ವಿಧಾನಸೌಧದ ಆವರಣದಲ್ಲಿ ಮಾಧ್ಯಮ ನಿರ್ಬಂಧ ಆದೇಶ ವಾಪಸ್
ಬೆಂಗಳೂರು, ಜುಲೈ 21: ವಿಧಾನಸೌಧ ಆವರಣದಲ್ಲಿ ಚಿತ್ರೀರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರಿಗೆ ಹೇರಿದ್ದ ನಿರ್ಬಂಧವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ವಿಧಾನಸೌಧದ ಕಾರಿಡಾರ್ಗಳಲ್ಲಿ ಪತ್ರಿಕಾ ಛಾಯಾಗ್ರಾಹಕರು ಛಾಯಾಗ್ರಹಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ವಿಡಿಯೊ ಚಿತ್ರೀಕರಣ ನಡೆಸುವುದನ್ನು ನಿರ್ಬಂಧಿಸಿ ಈ ಹಿಂದೆ ಸುತ್ತೋಲೆ ಹೊರಡಿಸಲಾಗಿತ್ತು.
ಆಗಸ್ಟ್ 15ರವರೆಗೂ ಕೆಂಪುಕೋಟೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧ
ಸುಗಮ ಚಲನೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಮುಖ್ಯಮಂತ್ರಿಯವರು ಮತ್ತು ಇತರ ಸಚಿವರಿಂದ ಹೇಳಿಕೆ ಪಡೆಯಲು ವಿಧಾನಸೌಧದ ಕೆಂಗಲ್ ದ್ವಾರದ ಬಳಿ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಸಚಿವಾಲಯದ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಕಾರಿಡಾರ್ಗಳಲ್ಲಿ ವಿಡಿಯೊ ಚಿತ್ರೀಕರಣ ಮತ್ತು ಪತ್ರಿಕಾ ಛಾಯಾಗ್ರಹಣ ಮಾಡುತ್ತಿದ್ದು, ಇದರಿಂದ ಹಲವಾರು ಬಾರಿ ಗಣ್ಯ ವ್ಯಕ್ತಿಗಳ ಸುಗಮ ಚಲನವಲನಕ್ಕೆ ಅಡ್ಡಿ ಉಂಟಾಗುತ್ತಿದೆ ಎಂದು ಸುತ್ತೋಲೆಯಲ್ಲಿ ಸಮರ್ಥನೆ ನೀಡಲಾಗಿತ್ತು.
ಈ ಆದೇಶ ಹಿಂಪಡೆಯದಿದ್ದರೆ ಎಲ್ಲಾ ಸರ್ಕಾರಿ ಕಾರ್ಯಕ್ರಮ ಹಾಗೂ ಮುಖ್ಯಮಂತ್ರಿಗಳ ಕಾರ್ಯಕ್ರಮ ಬಾಯ್ಕಾಟ್ ಮಾಡಲು ಮಾಧ್ಯಮ ಪ್ರತಿನಿಧಿಗಳು ತೀರ್ಮಾನಿಸಿದ್ದರು. ಆ ಹಿನ್ನೆಲೆಯಲ್ಲಿ, ಇದೀಗ ವಿಧಾನಸೌಧದ ಕಾರಿಡಾರ್ನಲ್ಲಿ ಮಾಧ್ಯಮ ನಿರ್ಬಂಧ ಆದೇಶ ಹಿಂಪಡೆಯಲು ಮುಖ್ಯಮಂತ್ರಿ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಇದಕ್ಕೂ ಮೊದಲು, ಇಂದು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪೊಲೀಸರಿಂದ ಅಡ್ಡಿ ಆಗಿತ್ತು. ಸಿಎಂ ಸಭೆ ನಡೆಯುವ ಜಾಗದಲ್ಲಿ ಪೊಲೀಸರಿಂದ ಅಡ್ಡಿಯಾಗಿತ್ತು. ಮಾಧ್ಯಮದವರನ್ನು ಪ್ರೆಸ್ ರೂಂ ಒಳಗೆ ಪೊಲೀಸರು ತಳ್ಳಿದ್ದರು. ಬಲವಂತವಾಗಿ ಮಾಧ್ಯಮದವರನ್ನು ತಳ್ಳಿದ್ದರು.
ಕಳೆದ ವಾರ ಮಾಧ್ಯಮಗಳಿಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಕಾರಿಡಾರ್ಗಳಲ್ಲಿ ಮಾಧ್ಯಮದವರು ಓಡಾಡದಂತೆ ಆದೇಶ ನೀಡಲಾಗಿತ್ತು. ಸಿಎಂ ಅನುಮೋದನೆ ಮೇರೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಕೇವಲ ಕೆಂಗಲ್ ಗೇಟ್ನಲ್ಲಿ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಬಳಿಕ ಇದೀಗ ಮಾಧ್ಯಮ ನಿರ್ಬಂಧ ಆದೇಶ ಹಿಂಪಡೆಯಲಾಗಿದೆ.
Recommended Video