ್ಟದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಿಂದ ಕೈಗೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು.
ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?
ಕೆಲವು ಸಂಘ ಸಂಸ್ಥೆಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮುಂದೆ ಈ ಯೋಜನೆಯನ್ನು ಪ್ರಶ್ನಿಸಿದ್ದವು. ನ್ಯಾಯಮಂಡಳಿ ಸದರಿ ಯೋಜನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಬಳಿಕ ಕರ್ನಾಟಕ ಹೈಕೋರ್ಟ್ಗೂ ಅರ್ಜಿ ಸಲ್ಲಿಸಲಾಗಿತ್ತು.
2/3/2017ರಲ್ಲಿ ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಬೆಂಗಳೂರು ನಗರದ ಶಾಸಕರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ವಿಳಂಬ ಆಗಿರುವುದರಿಂದ ಯೋಜನೆಯನ್ನು ಕೈ ಬಿಡುವುದು ಸೂಕ್ತವೆಂದು ಅಭಿಪ್ರಾಯ ಪಟ್ಟಿದ್ದರು.
ಸರ್ಕಾರ ಈ ಎಲ್ಲಾ ಪ್ರಸ್ತಾವನೆಯನ್ನು ಪರಿಶೀಲಿಸಿ ಬಸವೇಶ್ವರ ವೃತ್ತದಿಂದ ಹೆಬ್ಬಾಳ ತನಕ ನಿರ್ಮಿಸಲು ಉದ್ದೇಶಿಸಿದ್ದ ಆರು ಪಥದ ಮೇಲ್ಪಟ್ಟದ ರಸ್ತೆ ನಿರ್ಮಾಣ ಯೋಜನೆಯನ್ನು ಕೈ ಬಿಟ್ಟಿದೆ. ಇದರಿಂದಾಗಿ ಕರ್ನಾಟಕ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಲಾಗಿದೆ.