ಬಿಬಿಎಂಪಿ ಆಸ್ತಿಗಳ ಲೆಕ್ಕ ಕೇಳಿದ ಸಿಎಂ ಯಡಿಯೂರಪ್ಪ
ಬೆಂಗಳೂರು, ಜನವರಿ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಸ್ತಿಗಳನ್ನ ಕೊಳ್ಳೆ ಹೊಡೆಯಲು ಮುಂದಾಗಿದ್ದ ಸಂಘ-ಸಂಸ್ಥೆಗಳ ವಿರುದ್ಧ, ರಾಜ್ಯ ಸರ್ಕಾರ ಸಮರ ಸಾರಲು ಮುಂದಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ತಿಗಳನ್ನ ಯಾರಾರಿಗೆ ಗುತ್ತಿಗೆ ಮತ್ತು ಬಾಡಿಗೆ ನೀಡಲಾಗಿದೆ? ಎಷ್ಟು ಆಸ್ತಿಗಳನ್ನ ನೀಡಿದೆ ? ಎನ್ನುವ ಮಾಹಿತಿ ಸಂಗ್ರಹಿಸಿ ವರದಿ ಕಳಿಸುವಂತೆ ಸ್ವತಃ ಮುಖ್ಯಮಂತ್ರಿ ಅವರೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಬಿಬಿಎಂಪಿ ಚುನಾವಣಾ ತಯಾರಿಗಾಗಿ ಎಎಪಿ ಅಧ್ಯಕ್ಷರ ನೇಮಕ
ಸಿಎಂ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ...
460 ಆಸ್ತಿಗಳ ಪಟ್ಟಿ
ಕಳೆದ ಹಲವು ವರ್ಷಗಳಿಂದ ಸಂಘ-ಸಂಸ್ಥೆಗಳಿಗೆ ವಿವಿಧ ಆಧಾರದ ಮೇಲೆ ಗುತ್ತಿಗೆ, ಬಾಡಿಗೆ ನೀಡಲಾಗಿದ್ದು, ಈವರೆಗೂ ಪಾಲಿಕೆ ಅಧಿಕಾರಿಗಳು 460 ಆಸ್ತಿಗಳ ಪಟ್ಟಿಯನ್ನು ತಯಾರಿಸಿದ್ದಾರೆ. ಪ್ರಮುಖವಾಗಿ ರೇಸ್ ಕೋರ್ಸ್, ಬೆಂಗಳೂರು ಕ್ಲಬ್, ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್, ಸೆಂಟ್ ಜೋಸೆಫ್ ಕಾಲೇಜು, ಯು.ಬಿ ಸಿಟಿ ಸೇರಿದಂತೆ ಹಲವು ಕಟ್ಟಡಗಳಿವೆ.
ಆದಷ್ಟು ಬೇಗ ವರದಿ ನೀಡುತ್ತೇವೆ
ಬಿಬಿಎಂಪಿಗೆ ಬರಬೇಕಿರೋ ಬಾಡಿಗೆ, ಲೀಸ್, ಬಾಕಿ ಬಗ್ಗೆ, ಹದಿನೈದು ದಿನಗಳೊಳಗೆ ವರದಿ ನೀಡುವಂತೆ ಸಿಎಂ ಸೂಚಿಸಿದ್ದು ಬಿಬಿಎಂಪಿಯಲ್ಲಿ ಹೊಸ ಸಂಚಲನ ಹುಟ್ಟಿಸಿದೆ. ವರದಿ ನೀಡಲು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಯಾರಿ ನಡೆಸಿದ್ದಾರೆ. ಸಿಎಂ ಪತ್ರ ಕೈ ಸೇರಿದ್ದು ಈ ಬಗ್ಗೆ ಆದಷ್ಟು ಬೇಗ ವರದಿ ನೀಡುತ್ತೇವೆ ಎಂದು ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ಹಲವರ ಸ್ವಾಗತ
"ಬಿಬಿಎಂಪಿಯಿಂದ ಗುತ್ತಿಗೆ ಹಾಗೂ ಬಾಡಿಗೆಗೆ ಪಡೆದಿರುವ ಆಸ್ತಿಗಳನ್ನ ಅನೇಕ ಜನರು ದುರುಪಯೋಗ ಪಡಿಸಿಕೊಂಡಿದ್ದಾರೆ. ಕೆಲವರು ಇಡೀ ಆಸ್ತಿಯನ್ನ ಕಬಳಿಸಿಕೊಂಡಿದ್ರೆ, ಮತ್ತೆ ಹಲವರು ಸಬ್ ಲೀಸ್ ನೀಡಿದ್ದಾರೆ. ಪಾಲಿಕೆಯ ಸಾವಿರಾರು ಆಸ್ತಿಗಳನ್ನ ಅಧಿಕಾರಿಗಳೇ ಶಾಮೀಲಾಗಿ, ಮಾಲೀಕರಿಗೆ ಮಾಡಿಕೊಟ್ಟಿರೋ ಉದಾಹರಣೆಗಳಿವೆ. ಬಿಬಿಎಂಪಿಯಲ್ಲಿ ಕೆಲ ಕಡತಗಳನ್ನ ಬಚ್ಚಿಟ್ಟಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಸ್ತಿಗಳ ಸಂಪೂರ್ಣ ಮಾಹಿತಿ ಲಭ್ಯವಿದೆ. ಅಲ್ಲಿಂದಲೇ ತೆಗೆದು ಸರ್ಕಾರಿ ಆಸ್ತಿಗಳನ್ನ ಉಳಿಸಬೇಕು'' ಎಂದು ಸಿಎಂ ಆದೇಶಕ್ಕೆ ಸಾಮಾಜಿಕ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ.
ಕುತೂಹಲ ಮೂಡಿಸಿದೆ
ಸರ್ಕಾರಿ ಆಸ್ತಿಯನ್ನ ಬಾಡಿಗೆ ಅಥವಾ ಲೀಸ್ಗೆ ಪಡೆದು, ಕೊನೆಗೆ ಸರ್ಕಾರಿ ಆಸ್ತಿಯನ್ನೇ ಕಬಳಿಸೋ ಅನೇಕ ಸಂಘ-ಸಂಸ್ಥೆಗಳ ಬಣ್ಣ ಇದೀಗ ಬಯಲಾಗುತ್ತಿದೆ. ಯಾರು ಎಷ್ಟು ಬಾಡಿಗೆ ಉಳಿಸಿಕೊಂಡಿದ್ದಾರೆ, ಬೇರೆ ಯಾರ್ಯಾರಿಗೆ ಸಬ್ ಲೀಸ್ ನೀಡಿದ್ದಾರೆನ್ನೋ ಸಮಗ್ರ ಮಾಹಿತಿ ಸಿಎಂ ಕೈ ಸೇರಲಿದ್ದು, ಸರ್ಕಾರಿ ಭೂಮಿ ಕೊಳ್ಳೆ ಹೊಡೆಯೋರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.