ಬೆಂಗಳೂರಲ್ಲಿ 60ಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿಗೆ ಮುಂದಾದ ಸರ್ಕಾರ
ಬೆಂಗಳೂರು ಜೂನ್ 26: ವರ್ಷಗಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬೆಂಗಳೂರಿನ ಕೆರೆಗಳಿಗೆ ಮತ್ತೆ ಮರು ಜೀವಬರುವ ಸಮಯ ಹತ್ತಿರವಾಗಿದೆ. ನಗರದ ಸುಮಾರು 60ಕ್ಕೂ ಅಧಿಕ ಕೆರೆಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಒಟ್ಟು 200 ಕೋಟಿ ರೂ. ಮೀಸಲಿಟ್ಟಿದೆ.
ರಾಜ್ಯ ಸರ್ಕಾರ ಅಮೃತ ನಗರೋತ್ಥಾನ ಯೋಜನೆಯಡಿ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿದೆ. ಈಗಾಗಲೇ ಅನುದಾನ ಪಡೆದು ಅಭಿವೃದ್ಧಿ ಕಾಣದ ಕೆರೆಗಳು ಸೇರಿದಂತೆ ಒಟ್ಟು ಸುಮಾರು 60ಕ್ಕೆ ಹೆಚ್ಚು ಕೆರೆಗಳನ್ನು ಪನಶ್ಚೇತನ ಯೋಜನೆ ವ್ಯಾಪ್ತಿಗೆ ತರಲಾಗಿದೆ.
ಬಿಬಿಎಂಪಿ ಇತಿಹಾಸ: ಬೆಂಗಳೂರು ಪುರಸಭೆ ಆಡಳಿತದ ಮಾಹಿತಿ
ರಾಜ್ಯ ಸರ್ಕಾರ ಅಮೃತ ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 6,000 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದರಲ್ಲಿ 3,218 ಕೋಟಿ ರೂ. ಅನ್ನು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನಿಗದಿಪಡಿಸಲಾಗಿದೆ.
ಉಳಿದ ಹಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಭಿವೃದ್ಧಿ ಕಾರ್ಯಗಳಿಗಾಗಿ ಹಂಚಿಕೆ ಮಾಡಲಾಗುತ್ತದೆ. ಭಾಗವಾಗೇ ಸರ್ಕಾರ 200 ಕೋಟಿ ರೂ. ಹಣದಲ್ಲಿ ಇದೀಗ ಕೆರೆಗಳ ಅಭಿವೃದ್ಧಿಗೆ ನಿರ್ಧಾರ ಕೈಗೊಂಡಿದೆ. ಇದು ಬಹುದಿನಗಳಿಂದ ಜಲಮೂಲಗಳ ಅಭಿವೃದ್ಧಿ ಸಮಗ್ರ ಯೋಜನೆ ರೂಪಿಸುವಂತೆ ಒತ್ತಾಯಿಸುತ್ತಿದ್ದ ತಜ್ಞರು ಮತ್ತು ಪರಿಸರವಾದಿಗಳ ಆಶಯ ಈಡೇರಿಕೆಗೆ ಪೂರಕವಾಗಿದೆ.
ಹೊರ ವಲಯದ ಕೆರೆಗಳು ಆಯ್ಕೆ
ರಾಜ್ಯ ಸರ್ಕಾರ ಪುನಶ್ಚೇತನಕ್ಕೆ ಆಯ್ಕೆ ಮಾಡಿಕೊಂಡಿರುವ ಕೆರೆಗಳ ಪೈಕಿ ಒಂದಷ್ಟು ಕೆರೆಗಳು ಬಹುತೇಕ ನಗರದ ಹೊರ ವಲಯದಲ್ಲಿವೆ. ಜುನ್ನಸಂದ್ರ, ವೆಂಕಟೇಶಪುರ, ಗುಂಜೂರುಪಾಳ್ಯದ ಕೆರೆಗೆ ಹೊರವಲಯ ವ್ಯಾಪ್ತಿಗೆ ಬರುತ್ತವೆ. ಬಿಬಿಎಂಪಿ ಈಗಾಗಲೇ ಮಲ್ಲತ್ತಹಳ್ಳಿ ಕೆರೆಗೆ ಮೀಸಲಿಟ್ಟಿದ್ದ 15 ಕೋಟಿ ರೂ. ಹಣದಲ್ಲಿ ತ್ಯಾಜ್ಯ ತಡೆಗೋಡೆಗೆ ನಿರ್ಮಾಣ ಮತ್ತಿತರ ಕೆಲಸಗಳಿಗೆ ಬಳಕೆಯಾಗಿದೆ. ಇದೇ ರೀತಿ ಈ ಹಿಂದೆ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಂಡು ಪ್ರಗತಿ ಕಾಣದ ಒಂದಷ್ಟು ಕೆರೆಗಳು ಸೇರಿಕೊಂಡಿವೆ ಎನ್ನಲಾಗಿದೆ.
ಕೆರೆಗಳ ಅಭಿವೃದ್ಧಿ ಹೇಗೆ?
