ಬೆಂಗಳೂರಿನ ESI ಆಸ್ಪತ್ರೆಯಲ್ಲೂ ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ
ಬೆಂಗಳೂರು, ಜುಲೈ.03: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 889 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ. ರಾಜ್ಯ ರಾಜಧಾನಿವೊಂದರಲ್ಲೇ ಬರೋಬ್ಬರಿ 6179 ಮಂದಿಗೆ ಸೋಂಕು ಅಂಟಿಕೊಂಡಿದೆ. ಇಂದು ನಗರದಲ್ಲಿ ಮಹಾಮಾರಿಗೆ ಮೂವರು ಬಲಿಯಾಗಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.
ಕೊವಿಡ್-19 ಸೋಂಕಿತರು ಮತ್ತು ಸಾವಿನ ಪ್ರಮಾಣವನ್ನು ಗಮನಿಸಿದ ರಾಜ್ಯ ಸರ್ಕಾರವು ನಗರದ ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಮುಂದಾಗಿದೆ. ಇಂದಿರಾನಗರದ ಇಎಸ್ಐ ಆಸ್ಪತ್ರೆಯನ್ನು ಸಹ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಬಿಬಿಎಂಪಿಯ 15 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು
ಶುಕ್ರವಾರ ಬೆಳ್ಳಂಬೆಳಗ್ಗೆ ಸ್ವತಃ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಇಂದಿರಾ ನಗರದ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಮೂಲಭೂತ ಸೌಕರ್ಯ ಮತ್ತು ಸ್ವಚ್ಛತೆಯ ಕುರಿತು ವೀಕ್ಷಿಸಿದರು. ESI ಆಸ್ಪತ್ರೆಯ ವೈದ್ಯರೊಂದಿಗೆ ಸಭೆ ಮಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೊರೊನಾವೈರಸ್ ಪೀಡಿತ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಇರುವ ಅವಕಾಶಗಳ ಕುರಿತು ಚರ್ಚೆ ನಡೆಸಿದರು.
ಇಎಸ್ಐ ಆಸ್ಪತ್ರೆಯಲ್ಲಿ 300 ಬೆಡ್ ಹಾಕಲು ತೀರ್ಮಾನ:
ಬೆಂಗಳೂರು ಇಂದಿರಾ ನಗರದ ಇಎಸ್ಐ ಆಸ್ಪತ್ರೆಯಲ್ಲಿ 300 ಬೆಡ್ ಗಳನ್ನು ಹಾಕಲು ರಾಜ್ಯ ಸರ್ಕಾರವು ತಿರ್ಮಾನಿಸಿದೆ. ಬೆಡ್ ಹಾಕುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವೈದ್ಯರ ಜೊತೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾತುಕತೆ ನಡೆಸಿದರು. ಆಸ್ಪತ್ರೆಯಲ್ಲಿರುವ 66 ವೈದ್ಯರನ್ನು ಬಳಕೆ ಮಾಡಿಕೊಳ್ಳುವ ಕುರಿತು ಸಮಾಲೋಚನೆ ನಡೆಸಿದರು. ಬಳಿಕ ಶೀಘ್ರದಲ್ಲೇ ಇಂದಿರಾನಗರ ESI ಆಸ್ಪತ್ರೆಯಲ್ಲಿ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ತಿರ್ಮಾನಿಸುವುದಾಗಿ ತಿಳಿಸಿದರು.