ಮೋಡ ಬಿತ್ತನೆಗೆ ಚಾಲನೆ; ಮೊದಲ ಫಲಾನುಭವಿ 'ರಾಮನಗರ' ಜಿಲ್ಲೆ
ಕರ್ನಾಟಕ ಸರ್ಕಾರದಿಂದ ಮೋಡ ಬಿತ್ತನೆ ಕಾರ್ಯ ಆರಂಭ. ಜಕ್ಕೂರು ವಿಮಾನ ನಿಲ್ದಾಣದಿಂದ ಕಾರ್ಯಕ್ಕೆ ಚಾಲನೆ. ಅಮೆರಿಕದಿಂದ ಬಂದಿದ್ದ ತಜ್ಞರುಳ್ಳ ವಿಮಾನದಿಂದ ಮೋಡ ಬಿತ್ತನೆ. ರಾಮನಗರ ಜಿಲ್ಲೆ ಮೊದಲ ಫಲಾನುಭವಿ.
ಬೆಂಗಳೂರು, ಆಗಸ್ಟ್ 21: ಬೆಂಗಳೂರಿನಲ್ಲಿ ಮೋಡ ಬಿತ್ತನೆ ಕಾರ್ಯ ಸೋಮವಾರ (ಆಗಸ್ಟ್ 21) ಮಧ್ಯಾಹ್ನ ಆರಂಭವಾಯಿತು. ಜಕ್ಕೂರು ವಿಮಾನ ಏರೋಡ್ರಂ ನಲ್ಲಿ ಅಮೆರಿಕದಿಂದ ಬಂದಿರುವ ವಿಶೇಷ ತಜ್ಞರುಳ್ಳ ವಿಮಾನದ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮೋಡ ಬಿತ್ತನೆಗೂ ಮೊದಲು ಸಚಿವರಾದ ಎಚ್.ಕೆ. ಪಾಟೀಲ್, ಸೀತಾರಾಂ, ಕೃಷ್ಣ ಭೈರೇಗೌಡ ವಿಮಾನದೊಳಗೆ ಪರಿವೀಕ್ಷಣೆ ನಡೆಸಿದರು. ಮೋಡಗಳ ಮೇಲೆ ಸಿಲ್ವರ್ ಅಯೋಡಿನ್, ಪೊಟ್ಯಾಸಿಯಂ ಐಯೋಡೈಡ್ ಹಾಗೂ ಡ್ರೈ ಐಸ್ ಗಳನ್ನು ಈ ಕಾರ್ಯಾಚರಣೆಗೆ ಸಾಮಾನ್ಯವಾಗಿ ಬಳಸಲಾಗುತ್ತದೆ.
ಮೋಡಬಿತ್ತನೆ; ಅವಧಿಗೆ ಮುನ್ನ ಹೆರಿಗೆ ಮಾಡಿಸಿದಂತೆ!
ಆರಂಭಿಕ ಹೆಜ್ಜೆಯಾಗಿ, ರಾಮನಗರದ ಜಿಲ್ಲೆಗಳಲ್ಲಿ ಈ ಮೋಡ ಬಿತ್ತನೆ ಮಾಡಲಾಗುತ್ತಿದೆ. ಬಿತ್ತನೆಯಾದ ಅರ್ಧ ಗಂಟೆಯಲ್ಲೇ ಮಳೆಯೂ ಬೀಳಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಗೆ ಕಳೆದ ವಾರ ಅಂತಿಮ ಸ್ಪರ್ಶ ಸಿಕ್ಕಿತ್ತು. ಅಮೆರಿಕದಿಂದ ಬಂದ ವಿಶೇಷವಾದ ಮೋಡ ಬಿತ್ತುವ ವಿಮಾನವೊಂದು ಜಕ್ಕೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.
ಜಿಕೆವಿಕೆಯಲ್ಲಿ ನಿರಂತರ ಅಧ್ಯಯನ
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ (ಆರ್ ಡಿಪಿಆರ್) ವತಿಯಿಂದ ಈ ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ. ಮೋಡ ಬಿತ್ತನೆಗೆ ಸೂಕ್ತ ಸಮಯವನ್ನು ಲೆಕ್ಕ ಹಾಕಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಿರಂತರ ಅಧ್ಯಯನ ನಡೆಸಲಾಗಿತ್ತು.
ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಿಕೆ
ಈ ಮೊದಲು ಆಗಸ್ಟ್ 18ರಂದು ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿತ್ತಾದರೂ, ಆನಂತರ ಕೆಲವಾರು ತಾಂತ್ರಿಕ ಕಾರಣಗಳಿಂದಾಗಿ ಈ ಯೋಜನೆಯನ್ನು ಆಗಸ್ಟ್ 21ಕ್ಕೆ ಮುಂದೂಡಲಾಗಿತ್ತು. ಅದರಿಂದಾಗಿ, ಈಗ ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಸಚಿವರು ಹೇಳಿದ್ದೇನು?
ಈ ಬಗ್ಗೆ ವಿವರಣೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ. ಪಾಟೀಲ್, ''ಹವಾಮಾನ ರೇಡಾರ್ ಗಳು ನೀಡಿದ ಮಾಹಿತಿಯ ಮೇರೆಗೆ ಆಗಸ್ಟ್ 21ರ ದಿನವನ್ನು ನಾವು ಮೋಡ ಬಿತ್ತನೆಗೆ ಆಯ್ಕೆ ಮಾಡಿಕೊಂಡೆವು. ಈ ಯೋಜನೆ ಫಲಕಾರಿಯಾಗುವುದೆಂಬ ವಿಶ್ವಾಸವಿದೆ'' ಎಂದರು.
ಎಸ್ಸೆಂ ಕೃಷ್ಣ ಆಳ್ವಿಕೆಯ ನೆನಪು
ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ''ಈ ಹಿಂದೆ 2003ರಲ್ಲಿ, ಅಂದಿನ ಎಸ್.ಎಂ. ಕೃಷ್ಣ ಸರ್ಕಾರ, 83 ದಿನಗಳ ಕಾಲ ಸತತವಾಗಿ ಮೋಡ ಬಿತ್ತನೆ ಮಾಡಿತ್ತು. ಇದರಿಂದ ಉತ್ತಮ ಮಳೆಯೂ ಆಗಿತ್ತು'' ಎಂದು ತಿಳಿಸಿದರು.