ಖಾಲಿ ಇರುವ ಕೆರೆಗಳ ಹೂಳು ಎತ್ತುವುದು, ಒಳಹರಿವು, ಕೆರೆ ಸುತ್ತಮುತ್ತಲಿನ ಮಾರ್ಗ ಸ್ವಚ್ಛತೆ, ಕಸ ಕಡ್ಡಿ, ತ್ಯಾಜ್ಯ ನೀರು ಕೆರೆ ಸೇರಿದಂತೆ ತಡೆಗೋಡೆ ನಿರ್ಮಾಣ, ಸುತ್ತಮುತ್ತಲೂ ತಂತಿಬೇಲಿ, ಕೆರೆಗೆ ಸೇರುತ್ತಿದ್ದ ತ್ಯಾಜ್ಯ ನೀರಿನ ಹಾದಿ ಬೇರೆಡೆಗೆ ತಿರುಗಿಸಿ ಸುಗಮವಾಗಿ ಹರಿಯುವಂತೆ ಮಾಡುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆದಷ್ಟು ಶೀಘ್ರವೇ ನಗರದ ಕೆರೆಗಳ ಭಾಗದಲ್ಲಿ ಆರಂಭಗೊಳ್ಳಲಿವೆ ಎಂದು ತಿಳಿದು ಬಂದಿದೆ.
ಪುನಶ್ಚೇತನಗೊಳ್ಳಲಿರುವ ಕೆರೆಗಳು ಯಾವುವು
ಬೇಗೂರು, ದೊಡ್ಡಾನೆಕ್ಕುಂದಿ, ತಿಮ್ಮೇನಹಳ್ಳಿ, ವೆಂಕಟೇಶಪುರ, ಯಲಹಂಕ, ಭಟ್ಟರಹಳ್ಳಿ, ಕವಡೇನಹಳ್ಳಿ, ಜಕ್ಕೂರು, ಮಾವಿನಕೆರೆ, ಗುಂಜೂರು, ಆವಲಹಳ್ಳಿ, ಮಲ್ಲತ್ತಹಳ್ಳಿ, ಸಾರಕ್ಕಿ, ಸ್ಯಾಂಕಿಟ್ಯಾಂಕ್, ಪರಪ್ಪನ ಅಗ್ರಹಾರ, ಉಲ್ಲಾಳು, ಹೊರಮಾವು, ಬಸಾಪುರ, ಅಬ್ಬಿಗೆರೆ, ಗೊಟ್ಟಿಗೆರೆ, ಹೊಸಕೆರೆ, ಕೋಣಪ್ಪನ ಅಗ್ರಹಾರ, ಕಾಚರಕನಹಳ್ಳಿ, ಗುಡ್ಡೆಕರೆ, ಶಿವನಹಳ್ಳಿ, ದೊಡ್ಡಕಲ್ಲಸಂದ್ರ ಸೇರಿದಂತೆ ವಿವಿಧ ಒಟ್ಟು 60ಕ್ಕೂ ಹೆಚ್ಚು ಕೆರೆಗಳು ಅಂದಾಜು 200ಕೋಟಿ ಹಣದಲ್ಲಿ ಅಭಿವೃದ್ಧಿ ಕಾಣಲಿವೆ ಎಂದು ತಿಳಿದುಬಂದಿದೆ.
ಸರ್ಕಾರದ ಉದ್ದೇಶ ಸಾಕಾರವಾಗಲಿ
ಸರ್ಕಾರಗಳು ಅಭಿವೃದ್ಧಿ ಉದ್ದೇಶದಿಂದ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡುತ್ತದೆ. ನಂತರ ಯೋಜನೆಗಳತ್ತ ತಿರುಗಿ ಸಹ ಉದಾಹರಣೆಗಳೂ ಇವೆ. ಕೆಲ ಯೋಜನೆಗಳು ಘೋಷಣೆಗೆ ಮಾತ್ರ ಸಿಮೀತವಾಗಿದೆ. ಸದ್ಯ ಅಭಿವೃದ್ಧಿಗೆ ಒಳಪಡಲು ಸಿದ್ಧವಾಗಿರುವ ಕೆರೆಗಳ ಪೈಕಿ ಅನೇಕವುಗಳನ್ನು ಈ ಹಿಂದೆ ಅಭಿವೃದ್ಧಿ ಪಡಿಸುತ್ತೇವೆ ಎಂದು ಘೋಷಣೆ ಮಾಡಿದವುಗಳೇ ಆಗಿವೆ. ಆದರೆ ಮಾಡಿರಲಿಲ್ಲ ಕೆಲವು ಕೆರೆ ಅಭಿವೃದ್ಧಿಯಾಗಿದ್ದರೂ ನಿರ್ವಹಣೆ ಇಲ್ಲದೇ ಮತ್ತದೇ ಸ್ಥಿತಿಗೆ ಮರಳಿವೆ. ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಹಣ ಪೋಲು ಮಾಡದೇ ಸೂಕ್ತ ಉದ್ದೇಶಕ್ಕೆ ಖರ್ಚು ಮಾಡಬೇಕು ಎಂದು ತಜ್ಞರು ಮತ್ತು ನಗರದ ಸ್ವಯಂಸೇವಕ ಸಂಘದ ಸದಸ್ಯರೊಬ್ಬರು ತಿಳಿಸಿದ್ದಾರೆ.